ಶಿವರಾಮಕಾರಂತ ಬಡಾವಣೆ ವಿವಾದ: ಜುಲೈ 1 ರಿಂದ ಸಹಾಯವಾಣಿ ಕೇಂದ್ರ ಕಾರ್ಯಾರಂಭ
ಬೆಂಗಳೂರು, ಜೂ. 28: ಡಾ. ಕೆ. ಶಿವರಾಮ ಕಾರಂತ ಬಡಾವಣೆ ವಿವಾದ ಕುರಿತು ನ್ಯಾ. ಚಂದ್ರಶೇಖರ್ ಸಮಿತಿ ವತಿಯಿಂದ ಪ್ರಾರಂಭಿಸಲಾಗಿದ್ದ ನಾಲ್ಕು ಸಹಾಯ ಕೇಂದ್ರಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಲಾಗಿತ್ತು. ಇದೀಗ ಜು. 1 ರಿಂದ ಎರಡು ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಡಾ. ಕೆ. ಶಿವರಾಮಕಾರಂತ ಬಡಾವಣೆ ವಿವಾದ ಸಂಬಂಧ ಅಹವಾಲು ಸಲ್ಲಿಸಲು ನ್ಯಾ. ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯಾ. ಚಂದ್ರಶೇಖರ್ ಅವರು, ''ಡಾ. ಶಿವರಾಮಕಾರಂತ ಬಡಾವಣೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ನಿರ್ದೇಶನ ಮೇರೆಗೆ ನಾಲ್ಕು ಸಹಾಯ ಕೇಂದ್ರಗಳ್ನು ತೆರೆದು ಅಹವಾಲು ಸ್ವೀಕರಿಸಲಾಗಿತ್ತು. ಕೋವಿಡ್ ಎರಡನೇ ಅಲೆ ಬಂದ ಹಿನ್ನೆಲೆಯಲ್ಲಿ ನಾಲ್ಕು ಕೇಂದ್ರಗಳನ್ನು ಕಳೆದ ಏಪ್ರಿಲ್ ನಲ್ಲಿ ಮುಚ್ಚಲಾಗಿತ್ತು. ಇದೀಗ ಎರಡು ಸಹಾಯ ಕೇಂದ್ರಗಳನ್ನು ಜು. 1 ರಿಂದ ತೆರೆಯಲಾಗಿದೆ. ಶಿವರಾಮಕಾರಂತ ಬಡಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಅಹವಾಲು ಸಲ್ಲಿಸಬಹುದು,'' ಎಂದು ಮನವಿ ಮಾಡಿದರು.
ಸುಮಾರು 3600 ಎಕರೆ ಜಾಗದಲ್ಲಿ ಡಾ. ಶಿವರಾಮಕಾರಂತ ಬಡಾವಣೆ ನಿರ್ಮಿಸಲು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ, ಸರ್ಕಾರದ ಪ್ರಾಥಮಿಕ ಅಧಿಸೂಚನೆಯನ್ನು 2014ರಲ್ಲಿ ರಾಜ್ಯ ಹೈಕೋರ್ಟ್ ರದ್ದು ಮಾಡಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಶಿವರಾಮಕಾರಂತ ಬಡಾವಣೆ ನಿರ್ಮಾಣ ಸಂಬಂಧ ಸುಪ್ರೀಂಕೋರ್ಟ್ 2018 ರಲ್ಲಿ ನೀಡಿದ್ದ ತೀರ್ಪಿನ ಅನ್ವಯ ಅಂತಿಮ ಆದೇಶ ಹೊರಡಿಸಿತ್ತು. ಅಲ್ಲದೇ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ತೀರ್ಪು ನಡುವಿನ ಅವಧಿಯಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದ ಬಡಾವಣೆಯ ಜಾಗದಲ್ಲಿ ನಿರ್ಮಾಣವಾಗಿರುವ ಕಟ್ಟಡ, ರಚನೆಯಾಗಿರುವ ಬಡಾವಣೆ ಕುರಿತ ವಿವಾದ ಇತ್ಯರ್ಥ ಪಡಿಸುವ ಸಂಬಂಧ ನ್ಯಾ. ಎ. ವಿ. ಚಂದ್ರಶೇಖರ್ ಸಮಿತಿ ರಚನೆ ಮಾಡಿತ್ತು. ಈ ಕುರಿತು ಸಮಗ್ರ ಅಧ್ಯಯನ ನಡೆಸಿ ವರದಿ ನೀಡಲು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಶಿವರಾಮ ಕಾರಂತ ಬಡಾವಣೆ ಯಲ್ಲಿ 2014 ರಿಂದ 2018 ರ ಅವಧಿಯಲ್ಲಿ ಅಧಿಕೃತವಾಗಿ ಹಾಗೂ ಅನಧಿಕೃತವಾಗಿ ನಿರ್ಮಾಣವಾಗಿರುವ ಬಡಾವಣೆ, ಕಟ್ಟಡ, ವಾಣಿಜ್ಯ ಕಟ್ಟಡ ಕುರಿತು ನ್ಯಾ. ಎ. ವಿ. ಚಂದ್ರಶೇಖರ್ ನೇತೃತ್ವದ ಸಮಿತಿ ಸುಪ್ರೀಂಕೋರ್ಟ್ ಗೆ ವರದಿ ನೀಡಲಿದೆ.
ಇನ್ನು ಇದೇ ಅವಧಿಯಲ್ಲಿ ಕಾನೂನು ಬದ್ಧವಾಗಿ ಬಿಡಿಎ ವತಿಯಿಂದ ಅನುಮೋದನೆ ಪಡೆದು ರಚನೆಯಾಗಿರುವ ಬಡಾವಣೆ, ಅನಿಧಕೃತ ಬಡಾವಣೆ ನಿರ್ಮಾಣ ಮತ್ತು ಪರಭಾರೆಗೆ ಸಂಬಂಧಿಸಿದಂತೆ ಭೂಮಿ, ನಿವೇಶನ ಖರೀದಿ ಮಾಡಿದವರ ಹಿತಾಸಕ್ತಿ ಇಟ್ಟುಕೊಂಡು ಸುಪ್ರೀಂಕೋರ್ಟ್ ಮೇ ನಲ್ಲಿ ಮಹತ್ದದ ತೀರ್ಪು ನೀಡಿದೆ. ಇದರಿಂದಲೂ ಭೂ ಮಾಲೀಕರಿಗೆ ಹಾಗೂ ಖರೀದಿದಾರರಿಗೆ ಅನುಕೂಲವಾಗಲಿದೆ. ಹೀಗಾಗಿ ಡಾ. ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಸಂಬಂಧ ಅಹವಾಲುಗಳನ್ನು ಸಲ್ಲಿಸಬಹುದು. ಮೊದಲ ಹಂತದಲ್ಲಿ ಮೇಡಿ ಅಗ್ರಹಾರ ಹಾಗೂ ಬ್ಯಾಲಕೆರೆಯಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಕೋವಿಡ್ ನಿಯಮಗಳ ಅನುಗುಣವಾಗಿ ಸಹಾಯ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ ಎಂದು ನ್ಯಾ. ಎ.ವಿ. ಚಂದ್ರಶೇಖರ್ ತಿಳಿಸಿದರು.

ಕೋಡಿಹಳ್ಳಿ ವಿರುದ್ಧ ನ್ಯಾಯಾಂಗ ನಿಂದನೆ: ಡಾ. ಶಿವರಾಮಕಾರಂತ ಬಡಾವಣೆ ಕುರಿತು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಜನರಲ್ಲಿ ಸುಳ್ಳು ಮಾಹಿತಿ ಬಿತ್ತರಿಸಿದ್ದಾರೆ. ಇದರಿಂದ ಅನೇಕರು ಗೊಂದಲಕ್ಕೆ ಈಡಾಗಿದ್ದಾರೆ. ಈ ಕುರಿತು ನ್ಯಾಯಾಂಗ ನಿಂದನೆ ಕುರಿತು ವರದಿ ನೀಡಲಾಗಿದೆ. ಇದರ ಜತೆಗೆ ಜನರಲ್ಲಿ ತಪ್ಪು ಮಾಹಿತಿ ಬಿತ್ತರಿಸಿ ದಾರಿ ತಪ್ಪಿಸಿದ ಜತೆಗೆ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Recommended Video
ಈ ಗೊಂದಲದಿಂದ ಕೆಲವರು ದಾಖಲೆಗಳನ್ನು ಹಾಗೂ ವಿವರಗಳನ್ನು ಸಲ್ಲಿಸುವಲ್ಲಿ ಗೊಂದಲಕ್ಕೆ ಈಡಾಗಿದ್ದಾರೆ. ಈಗಾಗಲೇ 3 ಸಾವಿರ ಅರ್ಜಿ ಹಾಗೂ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಇನ್ನೂ ಎರಡು ಸಾವಿರಕ್ಕೂ ಅಧಿಕ ಅಹವಾಲು ಸ್ವೀಕರಿಸಬೇಕಿದೆ. ಬಡಾವಣೆ ನಿವಾಸಿಗಳು ಯಾವುದೇ ಆತಂಕಕ್ಕೆ ಹಾಗೂ ಗೊಂದಲಗಳಿಗೆ ಒಳಗಾಗದೇ ದಾಖಲೆಗಳನ್ನು ಸಲ್ಲಿಸಬಹುದು. ಜು. 1 ರಿಂದ ಎರಡು ಸಹಾಯ ಕೇಂದ್ರಗಳು ಕಾರ್ಯಾರಂಭವಾಗಲಿವೆ ಎಂದು ನ್ಯಾ. ಎ.ವಿ. ಚಂದ್ರಶೇಖರ್ ತಿಳಿಸಿದರು.












Click it and Unblock the Notifications