ಮನೆ-ಮನೆ ಕಸ ಸಂಗ್ರಹ; 5 ವರ್ಷಗಳ ಟೆಂಡರ್ ನೀಡಲಿದೆ ಬಿಬಿಎಂಪಿ
ಬೆಂಗಳೂರು, ಏಪ್ರಿಲ್ 14; ಮನೆ-ಮನೆ ಕಸ ಸಂಗ್ರಹದಲ್ಲಿ ಮಹತ್ವದ ಬದಲಾವಣೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೀರ್ಮಾನಿಸಿದೆ. ಒಂದು ವರ್ಷದ ಬದಲು 5 ವರ್ಷಗಳ ಕಾಲ ಟೆಂಡರ್ ವಿಸ್ತರಣೆ ಮಾಡಿದೆ.
ವಾರ್ಡ್ಗಳನ್ನು ಕಸ ಮುಕ್ತಗೊಳಿಸುವ ಉದ್ದೇಶದಿಂದ ಕೆಲವು ಬದಲಾವಣೆಗಳನ್ನು ಬಿಬಿಎಂಪಿ ತರುತ್ತಿದೆ. ಕಸ ಸಂಗ್ರಹ ಗುತ್ತಿಗೆ ಅವಧಿ ವಿಸ್ತರಣೆ ಮಾಡುವುದಾಗಿ ಗುತ್ತಿಗೆದಾರರಿಗೆ ಸಹಾಯಕವಾಗಲಿದೆ.
5 ವರ್ಷಗಳ ಅವಧಿಗೆ ಟೆಂಡರ್ ನೀಡುವುದರಿಂದ ಕಸ ಸಂಗ್ರಹಕ್ಕೆ ಗುತ್ತಿಗೆ ಪಡೆದವರು ಕಸ ವಿಲೇವಾರಿಗಾಗಿ ನಾಲ್ಕು ಚಕ್ರದ ವಾಹನ ಖರೀದಿ ಮಾಡಲು ಸಹಾಯಕವಾಗುತ್ತದೆ. ವಾರ್ಡ್ ಕಸಮುಕ್ತವಾಗಿಸಲು ಅವರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಬಿಎಂಪಿ ಪ್ರತಿ ವಾರ್ಡ್ನಲ್ಲಿನ ಕಸ ಸಂಗ್ರಹಕ್ಕೆ ಸುಮಾರು 10 ರಿಂದ 45 ಲಕ್ಷದ ತನಕ ಖರ್ಚು ಮಾಡುತ್ತದೆ. ಇದರಲ್ಲಿ ಕಸ ಸಂಗ್ರಹಕ್ಕಿಂತ ಅದನ್ನು ಸಾಗಣೆ ಮಾಡವ ವೆಚ್ಚವೇ ಅಧಿಕವಾಗಿದೆ. ಇದರಿಂದಾಗಿ ಗುತ್ತಿಗೆ ಪಡೆದವರಿಗೂ ನಷ್ಟವಾಗಲಿದೆ.
ಮನೆ-ಮನೆ ಕಸ ಸಂಗ್ರಹಕ್ಕಾಗಿ ಬಿಬಿಎಂಪಿ ಪ್ರತಿ ವರ್ಷ ಟೆಂಡರ್ ಕರೆಯುತ್ತದೆ. ಟೆಂಡರ್ ಪಡೆದವರು ಒಂದು ವರ್ಷಗಳ ಕಾಲ ಕಸ ಸಂಗ್ರಹ ಮಾಡುತ್ತಾರೆ. ಆಗ ಲಭ್ಯವಿರುವ ಲಾರಿಗಳನ್ನು ಮಾತ್ರ ಕಸ ಸಾಗಣೆಗೆ ಬಳಕೆ ಮಾಡಿಕೊಳ್ಳುತ್ತಾರೆ.
ಬಿಬಿಎಂಪಿ 110 ವಾರ್ಡ್ಗಳಿಗೆ ಕಸ ಸಂಗ್ರಹಣೆ ಮಾಡಲು ಟೆಂಡರ್ ಕರೆಯುತ್ತದೆ. ಗುತ್ತಿಗೆದಾರರು, ಜನಪ್ರತಿನಿಧಿಗಳು ಉಳಿದ ವಾರ್ಡ್ಗಳಿಗೆ ಸಹ ಟೆಂಡರ್ ಕರೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಅಧಿಕಾರಿಗಳ ಸರಣಿ ಸಭೆ; ಮನೆ-ಮನೆ ಕಸ ಸಂಗ್ರಹದ ಟೆಂಡರ್ ಅಂತಿಮಗೊಳಿಸಲು ಬಿಬಿಎಂಪಿಯಲ್ಲಿ ಒಂದು ವಾರದಿಂದ ಅಧಿಕಾರಿಗಳು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಬಿಬಿಎಂಪಿ ಕಾರ್ಯಸಾಧ್ಯತೆ ವರದಿ ಆಧರಿಸಿ ಹಿಂದೆ ಟೆಂಡರ್ ಪಡೆದವರಿಗೆ ಮತ್ತೆ ಟೆಂಡರ್ ನೀಡಲು ತೀರ್ಮಾನಿಸಿದೆ.
ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದ ಗುತ್ತಿಗೆದಾರರಿಗೆ ಮನೆಯಿಂದ ಕಸ ಸಂಗ್ರಹ, ವಾಣಿಜ್ಯ ಮಳಿಗೆಗಳ ಕಸ ಸಂಗ್ರಹ ಎರಡೂ ಗುತ್ತಿಗೆಗಳನ್ನು ನೀಡಲು ತೀರ್ಮಾನಿಸಲಾಗಿದೆ. ಮನೆ-ಮನೆ ಕಸ ಸಂಗ್ರಹಕ್ಕೆ ಈಗ ಉಪಯೋಗ ಮಾಡುತ್ತಿರುವ ಆಟೋಗಳು ಬಹಳ ಹಳೆಯವು.
"ಗುತ್ತಿಗೆ ಪಾರದರ್ಶಕವಾಗಿ ನಡೆಯುವುದಾದರೆ, ಕಸ ಸಂಗ್ರಹ ಉತ್ತಮವಾಗಿ ನಡೆಯುವುದಾದರೆ 5 ವರ್ಷಗಳ ಕಾಲ ಟೆಂಡರ್ ಅವಧಿಯನ್ನು ವಿಸ್ತರಣೆ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ" ಎಂದು ಬಿಬಿಎಂಪಿಯ ಮಾಜಿ ಸದಸ್ಯ ಎನ್. ಆರ್. ರಮೇಶ್ ಹೇಳಿದ್ದಾರೆ.
ಇದುವರೆಗೆ ಕಪ್ಪುಪಟ್ಟಿಗೆ ಸೇರಿದ, ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಗುತ್ತಿಗೆದಾರರಿಗೆ ಟೆಂಡರ್ ನೀಡಬಾರದು ಎಂದು ಬೇಡಿಕೆ ಇಡಲಾಗಿದೆ. ಕಸ ಸಂಗ್ರಹ ಗುತ್ತಿಗೆ ಪಡೆದವರು ಸಹ 5 ವರ್ಷಗಳಿಗೆ ಟೆಂಡರ್ ವಿಸ್ತರಣೆ ಮಾಡುವ ತೀರ್ಮಾನವನ್ನು ಸ್ವಾಗತಿಸಿದ್ದಾರೆ.
ಕ್ಯೂ ಆರ್ ಕೋಡ್ ಪರಿಚಯ; ಬೆಂಗಳೂರು ನಗರದಲ್ಲಿ ಪ್ರತಿನಿತ್ಯ ಸುಮಾರು 4,500 ಟನ್ ಕಸ ಸಂಗ್ರಹವಾಗುತ್ತದೆ. ಆದರೆ ಕೆಲವು ಬಡಾವಣೆಗಳಲ್ಲಿ ಟಿಪ್ಪರ್ಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂಬ ಆರೋಪವಿದೆ. ಇದರಿಂದಾಗಿ ಜನರು ಎಲ್ಲೆಂದರಲ್ಲಿ ಕಸ ಬಿಸಾಕಿ ಬ್ಲಾಕ್ ಸ್ಪಾಟ್ ನಿರ್ಮಾಣವಾಗುತ್ತದೆ.
ಇದರಿಂದಾಗಿ ಪ್ರತಿ ಮನೆಯಿಂದ ತ್ಯಾಜ್ಯ ಸಂಗ್ರಹಣೆ ಖಚಿತಪಡಿಸಿಕೊಳ್ಳಲು ಕ್ಯೂ ಆರ್ ಕೋಡ್ ಪರಿಚಯಿಸಲು ಚರ್ಚಿಸಲಾಗಿದೆ. ಪೌರ ಕಾರ್ಮಿಕರು ಮನೆಯ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಬಳಿಕ ಕಸ ಸಂಗ್ರಹ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ.
ಈ ಕುರಿತು ಇನ್ನೂ ಬಿಬಿಎಂಪಿಯಲ್ಲಿ ಪ್ರಾಥಮಿಕ ಹಂತದ ಚರ್ಚೆಗಳು ನಡೆಯುತ್ತವೆ. ಇದರ ಸಾಧಕ-ಬಾಧಕಗಳ ಬಗ್ಗೆ ತೀರ್ಮಾನಿಸಿದ ಬಳಿಕ ಕ್ಯೂ ಆರ್ ಕೋಡ್ ಪರಿಚಯ ಮಾಡುವ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.












Click it and Unblock the Notifications