ಬೆಂಗಳೂರಿಗರಿಗೆ ಗುಡ್ನ್ಯೂಸ್: ಬಂದಿದೆ ಇಕೊಫಿಕ್ಸ್ ತಂತ್ರಜ್ಞಾನ, ಮಳೆಗಾಲದಲ್ಲೂ ಇರಲ್ಲ ಸಮಸ್ಯೆ!
ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಕೊನೆಗೂ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಮುಂದಾಗಿದೆ. ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಜನ ಹಾಗೂ ವಾಹನ ಸವಾರರು ಇನ್ನಿಲ್ಲದಂತೆ ಪರದಾಡಿದ್ದರು. ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ಬರುವ ಸಮಯದಲ್ಲೂ ರಸ್ತೆಗುಂಡಿಗಳನ್ನು ಮುಚ್ಚುವ ಉದ್ದೇಶದಿಂದ ಪ್ರಾಯೋಗಿಕವಾಗಿ ಇಕೊಫಿಕ್ಸ್ ಮಿಶ್ರಣ ಬಕಳೆ ಮಾಡಲು ಬಿಬಿಎಂಪಿ ಮುಂದಾಗಿದೆ. ಇದೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳ ಸಮಸ್ಯೆಯಿಂದಾಗಿ ಸಂಚಾರ ದಟ್ಟಣೆಯೊಂದಿಗೆ ಅಪಘಾತಗಳು ಸಹ ಸಂಭವಿಸುತ್ತವೆ. ಇದನ್ನು ತಡೆಯುವ ಉದ್ದೇಶದಿಂದ ಕೂಡಲೇ ರಸ್ತೆಗುಂಡಿಗಳನ್ನು ಮುಚ್ಚುತ್ತಿರುವುದಾಗಿ ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಡಾ. ಬಿ.ಎಸ್ ಪ್ರಹ್ಲಾದ್ ಅವರು ಹೇಳಿದ್ದಾರೆ. ಈ ನಿಟ್ಟಿ ಭಾರತದ ಪ್ರಮುಖ ರಸ್ತೆ ಸಂಶೋಧನಾ ಸಂಸ್ಥೆ ಸಿ.ಎಸ್.ಆರ್.ಐ - ಸಿ.ಆರ್.ಆರ್.ಐ, ರಮುಕ ಗ್ಲೋಬಲ್ ಸರ್ವೀಸ್ ಹಾಗೂ ಪಾಲಿಕೆಯ ಸಹಯೋಗದೊಂದಿಗೆ ಇಕೊಫಿಕ್ಸ್ ತಂತ್ರಜ್ಞಾನ ಬಳಸಿ ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತಿದೆ.

ಇದರ ಪ್ರಯೋಗಿಕ ಹಂತವಾಗಿ ಬೆಂಗಳೂರಿನ ಅಂಜನಿ ದೇವಸ್ಥಾನದ ಬಳಿಯ ಅವೆನ್ಯೂ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಮೂಲಕ ಸ್ಟೀಲ್ ಸ್ಲ್ಯಾಗ್ ಆಧಾರಿತ ಇಕೊಫಿಕ್ಸ್ ತಂತ್ರಜ್ಞಾನದ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಗಿದೆ. ಭಾರತದ ಪ್ರಮುಖ ರಸ್ತೆ ಸಂಶೋಧನಾ ಸಂಸ್ಥೆ CSIR - ಸೆಂಟ್ರಲ್ ರೋಡ್ ರಿಸರ್ಚ್ ಇನ್ಸ್ಟಿಟ್ಯೂಟ್(CRRI) ಪಾಲಿಕೆ ಸಹಯೋಗದೊಂದಿಗೆ ಬೆಂಗಳೂರು ನಗರದ ರಸ್ತೆಯ ಗುಂಡಿಗಳನ್ನು ಸರಿಪಡಿಸಲು ಕೈಜೋಡಿಸಿದೆ. ನಗರದ ರಸ್ತೆಗಳು ಮಳೆಗಾಲದಲ್ಲಿ ಹಾಟ್ ಮಿಕ್ಸ್ ಪ್ಲಾಂಟ್ ಕಾರ್ಯನಿರ್ವಹಿಸಲು ಸಾಧ್ಯವಾಗದೆ ಇದ್ದಾಗ, ಪರಿಸರ ಸ್ನೇಹಿ ರೀತಿಯಲ್ಲಿ ಬಾಳಿಕೆ ಬರುವ ರಸ್ತೆ ದುರಸ್ತಿ ಮಾಡಲು ಇಕೊಫಿಕ್ಸ್ ತಂತ್ರಜ್ಞಾನವು ನಗರದ ರಸ್ತೆಗಳಿಗೆ ವರದಾನವಾಗಲಿದೆ ಎಂದು ಬಿಬಿಎಂಪಿ ಹೇಳಿದೆ.
ಇಕೊಫಿಕ್ಸ್ ತಯಾರಿ ಹೇಗೆ: ಈ ಮಿಶ್ರಣವನ್ನು ಉಕ್ಕಿನ ಕೈಗಾರಿಕೆಗಳ ಕೈಗಾರಿಕಾ ತ್ಯಾಜ್ಯ, ಕಬ್ಬಿಣ ಮತ್ತು ಉಕ್ಕಿನ ಸ್ಲ್ಯಾಗ್ ಬಳಸಿ ಅಭಿವೃದ್ಧಿಪಡಿಸಲಾಗಿದೆ. ಈ ಡಾಂಬರನ್ನು ನೀರು ತುಂಬಿದ ಗುಂಡಿಯನ್ನು ಸರಿಪಡಿಸಬಹುದಾಗಿದೆ.
ಇನ್ನು ಇದಕ್ಕೆ ಟ್ಯಾಕ್ ಕೋಟ್ ಮಾಡುವ ಅವಶ್ಯಕತೆ ಇರುವುದಿಲ್ಲ ಎನ್ನಲಾಗಿದೆ. ಸಾಮಾನ್ಯವಾಗಿ ರಸ್ತೆ ಗುಂಡಿಗಳನ್ನು ಮುಚ್ಚಬೇಕಾದರೆ ಗುಂಡಿಗಳಲ್ಲಿ ಇರುವ ನೀರು ತೆಗೆದು, ಅದನ್ನು ಸ್ವಚ್ಛ ಮಾಡಿದ ಮೇಲೆ ಟ್ಯಾಕ್ ಕೋಟ್ ಮಾಡುತ್ತಾರೆ. ಆದರೆ, ಈಗ ಇಕೋಫಿಕ್ಸ್ ಮಿಶ್ರಣಕ್ಕೆ ಯಾವುದೇ ಟ್ಯಾಕ್ ಕೋಟ್ ಬಳಸುವ ಅಗತ್ಯವಿಲ್ಲ. ನೀರು ತುಂಬಿದ್ದರೂ ಗುಂಡಿ ದುರಸ್ತಿಪಡಿಸಬಹುದಾಗಿದೆ. ದುರಸ್ತಿಯಾದ ಮೇಲೆ ರಸ್ತೆ ಸಂಚಾರಕ್ಕೆ ಅವಕಾಶ ನೀಡಬಹುದಾಗಿದೆ. ಸಂಸ್ಕರಿತ ಕಬ್ಬಿಣ ಮತ್ತು ಉಕ್ಕಿನ ಸ್ಲ್ಯಾಗ್ ಮತ್ತು ವಿಶೇಷವಾಗಿ ಕಸ್ಟಮೈಸ್ ಮಾಡಿದ ಬೈಂಡರ್ ಅನ್ನು ಬಳಸಿಕೊಂಡು ಇಕೋಫಿಕ್ಸ್ ಮಿಶ್ರಣವನ್ನು ತಯಾರಿಸಲಾಗಿರುವುದರಿಂದ ಬಾಳಿಕೆ ಮತ್ತು ದೀರ್ಘಾಯುಷ್ಯದ ವಿಷಯದಲ್ಲಿ ದುರಸ್ತಿ ಮಾಡಿದ ಮೇಲ್ಮೈ ಸಾಮಾನ್ಯ ರಸ್ತೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಬಿಬಿಎಂಪಿ ಹೇಳಿದೆ.
ಬೇರೆ ರಾಜ್ಯಗಳಲ್ಲೂ ಇದರ ಬಳಕೆ: ಇಕೋಫಿಕ್ಸ್ ಮಿಶ್ರಣದ ತಂತ್ರಜ್ಞಾನವು ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಅರುಣಾಚಲ ಪ್ರದೇಶ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿಯೂ ಇದನ್ನು ಬಳಸಲಾಗುತ್ತಿದೆ.
ಪ್ರಾಯೋಗಿಕವಾಗಿ ಅಳವಡಿಸಲು ಒಪ್ಪಿಗೆ: ಇಕೊಫಿಕ್ಸ್ ತಂತ್ರಜ್ಞಾನವನ್ನು ನಗರದಲ್ಲಿ ಅಳವಡಿಸಿಕೊಳ್ಳುವ ಸಂಬಂಧ ಸಿಎಸ್ಐಆರ್ ನ ಪ್ರಮುಖ ವಿಜ್ಞಾನಿ ಸತೀಶ್ ಪಾಂಡೆ, ಮುಖ್ಯ ಕಾರ್ಯದರ್ಶಿಯ ಶಾಲಿನಿ ರಜನೀಶ್ ಅವರು ಭೇಟಿ ಮಾಡಿ ಅದನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚಿಸಿದ ಬಳಿಕ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಇಕೊಫಿಕ್ಸ್ ತಂತ್ರಜ್ಞಾನದ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಪ್ರಾಯೋಗಿಕವಾಗಿ ಅಳವಡಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಬಿಬಿಎಂಪಿ ಹೇಳಿದೆ.












Click it and Unblock the Notifications