ಬೆಂಗಳೂರು: ನಡುರಸ್ತೆಯಲ್ಲಿ ವಿದ್ಯುತ್ ಕಂಬ ತೆರವು, ನಿವಾಸಿಗಳು ನಿರಾತಂಕ
ಬೆಂಗಳೂರು, ಸೆಪ್ಟಂಬರ್ 29: ಸ್ಥಳೀಯ ನಿವಾಸಿಗಳ ನಿರಂತರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ರಸ್ತೆಯಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಮೂಲಕ ಜನರ ಆತಂಕ ದೂರವಾಗಿಸಿದ್ದಾರೆ.
ರಾಜಧಾನಿ ಬೆಂಗಳೂರಿನ ಮಹಾದೇವಪುರ ವ್ಯಾಪ್ತಿಯ ಬಳಗೆರೆ ಮುಖ್ಯ ರಸ್ತೆಯಲ್ಲಿಯೇ ವಿದ್ಯುತ್ ಕಂಬ ಒಂದನ್ನು ಅಳವಡಿಸಲಾಗಿತ್ತು. ನಿತ್ಯ ನೂರಾರು ವಾಹನಗಳು ಓಡಾಡುವ ಜಾಗದಲ್ಲೇ ವಿದ್ಯುತ್ ಕಂಬ ನಿಲ್ಲಿಸಲಾಗಿತ್ತು. ಇದು ರಸ್ತೆ ಅಪಘಾತ ಸೇರಿದಂತೆ ವಿವಿಧ ಗಂಡಾಂತರಗಳಿಗೆ ಆಹ್ವಾನ ನೀಡುವಂತೆ ರಸ್ತೆಯಲ್ಲೇ ಅಳವಡಿಸಲಾಗಿತ್ತು.
ವಿದ್ಯುತ್ ಪರಿಷ್ಕೃತ ಹೆಚ್ಚಿಸದಂತೆ ಹೋಟೆಲ್ ಮಾಲೀಕರ ಸಂಘ ಮನವಿ
ಈ ಸಂಬಂಧ ಬಳಗೆರೆ ಮುಖ್ಯ ರಸ್ತೆಯ ಸ್ಥಳಿಯ ನಿವಾಸಿಗಳು ವಿದ್ಯುತ್ ಪೂರೈಸುವ ಸರ್ವೀಸ್ ಲೈನ್ ಇರುವ ವಿದ್ಯುತ್ ಕಂಬವನ್ನು ರಸ್ತೆ ಮಧ್ಯೆ ನಿಲ್ಲಿಸಲಾಗಿದ್ದು, ಕೂಡಲೇ ತೆರವು ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಬಗ್ಗೆ ಬೆಸ್ಕಾಂ ನಿರ್ಲಕ್ಷ್ಯ ವಹಿಸಲಾಗಿತ್ತು ಎನ್ನಲಾಗಿದೆ.
ಸಾರ್ವಜನಿಕರ ಮನವಿ ಮೇರೆಗೆ ಮಹದೇವಪುರ ಟಾಸ್ಕ್ ಫೋರ್ಸ್ ಮೊಬಿಲಿಟಿ ತಂಡವು ಕಾರ್ಯಾಚರಣೆ ನಡೆಸಿದೆ. 'ಬಳಗೆರೆ ಮುಖ್ಯ ರಸ್ತೆಯಲ್ಲಿನ ನಿವಾಸಿಗಳ ಬಹುಬೇಡಿಕೆಯಂತೆ ವಿದ್ಯುತ್ ಕಂಬ ತೆರವುಗೊಳಿಸಲಾಗಿದೆ. ಅದಕ್ಕು ಮೊದಲು ಇಲ್ಲಿನ ಭೂ ಮಾಲೀಕರ ಜತೆಗಿನ ವ್ಯಾಜ್ಯ ಸಮಸ್ಯೆ ಇತ್ತು. ಇದೀಗ ಆ ಸಮಸ್ಯೆ ಮುಕ್ತಾಯಗೊಂಡಿದ್ದರಿಂದ ವಿದ್ಯುತ್ ಕಂಬ ಸ್ಥಳಾಂತರ ಸಾಧ್ಯವಾಗಿದೆ ಎಂದು ಟಾಸ್ಕ ಫೋರ್ಸ್ ತಂಡದ ಅಧಿಕಾರಿಗಳು ಟ್ವಿಟ್ಟರ್ನಲ್ಲಿ ಬರೆದುಕೊಂಡು ಬಗ್ಗೆ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಟ್ವಿಟ್ಟರ್ನಲ್ಲಿ ನಾಗರಿಕರಿಂದ ಮನವಿ
ಬಳಗೆರೆ ಹೆಸರಿನಲ್ಲಿ ಟ್ವಿಟ್ಟರ್ನಲ್ಲಿ ಅಲ್ಲಿನ ನಿವಾಸಿಗಳ ಗುಂಪು ರಸ್ತೆಯ ಮಧ್ಯದ ವಿದ್ಯುತ್ ಕಂಬಗಳ ಚಿತ್ರಗಳನ್ನು ಹಂಚಿಕೊಂಡು ತೆರವಿಗೆ ಮನವಿ ಮಾಡಿದ್ದಾರೆ. ಬಳಗೆರೆ ಮುಖ್ಯರಸ್ತೆಯಲ್ಲಿ ವಿಸ್ತರಣೆ ಕೆಲಸ ಮುಂದುವರಿದಿದ್ದು, ವಿದ್ಯುತ್ ಕಂಬಗಳು ನಡುರಸ್ತೆಯಲ್ಲಿರುವುದರಿಂದ ಅಪಘಾತ ಸಂಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ಈ ಸಮಸ್ಯೆಗೆ ಪರಿಹಾರ ಏನು ಎಂದು ನಾಗರಿಕರು ಪ್ರಶ್ನಿಸಿ ಬಿಬಿಎಂಪಿ ಅಧಿಕಾರಿಗಳು, ಸ್ಥಳೀಯ ಶಾಸಕರು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳನ್ನು ಟ್ಯಾಗ್ ಮಾಡಿದ್ದಾರೆ.
ಹವಾಮಾನ ಪರಿಸ್ಥಿತಿಗಳನ್ನು ಪರಿಗಣಿಸಿ ಇಲ್ಲಿನ ಮುಖ್ಯರಸ್ತೆಯ ಡಾಂಬರೀಕರಣವನ್ನು ವಿಸ್ತರಿಸುತ್ತಿರುವುದು ಉತ್ತಮ ನಿರ್ಧಾರವಾಗಿದೆ. ಇದು ಸೇರಿದಂತೆ ವಿವಿಧ ಕಾರಣಗಳಿಂದ ವಿದ್ಯುತ್ ಕಂಬ ಸ್ಥಳಾಂತರ ವಿಳಂಬವಾಗಿತ್ತು. ಈಗ ವಿದ್ಯುತ್ ಸರಬರಾಜು ನಿಲ್ಲಿಸಿ ಕಂಬ ತೆರವು ಮಾಡಲಾಗಿದೆ ಎಂದು ಮಹದೇವಪುರ ಟಾಸ್ಕ್ ಫೋರ್ಸ್ ಮೊಬಿಲಿಟಿ ತಂಡವು ತಿಳಿಸಿದೆ.