ಬೆಂಗಳೂರಿನಲ್ಲಿ ನಕಲಿ ರೇಷನ್ ಕಾರ್ಡ್ ವಿರುದ್ಧ ಸಮರ
ಬೆಂಗಳೂರು, ನ.11 : ಬೆಂಗಳೂರು ನಗರದಲ್ಲಿ ನಕಲಿ ರೇಷನ್ ಕಾರ್ಡ್ ಗಳ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಕಾರ್ಡ್ ಕುರಿತು ತಪಾಸಣೆ ನಡೆಸುವ ಕಾರ್ಯಪಡೆ, ಅಗತ್ಯವಿದ್ದರೆ ಕಾರ್ಡ್ ಹೊಂದಿರುವ ವ್ಯಕ್ತಿಗಳ ಮನೆಗಳಿಗೂ ಭೇಟಿ ನೀಡುತ್ತಿದೆ. ಆದ್ದರಿಂದ ನಿಮ್ಮ ರೇಷನ್ ಕಾರ್ಡ್ ಅನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ.
ಬೆಂಗಳೂರು ನಗರದಲ್ಲಿ ನಕಲಿ ರೇಷನ್ ಕಾರ್ಡ್ ಗಳ ಹಾವಳಿ ಹೆಚ್ಚಾಗುತ್ತಿದೆ, ಪಡಿತರ ಅರ್ಹರಿಗೆ ತಲುಪುತ್ತಿಲ್ಲ ಎಂಬ ದೂರಿನ ಬಗ್ಗೆ ತನಿಖೆ ನಡೆಸಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಎರಡು ತಂಡಗಳನ್ನು ರಚಿಸಿದೆ. 21 ಅಧಿಕಾರಿಗಳ ಎರಡು ತಂಡ ಭಾನುವಾರದಿಂದ ನಗರದಲ್ಲಿ ಕಾರ್ಯಾಚರಣೆ ಆರಂಭಿಸಿದೆ.

ಈ ಕಾರ್ಯಪಡೆ ಮೊದಲು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿನ ಪಡಿತರ ವಿತರಣೆ, ರೇಷನ್ ಕಾರ್ಡ್ ಗಳ ಸಂಖ್ಯೆ ಮುಂತಾದ ಮಾಹಿತಿಗಳನ್ನು ಪರೀಕ್ಷಿಸುತ್ತದೆ. ರೇಷನ್ ಕಾರ್ಡ್ ವಿಳಾಸ ಸರಿಯಾಗಿ ಇಲ್ಲದಿರುವುದು, ಒಂದೇ ಹೆಸರಿನಲ್ಲಿ ಎರಡು ಕಾರ್ಡ್ ಇರುವುದು ಮುಂತಾದವುಗಳು ಪತ್ತೆಯಾದರೆ, ಕಾರ್ಡ್ ದಾರರ ಮನೆಗೆ ಭೇಟಿ ನೀಡುತ್ತಾರೆ.
ಹೆಚ್ಚು ನಕಲಿ ಕಾರ್ಡ್ ಪತ್ತೆಯಾದ ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲು ಕಾರ್ಯಪಡೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸೂಚಿಸುತ್ತದೆ. ನ್ಯಾಯಬೆಲೆ ಅಂಗಡಿಯ ಮಾಲೀಕನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಇಲಾಖೆ ಚಿಂತಿಸಿದೆ.
ಮೊದಲ ದಿನದ ಫಲಿತಾಂಶ : ಮೊದಲ ದಿನದ ಕಾರ್ಯಾಚರಣೆಯಲ್ಲಿ ತಂಡವೊಂದು ಚಾಮರಾಜಪೇಟೆಯ ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದುಗೊಳಿಸಿದೆ. ಈ ನ್ಯಾಯಬೆಲೆ ಅಂಗಡಿಯಲ್ಲಿ ಪರಿಶೀಲನೆ ನಡೆಸಿದಾಗ ಸುಮಾರು 250 ನಕಲಿ ರೇಷನ್ ಕಾರ್ಡ್ ಗಳು ಪತ್ತೆಯಾದವು. ಇವುಗಳಲ್ಲಿ 64 ಕಾರ್ಡ್ ಹೊಂದಿರುವ ವ್ಯಕ್ತಿಗಳಿಗೆ ಸರಿಯಾದ ವಿಳಾಸವೇ ಇರಲಿಲ್ಲ.
ಸದ್ಯ ಬೆಂಗಳೂರಿನಲ್ಲಿ ಆರಂಭವಾಗಿರುವ ಕಾರ್ಯಾಚರಣೆಯನ್ನು ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಅನ್ನಭಾಗ್ಯ ಯೋಜನೆಯಡಿ ಅರ್ಹರಿಗೆ ಪಡಿತರ ತಲುಪಬೇಕು, ನಕಲಿ ರೇಷನ್ ಕಾರ್ಡ್ ಸಂಖ್ಯೆಯನ್ನು ತಗ್ಗಿಸಬೇಕೆಂದು ಇಲಾಖೆ ಈ ಕಾರ್ಯಪಡೆ ರಚಿಸಿದೆ.












Click it and Unblock the Notifications