ಬಿಎಂಟಿಸಿ ಬಗ್ಗೆ ಜನರ ದೂರುಗಳೇನು? ಇಲ್ಲಿದೆ ಸಮೀಕ್ಷೆ
ಬೆಂಗಳೂರು, ಜ. 22 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ, ನಮ್ಮ ಏರಿಯಾಕ್ಕೆ ಹೋಗುವುದಿಲ್ಲ, ಬಸ್ ದರ ಅಧಿಕವಾಗಿದೆ. ಇದು ಸಮೀಕ್ಷೆಯಲ್ಲಿ ಬೆಂಗಳೂರಿನ ಜನರು ಬಿಎಂಟಿಸಿ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳು.
ನಗರ ಭೂಸಾರಿಗೆ ನಿರ್ದೇಶನಾಲಯವು (ಡಲ್ಟ್) ನಡೆಸಿದ ಸಮೀಕ್ಷೆಯಲ್ಲಿ ಈ ಅಂಶಗಳು ಬೆಳಕಿಗೆ ಬಂದಿದೆ. ಪ್ರಯಾಣಿಕರು ಹಾಗೂ ಪ್ರಯಾಣಿಕರಲ್ಲದವರು ಬಿಎಂಟಿಸಿ ಬಸ್ಸುಗಳ ಬಗ್ಗೆ ಏನು ಹೇಳುತ್ತಾರೆ ಎಂದು ತಿಳಿಯಲು ಬಿಎಂಟಿಸಿ ಈ ಸಮೀಕ್ಷೆ ನಡೆಸುವಂತೆ ನಿರ್ದೇಶನಾಲಯಕ್ಕೆ ಮನವಿ ಮಾಡಿತ್ತು. ಅದರ ವರದಿ ಈಗ ಬಹಿರಂಗಗೊಂಡಿದೆ. [ಬೆಂಗಳೂರಿಗೆ ಬೇಕು 'ಬಸ್ ಭಾಗ್ಯ']
ಬಸ್ ಸಮಯ, ಸುರಕ್ಷತೆ, ವಿಶ್ವಾಸಾರ್ಹತೆ, ಸಂಪರ್ಕ ಜಾಲ ಮುಂತಾದ ಪ್ರಶ್ನೆಗಳಿಗೆ 2000 ಬಿಎಂಟಿಸಿ ಪ್ರಯಾಣಿಕರು ಹಾಗೂ 500 ಮಂದಿ ಇತರರನ್ನು ಸಂದರ್ಶಿಸಿ ಸಮೀಕ್ಷೆಯ ವರದಿ ತಯಾರಿಸಲಾಗಿದೆ. ಬಸ್ ನಿಲ್ದಾಣಗಳು, ಕಚೇರಿಗಳು, ಶಾ, ಕಾಲೇಜು ಮುಂತಾದ ಕಡೆ ಜನರನ್ನು ಸಂದರ್ಶಿಸಲಾಗಿದೆ. [ಬಿಎಂಟಿಸಿ ಮಾಹಿತಿ ಬೆರಳ ತುದಿಯಲ್ಲಿ ಪಡೆಯಿರಿ]

ಸಮೀಕ್ಷೆ ನಡೆಸಿದ್ದು ಎಲ್ಲಿ : ನಗರದ ವೈಟ್ಫೀಲ್ಡ್, ಗರುಡಾಚಾರ್ಪಾಳ್ಯ, ಕಾಡುಗೋಡಿ, ದೊಡ್ಡನೆಕ್ಕುಂದಿ ಮುಂತಾದ ವಾರ್ಡ್ಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗಿದ್ದು, ಒಟ್ಟು 2,07,212. ಜನಸಂಖ್ಯೆಯ ಶೇ 1 ಜನರನ್ನು ಮಾದರಿಗಳನ್ನಾಗಿ ಆಯ್ಕೆ ಮಾಡಿಕೊಂಡು ಈ ಸಮೀಕ್ಷೆ ನಡೆಸಲಾಗಿದೆ.
ಸಮೀಕ್ಷೆಯ ವರದಿ ಹೀಗಿದೆ : ಸಮೀಕ್ಷೆಯಲ್ಲಿ ಬಿಎಂಟಿಸಿ ಬಸ್ಸುಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎಂದು ಶೇ 35 ರಷ್ಟು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಸ್ ಸೇವೆ ಆರಾಮದಾಯಕ ಅಲ್ಲ ಎಂದು ಶೇ 32 ಮಂದಿ ಹೇಳಿದ್ದಾರೆ.
ಬಸ್ ಸಂಪರ್ಕ ಜಾಲ ಸರಿಯಾಗಿಲ್ಲ ಎಂದು ಶೇ 20ರಷ್ಟು ಜನರು ಹೇಳಿದ್ದಾರೆ. ಸಂಪರ್ಕ ಜಾಲ ಸರಿ ಇಲ್ಲದ ಕಾರಣ ಬಸ್ಸಿನಲ್ಲಿ ಪ್ರಯಾಣಿಸುತ್ತಿಲ್ಲ ಎಂದು ಶೇ 10ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಶೇ 2ರಷ್ಟು ಜನರು ಬಿಎಂಟಿಸಿ ವಿಶ್ವಾಸಾರ್ಹ ಅಲ್ಲ ಎಂದು ತಿಳಿಸಿದ್ದಾರೆ.
ಶೇ 67ರಷ್ಟು ಉದ್ಯೋಗಿಗಳು ಬಿಎಂಟಿಸಿ ಬಸ್ಸಿನಲ್ಲಿ ಸಂಚರಿಸುತ್ತಾರೆ. ಶೇ 40 ಮಂದಿ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ 5ರಿಂದ 10 ನಿಮಿಷ ಕಾಯುತ್ತೇವೆ ಎಂದು ಹೇಳಿದ್ದಾರೆ. ಎಸಿ ಬಸ್ಸಿನಲ್ಲಿ ಸಂಚರಿಸುವ ಶೇ 33 ರಷ್ಟು ಜನರು ನಿಲ್ದಾಣದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಹೊತ್ತು ಬಸ್ಸಿಗಾಗಿ ಕಾಯುತ್ತಾರೆ ಎಂಬ ಅಂಶ ಸಮೀಕ್ಷೆಯಿಂದ ಹೊರಬಂದಿದೆ.












Click it and Unblock the Notifications