ಚುನಾವಣೆ: ಮತದಾನದ ಅವಧಿ ಒಂದು ಗಂಟೆ ಹೆಚ್ಚಳ
ಬೆಂಗಳೂರು, ಫೆಬ್ರವರಿ 22: ಈ ಬಾರಿಯ ಚುನಾವಣೆಯಲ್ಲಿ ವಿ.ವಿ ಪ್ಯಾಟ್ ವ್ಯವಸ್ಥೆಯಿದ್ದು, ಮತದಾರರು ಚಲಾಯಿಸುವ ಅಭ್ಯರ್ಥಿಯ ಚಿತ್ರ ಕೆಲವು ಸೆಕೆಂಡುಗಳು ಮತಯಂತ್ರದಲ್ಲಿ ಕಾಣಿಸಲಿವೆ ಇದಕ್ಕೆ ಹೆಚ್ಚಿನ ಸಮಯ ಬೇಕಾಗುವ ಕಾರಣ ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚು ಅಂದರೆ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ಶಂಕರ್ ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ರವರು ಇಂದು ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ವಿಧಾನಸಭಾ ಚುನಾವಣೆ 2018 ಲಾಂಛನವನ್ನು ಇಂದು ಬಿಡುಗಡೆ ಮಾಡಿ ಮಾತನಾಡಿದ ಅವರು ಇಲ್ಲಿಯವರೆಗೆ ಎಲೆಕ್ಟ್ರಾನಿಕ್ ಮತಯಂತ್ರದ ಮೂಲಕ ಮತ ಚಲಾಯಿಸಿದವರಿಗೆ ತಾವು ಅಪೇಕ್ಷಿಸಿದ ವ್ಯಕ್ತಿಗೆ ಮತದಾನ ಮಾಡಿದ್ದೇವೆಯೇ ಎಂದು ಪರೀಕ್ಷಿಸಿಕೊಳ್ಳಲು ಆಗುತ್ತಿರಲಿಲ್ಲ ಆದರೆ ಈ ಬಾರಿಯ ಚುನಾವಣೆಯಲ್ಲಿ ವಿ.ವಿ ಪ್ಯಾಟ್ ವ್ಯವಸ್ಥೆಯಿಂದ ಮತದಾನ ಮಾಡಿದ ಅಭ್ಯರ್ಥಿಯ ಚಿತ್ರ ಕಾಣಲಿದೆ ಎಂದರು.
2018ರ ಚುನಾವಣೆಯನ್ನು ಅತ್ಯಂತ ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ ಯಾವುದೇ ಲೋಪವಿಲ್ಲದೇ ನಡೆಸಲು ಅಗತ್ಯವಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದ ಅವರು ಜಿಲ್ಲೆಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿದ್ದು ಅವುಗಳೆಂದರೆ ಯಲಹಂಕ (150), ಬ್ಯಾಟರಾಯನಪುರ (152), ಯಶವಂತಪುರ (153), ದಾಸರಹಳ್ಳಿ (155), ಮಹದೇವಪುರ (174), ಬೆಂಗಳೂರು ದಕ್ಷಿಣ (176) ಹಾಗೂ ಆನೇಕಲ್ (177) ಜಿಲ್ಲೆಯ ಒಟ್ಟು ಜನಸಂಖ್ಯೆ 45 ಲಕ್ಷವಾಗಿದ್ದು, ಮತದಾರರ ಸಂಖ್ಯೆ 29,80,187 ಹಾಗೂ 1700 ಸ್ಥಳಗಳಲ್ಲಿ 2777 ಮತಗಟ್ಟೆಗಳಲ್ಲಿ ಸ್ಥಾಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಈ ವರ್ಷ ಒಟ್ಟು ಮತದಾರರ ಪಟ್ಟಿಗೆ ಸೇರ್ಪಡೆಗಾಗಿ 1,56,000 ಅರ್ಜಿಗಳು ಸ್ವೀಕೃತಿಯಾಗಿದ್ದು, ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ. ಆನ್ಲೈನ್ ಮೂಲಕ ಬಂದಿರುವ ಅರ್ಜಿಗಳು ಮಾತ್ರ ಬಾಕಿ ಇವೆ. ಈ ವರ್ಷದ ಘೋಷಣೆ 'ಯಾವುದೇ ಮತದಾರರು ಕೈಬಿಟ್ಟು ಹೋಗಬಾರದು' ಎಂಬುದಾಗಿದ್ದು, ಎಲ್ಲ ಅರ್ಹ ಮತದಾರರನ್ನು ಮತಪಟ್ಟಿಗೆ ಸೇರ್ಪಡೆ ಮಾಡಲು ಪ್ರಯತ್ನ ಮಾಡಲಾಗಿದೆ. ಈ ವರ್ಷ 1,40,000 ಹೆಚ್ಚುವರಿಯಾಗಿ ನೋಂದಣಿಯಾಗಿದ್ದಾರೆ. ಅಂತಿಮ ಹಂತದ ಮತದಾರರ ಪಟ್ಟಿ ಸಿದ್ಧವಾದ ನಂತರವು ಕೈಬಿಟ್ಟು ಹೋದವರನ್ನು ನಾಮಪತ್ರ ಸಲ್ಲಿಸುವ ಕಡೆಯ ದಿನದವರೆಗೂ ನೋಂದಣಿ ಮಾಡಿಕೊಳ್ಳಲಿದ್ದು, ಅಂತಹವರ ಹೆಸರನ್ನು ಪೂರಕ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಅರ್ಚನಾ ಅವರು ಸಮಾಜ ಕಲ್ಯಾಣ ಇಲಾಖೆ ಮತ್ತು ಅಂಗವಿಕಲರ ಇಲಾಖೆ ಮೂಲಕ ಮಾಹಿತಿ ಪಡೆದು ಅರ್ಹ ಅಂಗವಿಕಲರನ್ನು ಮತಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಮತ್ತು ಮಿಲೇನಿಯಮ್ ವೋಟರ್ಸ್ ಅನ್ನು ಸಹ ಗುರ್ತಿಸಿ ಸೇರ್ಪಡೆ ಮಾಡುವ ಕೆಲಸ ಮಾಡಲಾಗಿದೆ. ಅಂಗವಿಕಲರಿಗೆ ಮತ ಚಲಾಯಿಸಲು ಅನುಕೂಲ ಆಗುವಂತೆ ನೆರವು ನೀಡಲು ಪ್ರತಿ ಬೂತ್ಗೆ ಇಬ್ಬರನ್ನು ನಿಯೋಜಿಸಲಾಗುತ್ತದೆ ಎಂದರು.
ಸ್ವೀಪ್ ಚಟುವಟಿಕೆಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಅಧ್ಯಕ್ಷರಾಗಿದ್ದು, ಈಗಾಗಲೇ ಮುಖ್ಯ ಚುನಾವಣಾ ಅಧಿಕಾರಿಗಳು ಮತ್ತು ಉಪಚುನಾವಣಾ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಅರ್ಚನಾ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀ ಜಗದೀಶ್ ರವರು ಪಾಲ್ಗೊಂಡಿದ್ದರು.












Click it and Unblock the Notifications