ಸತ್ತವರ ಮನೆಗೆ ಸದಾನಂದಗೌಡರನ್ನು ಕರಿಬೇಡಿ: ಕುಮಾರಸ್ವಾಮಿ
ಬೆಂಗಳೂರು, ನವೆಂಬರ್ 29: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರನ್ನು ಯಾವುದೇ ಕಾರಣಕ್ಕೂ ಸತ್ತವರ ಮನೆಗೆ ಕರೆದುಕೊಂಡು ಹೋಗಬೇಡಿ, ಅವರು ಅಲ್ಲಿಯೂ ನಗ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪರವಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿ ಅವರು ಕೇಂದ್ರ ಸಚಿವರ ವಿರುದ್ದ ಹರಿಹಾಯ್ದರು. ನಾನು ಹೃದಯಪೂರ್ವಕ ಕಣ್ಣೀರು ಹಾಕಿದ್ದನ್ನೇ ಹೀಯಾಳಿಸುವ ಸದಾನಂದಗೌಡರು, ಅವರು ಸತ್ತವರ ಮನೆಯಲ್ಲೂ ನಗ್ತಾರೆ ಎಂದು ತಿರುಗೇಟು ನೀಡಿದರು.
ಸತ್ತವರ ಮನೆಗೆ ಹೋಗಿ ಹೀ.. ಹೀ.. ಅಂತಾ ಹಲ್ಲು ಕಿರಿತಾರೆ ಎಂದು ಅಣಕಿಸಿ ತೋರಿಸಿದ ಕುಮಾರಸ್ವಾಮಿ, ಅವರನ್ನು ದಯವಿಟ್ಟು ಶವವಿರುವ ಮನೆಗೆ ಕರೆದುಕೊಂಡು ಹೋಗಬೇಡಿ ಅವರು ಅಲ್ಲಿಯೂ ಸತ್ತಿದ್ದಾರಾ ಎಂದು ನಗ್ತಾ ಕೇಳುತ್ತಾರೆ ಎಂದು ವ್ಯಂಗ್ಯವಾಡಿದರು.

ಇನ್ನು ಸಚಿವ ವಿ.ಸೋಮಣ್ಣ ವಿರುದ್ದವೂ ಕುಮಾರಸ್ವಾಮಿ ಗುಡುಗಿದರು. ಸೋಮಣ್ಣ ಜನತಾ ಬಜಾರ್ ನಲ್ಲಿ ಬಟ್ಟೆ ಕದ್ದು ಸಿಕ್ಕಾಕೊಂಡಿದ್ದರು, ದೇವೇಗೌಡರ ಮುಂದೆ ಅವರು ಬಚ್ಚಾ ಎಂದು ವಾಗ್ದಾಳಿ ನಡೆಸಿದರು.
ಮಹಾಲಕ್ಷ್ಮೀ ಲೇಔಟ್ ನ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯರನ್ನು ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, ನಾನು ಮತ್ತು ದೇವೇಗೌಡರು ಇಲ್ಲದಿದ್ದರೆ ಗೋಪಾಲಯ್ಯ ಯಾವತ್ತೋ ಎನ್ ಕೌಂಟರ್ ಆಗುತ್ತಿದ್ದರು ಎಂದರು. ಪೊಲೀಸರಿಂದ ಅಲ್ಲ, ರೌಡಿಗಳಿಂದಲೇ ಎನ್ ಕೌಂಟರ್ ಆಗಿರುತ್ತಿದ್ದರು ಎಂದು ಹೆಚ್ಡಿಕೆ ಆರೋಪಿಸಿದರು.
ಮಹಾಲಕ್ಷ್ಮೀ ಲೇಔಟ್ ನಲ್ಲಿ ಬಿಜೆಪಿಯಿಂದ ಗೋಪಾಲಯ್ಯ, ಕಾಂಗ್ರೆಸ್ ನಿಂದ ಎಂ.ಶಿವರಾಜು, ಜೆಡಿಎಸ್ ನಿಂದ ಗಿರೀಶ್ ನಾಶಿ ಉಪ ಚುನಾವಣಾ ಆಖಾಡದಲ್ಲಿದ್ದಾರೆ. ಡಿಸೆಂಬರ್ 05 ರಂದು ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications