ಜನರಿಗೆ ಅಧಿಕ ಲಾಭದ ಆಮಿಷವೊಡ್ಡಿ ಮೋಸ; ಇಡಿಯಿಂದ ಆರೋಪಿ ಬಂಧನ
ಬೆಂಗಳೂರು, ನ.18: ಅಧಿಕ ಆದಾಯ ನೀಡುವ ಭರವಸೆಯೊಂದಿಗೆ ಠೇವಣಿದಾರರಿಗೆ ಆಮಿಷವೊಡ್ಡಿ ಅಪಾರ ಪ್ರಮಾಣದ ಹಣವನ್ನು ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಆರೋಪಿಯೊಬ್ಬರನ್ನು ಬಂಧಿಸಿದೆ.
ಇಂಜಾಜ್ ಇಂಟರ್ನ್ಯಾಷನಲ್ ಪಾಲುದಾರಿಕೆ ಸಂಸ್ಥೆಯ ಮಿಸ್ಬಾಹುದ್ದೀನ್ ಎಸ್ ಎಂಬುವವರನ್ನು ಬಂಧಿಸಲಾಗಿದೆ.
ಆರೋಪಿ ಮಿಸ್ಬಾಹುದ್ದೀನ್ರನ್ನು ಬೆಂಗಳೂರಿನ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್ 19 ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿದೆ.
Breaking; ಪಿಎಸ್ಐ ನೇಮಕಾತಿ ಹಗರಣ, 4ನೇ ಬಾರಿ ಅಮೃತ್ ಪೌಲ್ ವಿಚಾರಣೆ
ಅಕ್ರಮ ಹಣ ವರ್ಗಾವಣೆ ಮತ್ತು ಇತರ ಆರ್ಥಿಕ ಅಪರಾಧಗಳ ತನಿಖೆ ನಡೆಸುತ್ತಿರುವ ಕೇಂದ್ರೀಯ ಸಂಸ್ಥೆಯಾದ ಜಾರಿ ನಿರ್ದೇಶನಾಲಯವು ಬೆಂಗಳೂರಿನಲ್ಲಿ ಇಂಜಾಜ್ ಇಂಟರ್ನ್ಯಾಶನಲ್ ಮತ್ತು ಸಂಬಂಧಿತ ಗುಂಪಿನ ವಿರುದ್ಧ ದಾಖಲಾದ ಎಫ್ಐಆರ್ ಆಧಾರದ ಮೇಲೆ ಪ್ರಕರಣದಲ್ಲಿ ತನಿಖೆಯನ್ನು ಪ್ರಾರಂಭಿಸಿದೆ.
ಬೆಂಗಳೂರು ನಗರದ ವಿಲ್ಸನ್ ಗಾರ್ಡನ್ ಪೋಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ, ಪ್ರಶಸ್ತಿ ಚಿಟ್ಗಳು ಮತ್ತು ಹಣ ಚಲಾವಣೆ ಯೋಜನೆಗಳು (ನಿಷೇಧಿಸುವುದು) ಕಾಯಿದೆ, 1978, ಚಿಟ್ ಫಂಡ್ಸ್ ಆಕ್ಟ್- 1982 ಮತ್ತು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 420 ರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ತನಿಖೆಯ ಸಮಯದಲ್ಲಿ, ಇಂಜಾಜ್ ಇಂಟರ್ನ್ಯಾಷನಲ್ ಒಂದು ಪಾಲುದಾರಿಕೆ ಸಂಸ್ಥೆಯಾಗಿದ್ದು, ಸುಹೇಲ್ ಅಹಮದ್ ಷರೀಫ್ ಮತ್ತು ಮಿಸ್ಬಾಹುದ್ದೀನ್ ಎಸ್ ಇಬ್ಬರು ಇದರ ಪಾಲುದಾರರು ಎಂದು ವರದಿಯಾಗಿದೆ.
ಎಫ್ಐಆರ್ ಪ್ರಕಾರ, ಇಂಜಾಜ್ ಇಂಟರ್ನ್ಯಾಷನಲ್ 2016 ರಿಂದ ಹೆಚ್ಚಿನ ಆದಾಯದ ಭರವಸೆಯೊಂದಿಗೆ ಠೇವಣಿದಾರರನ್ನು ಆಕರ್ಷಿಸುವ ಮೂಲಕ ಹೂಡಿಕೆ ಯೋಜನೆಗಳನ್ನು ನಡೆಸುತ್ತಿದೆ ಎಂದು ಆರೋಪಿಸಲಾಗಿದೆ.
ಸಂಸ್ಥೆಯು ಈವರೆಗೆ 250 ಕೋಟಿ ರೂ.ಗಿಂತ ಹೆಚ್ಚಿನ ಠೇವಣಿಗಳನ್ನು ಪಡೆದು, ಜನರನ್ನು ವಂಚಿಸಿದೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ.
ಹಲವು ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ರವಾನಿಸಿದ್ದು, ಯಾವುದೇ ITR ರಿಟರ್ನ್ಸ್ ಸಲ್ಲಿಸಿಲ್ಲ. ಜೊತೆಗೆ ಯಾವುದೇ ಆಡಿಟ್ ಮಾಡಿಸಿಲ್ಲ ಎಂಬುದು ತಿಳಿದು ಬಂದಿದೆ.
ಇನ್ಜಾಜ್ ಇಂಟರ್ನ್ಯಾಷನಲ್ ಹೂಡಿಕೆದಾರರಿಂದ ಭಾರಿ ಹಣವನ್ನು ಸಂಗ್ರಹಿಸಿದೆ. ಅದರ ಪಾಲುದಾರರು ಮತ್ತು ಸಂಬಂಧಿತ ಘಟಕವನ್ನು ಒಳಗೊಂಡಂತೆ ಹಲವಾರು ವ್ಯಕ್ತಿಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.