ನೀರು ನಿರ್ವಹಣೆಗೆ ದುಬೈ, ಇಸ್ರೇಲ್ ಮಾದರಿ ಬೇಕು - ಸಿಎಂ
"ನೀರಿನ ನಿರ್ವಹಣೆ ಬಗ್ಗೆ ಹೊಸ ಹೊಸ ಆವಿಷ್ಕಾರಗಳು, ಹೊಸ ಬದಲಾವಣೆಗಳು ಬಂದಾಗ ಮಾತ್ರ ರಾಜ್ಯ ನೀರಾವರಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತದೆ. ಆ ನಿಟ್ಟಿನಲ್ಲಿ ನಮ್ಮ ಇಂಜಿನಿಯರ್ಗಳು ಕಾರ್ಯಪ್ರವೃತ್ತರಾಗಬೇಕು," ಎಂದು ಸಿಎಂ ಕಿವಿಮಾತು ಹೇಳಿದರು.
ಬೆಂಗಳೂರು, ಮೇ 5: ವಿಜ್ಞಾನ, ತಂತ್ರಜ್ಞಾನ ಇಷ್ಟೊಂದು ಬೆಳೆದಿದ್ದರೂ ನೀರು ನಿರ್ವಹಣೆಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳದೆ ನಾವೆಲ್ಲಾ ಹಿಂದೆ ಬಿದ್ದಿದ್ದೇವೆ. ನೀರು ನಿರ್ವಹಣೆಗೆ ಇಸ್ರೇಲ್, ದುಬೈ ಮಾದರಿಗಳನ್ನು ಅನುಸರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಜಲಸಂಪನ್ಮೂಲ ಇಲಾಖೆ ಏರ್ಪಡಿಸಿದ್ದ 2016 ನೇ ಸಾಲಿನ ನೀರಾವರಿ ತಜ್ಞ ಎಸ್.ಜಿ. ಬಾಳೇಕುಂದ್ರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.
"ನೀರಿನ ನಿರ್ವಹಣೆ ಬಗ್ಗೆ ಹೊಸ ಹೊಸ ಆವಿಷ್ಕಾರಗಳು, ಹೊಸ ಬದಲಾವಣೆಗಳು ಬಂದಾಗ ಮಾತ್ರ ರಾಜ್ಯ ನೀರಾವರಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತದೆ. ಆ ನಿಟ್ಟಿನಲ್ಲಿ ನಮ್ಮ ಇಂಜಿನಿಯರ್ಗಳು ಕಾರ್ಯಪ್ರವೃತ್ತರಾಗಬೇಕು," ಎಂದು ಕಿವಿಮಾತು ಹೇಳಿದರು.
ಇಸ್ರೇಲ್, ದುಬೈ ಸೇರಿದಂತೆ ವಿದೇಶಗಳಲ್ಲಿ ನೀರು ನಿರ್ವಹಣೆ ಅತ್ಯುತ್ತಮವಾಗಿದೆ. ಆ ಮಾದರಿಗಳನ್ನು ನಾವು ಕೂಡ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ ಮುಖ್ಯಮಂತ್ರಿಗಳು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಲಸಂಪನ್ಮೂಲ ಇಲಾಖೆಗೆ 60 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರು.
"ಆದರೆ ಯೋಜನೆಗಳ ರೂಪುರೇಷೆಗಳನ್ನು ತಯಾರು ಮಾಡುವಲ್ಲಿ ನಮ್ಮ ಇಂಜಿನಿಯರುಗಳು ಎಡವುತ್ತಿದ್ದು ಇದರಿಂದಾಗಿ ಸರ್ಕಾರಕ್ಕೆ ಹೆಚ್ಚಿನ ಹಣಕಾಸಿನ ಹೊರೆಯಾಗುತ್ತಿದೆ. ನೀರಾವರಿ ಯೋಜನೆಗಳು ಕಾಲಮಿತಿಯೊಳಗೆ ಪೂರ್ಣಗೊಂಡಲ್ಲಿ ಸರ್ಕಾರಕ್ಕೆ ಹೆಚ್ಚಿನ ಹಣಕಾಸಿನ ಹೊರೆಯಾಗುವುದಿಲ್ಲ," ಎಂದರು.
ಯೋಜನೆಗಳನ್ನು ರೂಪಿಸುವಾಗಲೇ ಇಂತಹ ಸಮಯಕ್ಕೆ ಯೋಜನೆ ಪೂರ್ಣಗೊಳಿಸುವಂತೆ ಗುರಿಯಿಟ್ಟು ಅಧಿಕಾರಿಗಳು ಕರ್ತವ್ಯ ನಿರ್ವಹಿಸೇಕು ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು. ಸರ್.ಎಂ. ವಿಶ್ವೇಶ್ವರಯ್ಯ, ಬಾಳೇಕುಂದ್ರಿ ಅವರು ಯಾವ ರೀತಿ ಕೆಲಸ ಮಾಡುತ್ತಿದ್ದರು ಎಂಬುದನ್ನು ಅರಿತು ಅವರಂತೆ ಕೆಲಸ ಮಾಡುವ ಮನಸ್ಥಿತಿಯನ್ನು ನಮ್ಮ ಇಂಜಿನಿಯರುಗಳು ಮೈಗೊಡಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಬಾಳೇಕುಂದ್ರಿ ಅವರು ರಾಜ್ಯ ಕಂಡ ಶ್ರೇಷ್ಠ ನೀರಾವರಿ ತಜ್ಞ ಎಂದು ತಿಳಿಸಿದ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಬಾಳೇಕಿಂದ್ರಿ ಕರ್ನಾಟಕ ಕಂಡ ಎರಡನೇ ವಿಶ್ವೇಶ್ವರಯ್ಯ ಎಂದು ಬಣ್ಣಿಸಿದರು. ರಾಜ್ಯ ಹಾಗೂ ದೇಶದ ಹಲವಾರು ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಅವರ ಸೇವೆ ಅಪಾರ ಎಂದು ಗುಣಗಾನ ಮಾಡಿದರು.
ರಾಜ್ಯದ ಜಲ ಹಂಚಿಕೆ ವಿಚಾರದಲ್ಲಿ ಬಾಳೇಕುಂದ್ರಿ ಅವರು ರಾಜ್ಯಕ್ಕೆ ಸಲಹೆ ಸೂಚನೆ ನೀಡುತ್ತಿದ್ದರು ಎಂದು ಬಾಳೇಕುಂದ್ರಿ ಪತ್ನಿ ಶ್ರೀಮತಿ ಪ್ರೊ. ಕಮಲ ಬಾಳೇಕುಂದ್ರಿ ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.
2016 ನೇ ಸಾಲಿನ ಎಸ್.ಜಿ. ಬಾಳೇಕುಂದ್ರಿ ಪ್ರಶಸ್ತಿಯನ್ನು ಇಂಜಿನಿಯರುಗಳಾದ ಮಾಧವ, ಸಿ.ಎಲ್. ಪುಟ್ಟಸ್ವಾಮಿ, ಪಿ.ಕೆ. ಶಂಕರ್, ಶ್ರೀಮತಿ ಪ್ರೇಮಲತಾ, ರಾಮನಗೌಡ, ಎಲ್. ಹಳ್ಳೂರು ಅವರಿಗೆ ನೀಡಿ ಗೌರವಿಸಲಾಯಿತು.
ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಶಾಸಕ ಪುಟ್ಟರಂಗಶೆಟ್ಟಿ, ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಗುರುಪಾದಸ್ವಾಮಿ, ನೀರಾವರಿ ನಿಗಮಗಳ ಮುಖ್ಯಸ್ಥರು, ಗಣ್ಯರು ಸಭೆಯಲ್ಲಿ ಹಾಜರಿದ್ದರು.