ಬೆಂಗಳೂರಿನ ರಾಜರಾಜೇಶ್ವರಿ ನಗರ ಚುನಾವಣೆ ಮುಂದೂಡಿಕೆ
ಬೆಂಗಳೂರು, ಮೇ 11: ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ. ಇತ್ತೀಚೆಗೆ ಚುನಾವಣಾ ವಿಚಕ್ಷಣ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಸಾವಿರಾರು ಮತದಾರರ ನಕಲಿ ಗುರುತಿನ ಚೀಟಿ ವಶಪಡಿಸಿಕೊಂಡಿದ್ದರು. ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.
ನಾಳೆ ಮೇ 12ರಂದು ನಡೆಯಬೇಕಿದ್ದ ಮತದಾನ ರದ್ದಾಗಿದ್ದು, ಮೇ 28ರಂದು ಮತದಾನ ನಡೆಯಲಿದೆ. ಮೇ 31ರಂದು ಫಲಿತಾಂಶ ಹೊರ ಬರಲಿದೆ. ಜಾಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ಎಸ್ಎಲ್ ವಿ ಪಾರ್ಕ್ ವ್ಯೂ ಅಪಾರ್ಟ್ಮೆಂಟ್ ನಲ್ಲಿ 9,746 ಮತದಾರರ ಗುರುತಿನ ಚೀಟಿ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ಜಾರಿಯಲ್ಲಿದೆ.

ಘಟನೆ ಹಿನ್ನಲೆ: ಮೇ 08 ರಂದು ಸಂಜೆ ರಾಜರಾಜೇಶ್ವರಿ ನಗರದ ಜಾಲಹಳ್ಳಿ ವ್ಯಾಪ್ತಿಯ ಎಸ್ಎಲ್ ವಿ ಪಾರ್ಕ್ ವ್ಯೂ ಅಪಾರ್ಟ್ಮೆಂಟ್ ನಲ್ಲಿ 9,746 ವೋಟರ್ ಐಡಿ ಪತ್ತೆಯಾಗಿತ್ತು. ಇದೆಲ್ಲವೂ ಅಸಲಿ ವೋಟರ್ ಐಡಿಗಳು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದ್ದರು.
ಈ ವೋಟರ್ ಐಡಿಗಳು ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ಅವರಿಗೆ ಸಂಬಂಧಿಸಿದ್ದು, ಅವರು ಅಕ್ರಮ ಎಸಗುತ್ತಿದ್ದಾರೆಂದು ಬಿಜೆಪಿ ದೂರಿತ್ತು.
ಆದರೆ ಈ ಐಡಿಗಳು ಸಿಕ್ಕ ಫ್ಲ್ಯಾಟ್ ಬಿಜೆಪಿಯ ಮಾಜಿ ಕಾರ್ಪೋರೇಟರ್ ಮಂಜುಳಾ ಅವರಿಗೆ ಸೇರಿದ್ದು, ಅವರು ಈ ಫ್ಲ್ಯಾಟ್ ಅನ್ನು ತಮ್ಮ ಸಂಬಂಧಿ ರಾಕೇಶ್ ಎಂಬುವವರಿಗೆ ಬಾಡಿಗೆಗೆ ನೀಡಿದ್ದರು. ಆದ್ದರಿಂದ ಇದು ಬಿಜೆಪಿಗೆ ಸೇರಿದ್ದು ಎಂದು ಕಾಂಗ್ರೆಸ್ ಆರೋಪಿಸಿತ್ತು.
ಎರಡು ಪಕ್ಷಗಳ ಕೆಸರೆರಚಾಟದ ನಡುವೆ ತನಿಖೆ ಮುಂದುವರೆಸಿದ್ದ ರಾಜ್ಯದ ಚುನಾವಣಾ ಆಯೋಗವು, ತನ್ನ ವರದಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ತನ್ನ ವರದಿಯನ್ನು ನೀಡಿತ್ತು. ಇದನ್ನು ಆಧಾರವಾಗಿಟ್ಟುಕೊಂಡು, ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಒ.ಪಿ ರಾವತ್ ಅವರು ಚುನಾವಣೆ ಮುಂದೂಡುವ ನಿರ್ಧಾರ ಪ್ರಕಟಿಸಿದ್ದಾರೆ.











Click it and Unblock the Notifications