3800 ಪೊಲೀಸರಿಗೆ ವೈದ್ಯಕೀಯ ಸಲಕರಣೆ ನೀಡಿದ ಎಂಬಸ್ಸಿ ಗ್ರೂಪ್
ಬೆಂಗಳೂರು, ಮೇ 27: ಭಾರತದ ಅಗ್ರಗಣ್ಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಸ್ಥೆಯಾದ ಎಂಬಸ್ಸಿ ಗ್ರೂಪ್, ಕರ್ನಾಟಕದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ 15 ಲಕ್ಷ ರೂಪಾಯಿ ವೆಚ್ಚದಲ್ಲಿ 4500 ಮುಖದ ರಕ್ಷಾಕವಚ (ಫೇಸ್ಶೀಲ್ಡ್) ಮತ್ತು 8000 ಮರುಬಳಕೆಯ ಕೈಗವಸುಗಳನ್ನು ಸಂಚಾರಿ ಪೊಲೀಸ್ ಸಿಬ್ಬಂದಿಗಾಗಿ ಕೊಡುಗೆ ನೀಡುವ ಮೂಲಕ ಬೆಂಗಳೂರು ಪೊಲೀಸರಿಗೆ ನೆರವು ಮುಂದುವರಿಸಿದೆ. ಅತ್ಯಂತ ಪ್ರಮುಖವಾದ ಸುರಕ್ಷಾ ಸಾಧನಗಳನ್ನು ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಹಸ್ತಾಂತರಿಸಲಾಯಿತು.
ನಗರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ದೊಡ್ಡ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗುತ್ತಿದ್ದು, ಒಟ್ಟು 4500 ಮಂದಿ ಬೆಂಗಳೂರು ಸಂಚಾರಿ ಪೊಲೀಸ್ ಸಿಬ್ಬಂದಿಯ ಪೈಕಿ ಮೂರನೇ ಒಂದರಷ್ಟು ಮಂದಿಗೆ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕವನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಧೀರ್ಘ ಅವಧಿಯವರೆಗೆ ಕಾರ್ಯನಿರ್ವಹಿಸುವ ಜತೆಗೆ ದೈಹಿಕವಾಗಿಯೂ ಶ್ರಮಪಡುವ ಅಗತ್ಯತೆ ತಲೆದೋರಿದೆ. ಕೊಡುಗೆಯಾಗಿ ನೀಡಿದ ಈ ಸುರಕ್ಷಾ ಸಾಧನಗಳನ್ನು ಬಳಸಿಕೊಂಡು ಪೊಲೀಸ್ ಪಡೆಯ ಸದಸ್ಯರು ತಮ್ಮನ್ನು ರಕ್ಷಿಸಿಕೊಂಡು ಮುಂಚೂಣಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಲಿದೆ.
ಮುಖದ ರಕ್ಷಾಕವಚ ಮತ್ತು ಮರುಬಳಕೆಯ ಕೈಗವಸುಗಳನ್ನು ಎಂಟು ದಿನಗಳ ಕಾಲ 44 ಪೊಲೀಸ್ ಠಾಣೆಗಳ 3800 ಮಂದಿ ಸಿಬ್ಬಂದಿಗೆ ವಿತರಿಸಲಾಗುತ್ತದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಬೆಂಗಳೂರು ಸಂಚಾರಿ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಹಾಗೂ ಐಪಿಎಸ್ ಅಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ, "ಬೆಂಗಳೂರು ಸಂಚಾರಿ ಪೊಲೀಸರ ಪರವಾಗಿ ಕಳೆದ ಒಂದು ವರ್ಷದಿಂದ ನೀಡುತ್ತಿರುವ ನಿರಂತರ ಬೆಂಬಲಕ್ಕಾಗಿ ಎಂಬಸ್ಸಿ ಸಮೂಹಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನಮ್ಮ ಸಿಬ್ಬಂದಿ ಮುಂಚೂಣಿಯಲ್ಲಿದ್ದುಕೊಂಡು ಕಾರ್ಯನಿರ್ವಹಿಸುವುದರಿಂದ ಮತ್ತು ರಾಜ್ಯವ್ಯಾಪಿ ಲಾಕ್ಡೌನ್ಗೆ ನಾಗರಿಕರು ಬದ್ಧರಾಗುವಂತೆ ಖಾತರಿಪಡಿಸುವುದರಿಂದ, ನಮ್ಮ ಸಿಬ್ಬಂದಿಯ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಮತ್ತು ಅವರ ಒತ್ತಡವನ್ನು ನಿಭಾಯಿಸುವುದು ಆದ್ಯತೆಯಾಗಿ ಪರಿಣಮಿಸಿದೆ. ಕಾರ್ಪೊರೇಟ್ ಕಂಪನಿಗಳ ಇಂಥ ಸಾಮಾಜಿಕ ಹೊಣೆಗಾರಿಕೆಯ ಕಾರ್ಯಗಳು ನಿಜವಾಗಿಯೂ ಅರ್ಥಪೂರ್ಣ ಮತ್ತು ನಮ್ಮ ಪಡೆಗಳಿಗೆ ಸ್ಫೂರ್ತಿ ನೀಡುವಲ್ಲಿ ಅತ್ಯಂತ ಪ್ರಯೋಜನಕಾರಿ. ಇದರ ಜತೆಗೆ ಸಿಬ್ಬಂದಿ ನಿರ್ಭೀತಿಯಿಂದ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುವುದನ್ನು ಕೂಡಾ ಇದು ಖಾತರಿಪಡಿಸುತ್ತದೆ" ಎಂದು ಹೇಳಿದರು.
ಎಂಬಸ್ಸಿ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿತು ವಿರ್ವಾನಿ, "ಇಂಥ ವಿಶೇಷ ಸಂದರ್ಭದ ಕಾಲಘಟ್ಟದಲ್ಲಿ ವೈರಸ್ ಹತ್ತಿಕ್ಕುವುದು ಮತ್ತು ವೈರಸ್ನ ಪರಿಣಾಮವನ್ನು ಕಡಿಮೆ ಮಾಡುವುದು ನಮ್ಮೆಲ್ಲರ ಹೊಣೆ. ಸಾಂಕ್ರಾಮಿಕದ ಸಂಕಷ್ಟದ ಕಾಲಘಟ್ಟದಲ್ಲೂ, ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸುವ ಮತ್ತು ಹಗಲು- ರಾತ್ರಿ ಎನ್ನದೇ ಕಾರ್ಯ ನಿರ್ವಹಿಸುವ ಮೂಲಕ ತಮ್ಮ ಸ್ವಂತ ಜೀವಕ್ಕೆ ಅಪಾಯವಿದ್ದರೂ ಲೆಕ್ಕಿಸದೇ ಸೋಂಕು ತಡೆಗೆ ಶ್ರಮಿಸುತ್ತಿರುವ ಸಂಚಾರಿ ಪೊಲೀಸರ ಪ್ರಯತ್ನ ಮತ್ತು ಸಾಹಸಕ್ಕೆ ನಾವು ಗೌರವ ಸಲ್ಲಿಸುತ್ತಿದ್ದೇವೆ. ಇಂಥ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಸುರಕ್ಷಿತವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಅವರಿಗೆ ನೆರವಾಗುವುದು ನಮ್ಮ ಹೊಣೆ ಎನ್ನುವುದು ನನ್ನ ಭಾವನೆ. ಇದನ್ನು ಸಾಧಿಸುವ ನಿಟ್ಟಿನಲ್ಲಿ ಮುಖದ ರಕ್ಷಾಕವಚ ಮತ್ತು ಮರು ಬಳಕೆಯ ಕೈಗವಸುಗಳು ಪ್ರಮುಖ ಸಾಧನಗಳಾಗುತ್ತವೆ. ಇತರ ಕಂಪನಿಗಳು ಮತ್ತು ಬೆಂಗಳೂರಿನ ನಾಗರಿಕರು ಕೂಡಾ ಮುಂದೆ ಬಂದು ಈ ಸವಾಲುದಾಯಕ ಸನ್ನಿವೇಶದಲ್ಲಿ ಪೊಲೀಸ್ ಪಡೆಯ ಜತೆ ಪಾಲುದಾರಿಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡುತ್ತಿದ್ದೇನೆ" ಎಂದು ಹೇಳಿದರು.

ಎಂಬಸ್ಸಿ ಸಮೂಹ ಈ ಮೊದಲು ದೇಶಾದ್ಯಂತ ಪೊಲೀಸ್ ಪಡೆಗೆ ದೇಶದಲ್ಲಿ ಸಾಂಕ್ರಾಮಿಕ ಆರಂಭವಾದ ಸಂದರ್ಭದಿಂದಲೂ ನೆರವು ನೀಡುತ್ತಾ ಬಂದಿದ್ದು, ರಾಷ್ಟ್ರೀಯ ಲಾಕ್ಡೌನ್ ಸಂಪೂರ್ಣವಾಗುವ ಖಾತರಿ ನೀಡಿದೆ. ಸುರಕ್ಷಿತ ಮತ್ತು ಆರೋಗ್ಯಕರ ರೀತಿಯಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸಲು ನೆರವಾಗಿರುವ ಎಂಬಸ್ಸಿ ಸಮೂಹ, ಬೆಂಗಳೂರು, ಪುಣೆ, ಮುಂಬೈ, ನೋಯ್ಡಾ ಮತ್ತು ಚೆನ್ನೈ ನಗರಗಳಲ್ಲಿ 11 ಹೈಡ್ರೇಷನ್ ಕೇಂದ್ರಗಳನ್ನು ಆರಂಭಿಸಿದೆ. ಈ ಕೇಂದ್ರಗಳು ಸ್ಯಾನಿಟೈಸರ್, ಕುಡಿಯುವ ನೀರು, ಚಹಾ/ ಕಾಫಿ, ಉಪಾಹಾರ, ಪ್ರಥಮ ಚಿಕಿತ್ಸೆ ಮತ್ತು ಶೌಚಾಲಯ ಸೌಲಭ್ಯಗಳಿಂದ ಸುಸಜ್ಜಿತವಾಗಿವೆ. ಇದರ ಜತೆಗೆ ಎಂಬಸ್ಸಿ ಸಮೂಹವು 50150 ಹ್ಯಾಂಡ್ ಸ್ಯಾನಿಟೈಸರ್ಗಳನ್ನು, 1,05,800 ಬಳಸಿ ಎಸೆಯುವ ಸುರಕ್ಷಾ ಮಾಸ್ಕ್ಗಳನ್ನು ಮತ್ತು 1,05,400 ಪೌಷ್ಟಿಕ ತಿನಸುಗಳನ್ನು ಖರೀದಿಸಿ ಈ ನಗರಗಳಲ್ಲಿ ಕಾರ್ಯಪಡೆಗಳಿಗೆ ವಿತರಿಸಿದೆ.












Click it and Unblock the Notifications