ಬೆಂಗಳೂರಿನಲ್ಲಿ ತೆರಿಗೆ ಕಟ್ಟಿ ಸಿಕ್ಕಿಬಿದ್ದ ಡ್ರಗ್ಸ್ ದಂಧೆಕೋರ
ಬೆಂಗಳೂರು, ಜನವರಿ 30 : ದೇಶದಲ್ಲಿ ತೆರಿಗೆ ವಂಚನೆ ಮಾಡುವುದು ಈಗ ಬಹುದೊಡ್ಡ ಗುಟ್ಟೇನೂ ಅಲ್ಲ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ.1.7ರಷ್ಟು ಜನರು ಮಾತ್ರ 2015-16ನೇ ಸಾಲಿನಲ್ಲಿ ವೇತನ ಪಾವತಿಸಿದ್ದಾರೆ. ಉಳಿದೆಲ್ಲ ನಾಗರಿಕರು ತೆರಿಗೆಯನ್ನೇ ಪಾವತಿಸಿಲ್ಲ.
ಆದರೆ, ಬೆಂಗಳೂರಿನ ಕಟ್ಟಡ ಕಾರ್ಮಿಕ 2017-18ನೇ ಸಾಲಿನಲ್ಲಿ ಆದಾಯ ತೆರಿಗೆ ಪಾವತಿಸಿ ಗಮನ ಸೆಳೆದಿದ್ದ. ಇದು ಆದಾಯ ತೆರಿಗೆ ಇಲಾಖೆಗೂ ಅಚ್ಚರಿ ಮೂಡಿಸಿತ್ತು. ಆದರೆ ದುರ್ದೈವವಶಾತ್ ಈಗ ಅದೇ ವಿಚಾರ ಆತನಿಗೆ ತಿರುಗುಬಾಣವಾಗಿ ಪರಿಣಮಿಸಿದೆ. ಆತ ಆದಾಯ ತೆರಿಗೆ ಪಾವತಿ ಮಾಡಿರುವ ಹಣದ ಮೂಲ ಮಾದಕ ವಸ್ತುಗಳ ವ್ಯವಹಾರ ಎನ್ನುವುದು ಈಗ ಬೆಳಕಿಗೆ ಬಂದಿದೆ.
ಕೋರಮಂಗಲ ಪೊಲೀಸರು ರಾಚಪ್ಪ (34) ಹಾಗೂ ಆತನ ಸಹಚರ ಶ್ರೀನಿವಾಸ್ (47) ಎಂಬಾತನನ್ನು ಜ.20ರಂದು ಬಂಧಿಸಿದ್ದು, ಕೋರಮಂಗಲದ 80 ಅಡಿ ರಸ್ತೆಯ ಹೊಟೆಲ್ ವೊಂದರಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

ಕಟ್ಟಡ ಕಾರ್ಮಿಕ ರಾಚಪ್ಪ ಆದಾಯ ತೆರಿಗೆ ಪಾವತಿಸಿದ ಬಳಿಕ ಐಟಿ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಏಕೆಂದರೆ ರಾಚಪ್ಪ ತನ್ನ ಆದಾಯದ ಮೂಲ ಹೇಳಿಕೊಳ್ಳದೇ 40 ಲಕ್ಷ ರು. ತೆರಿಗೆ ಪಾವತಿಸಿದ್ದ. ಹೀಗಾಗಿ ಪೊಲೀಸರು ಈತನ ಮೇಲೆ ಕಳೆದೊಂದು ತಿಂಗಳಿಂದ ನಿಗಾ ಇಟ್ಟಿದ್ದರು.
ಈ ಬಗ್ಗೆ ತನಿಖೆ ಆರಂಭಿಸಿದಾಗ ರಾಚಪ್ಪ ಗಾಂಜಾ ಮತ್ತಿತರ ಮಾದಕವಸ್ತು ಸಾಗಾಟದಲ್ಲಿ ತೊಡಗಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ದಕ್ಕಿತ್ತು. ಆದರೆ ಸಾಕ್ಷಿ ಸಮೇತ ಹಿಡಿಯಲು ಪೊಲೀಸರು ಕಾಯುತ್ತಿದ್ದರು.
ಕಟ್ಟಡ ಕಾರ್ಮಿಕನೆಂದು ಹೇಳಿಕೊಳ್ಳುತ್ತಿದ್ದ ರಾಚಪ್ಪ 2013ರಿಂದ ಮಾದಕ ವಸ್ತು ಕಳ್ಳ ಸಾಗಾಟದಲ್ಲಿ ತೊಡಗಿಸಿಕೊಂಡಿದ್ದ.
ಹೀಗಾಗಿ ಕನಕಪುರ ರಸ್ತೆಯ ಸುಸಜ್ಜಿತ ವಿಲ್ಲಾದಲ್ಲಿ 40 ಸಾವಿರ ರು. ಬಾಡಿಗೆ ಮನೆಯಲ್ಲಿ ವಾಸವಿದ್ದು, ಲಕ್ಷುರಿ ಕಾರ್ ಬೇರೆ ಹೊಂದಿದ್ದ. ಅಲ್ಲದೇ ತನ್ನ ಸ್ವಂತ ಊರಿನಲ್ಲಿ ಆಸ್ತಿ ಬೇರೆ ಖರೀದಿಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿತ್ತು.
ಕಳೆದ ಜನವರಿ 20ರಂದು ಪೊಲೀಸರು 80 ಅಡಿ ರಸ್ತೆಯ ಹೊಟೆಲ್ ನಲ್ಲಿ ರಾಚಪ್ಪ ಮತ್ತು ಸಹಚರ ಗಾಂಜಾ ಮಾರಾಟ ಮಾಡುತ್ತಿದ್ದಾ ಎಂಬ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದರು. ರಾಚಪ್ಪ ಮತ್ತು ಶ್ರೀನಿವಾಸನನ್ನು ಬಂಧಿಸಲಾಯಿತು. ಈ ವೇಳೆ ಸಾಹು ಎಂಬಾತ ತಪ್ಪಿಸಿಕೊಂಡಿದ್ದಾರೆ. ಬಂಧಿತರಿಂದ 26 ಕೆಜಿ ಗಾಂಜಾ ಹಾಗೂ 5 ಲಕ್ಷ ರು. ನಗದು ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ಪ್ರತಿ ಕೆಜಿ ಗಾಂಜಾ 35 ಸಾವಿರ ರು.ಗಳಿಗೆ ಮಾರಾಟ ಮಾಡುತ್ತಿದ್ದರು. ತಿಂಗಳಿಗೆ ಸರಾಸರಿ 30 ಕೆಜಿ ಗಾಂಜಾ ಮಾರಾಟ ವಹಿವಾಟು ನಡೆಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.












Click it and Unblock the Notifications