ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಜಾತಕ ಸರಿಯಿಲ್ಲ: ಆರ್.ಅಶೋಕ್..
ಬೆಂಗಳೂರು, ಜೂನ್ 29: ಕಾಂಗ್ರೆಸ್ ಸಚಿವರು ಕ್ಷಿಪ್ರ ಕ್ರಾಂತಿಯ ಬಗ್ಗೆ ಹೇಳಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಆಗಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜಾತಕ ಸರಿಯಿಲ್ಲ. ಅಧಿಕಾರವನ್ನು ಅವರು ಒದ್ದು ಕಿತ್ತುಕೊಳ್ಳಬೇಕಿದೆ. ಅವರಿಗೆ ನೈಸರ್ಗಿಕವಾದ ಯೋಗವಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಭಾನುವಾರ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಆರ್ಥಿಕವಾಗಿ ದಿವಾಳಿಯಾಗಿದೆ. ನಮ್ಮ ಕ್ಲಿನಿಕ್ ಸಿಬ್ಬಂದಿಗೆ ಸಂಬಳ ನೀಡಿಲ್ಲ. ಶಾಸಕ ಬಿ.ಆರ್.ಪಾಟೀಲ್ ಹಾಗೂ ಇನ್ನಷ್ಟು ಶಾಸಕರು ಕಾಮಗಾರಿ ನಡೆಯುತ್ತಿಲ್ಲ ಎಂದು ದೂರಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಜನರ ಮೇಲೆ ಇನ್ನಷ್ಟು ತೆರಿಗೆ ಹೇರಲಿದ್ದಾರೆ. ಜನರು ಮನೆ ಕಟ್ಟಲು ಮುಂದಾದರೆ ಸರ್ಕಾರಕ್ಕೆ ಕಪ್ಪ ಕಾಣಿಕೆ ಕೊಡಬೇಕಾಗುತ್ತದೆ. ಸರ್ಕಾರಕ್ಕೆ ವಿಶೇಷ ದಕ್ಷಿಣೆ ನೀಡಬೇಕಿದೆ ಎಂದರು.

ಸಂವಿಧಾನಕ್ಕೆ 68 ಬಾರಿ ತಿದ್ದುಪಡಿ ತಂದ ಕಾಂಗ್ರೆಸ್, ಜಾತ್ಯತೀತ ಪದದ ಬಗ್ಗೆ ಮಾತನಾಡುತ್ತಿದೆ. ಆದರೆ ಬಾಬಾ ಸಾಹೇಬರು ಬರೆದ ಸಂವಿಧಾನದಲ್ಲಿ ಜಾತ್ಯತೀತ ಪದವೇ ಇಲ್ಲ. ಆರ್ಎಸ್ಎಸ್ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಹೇಳಿದ್ದು ಕಾಂಗ್ರೆಸ್ನವರು ಸೇರಿಸಿದ ಪದಗಳ ಬಗ್ಗೆ. ನಾನು ಒಕ್ಕಲಿಗ ಎಂದು ಗುರುತಿಸಿಕೊಳ್ಳುತ್ತೇನೆ. ಎಲ್ಲರೂ ಅವರ ಜಾತಿಯನ್ನು ಗುರುತಿಸಿಕೊಳ್ಳುತ್ತಾರೆ. ಅಂದಮೇಲೆ ಜಾತ್ಯತೀತ ಎಂಬುದಕ್ಕೆ ಅರ್ಥವಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಜಾತ್ಯತೀತ ಹಾಗೂ ಸಮಾಜವಾದ ಎಂಬ ಪದ ಎಲ್ಲಿದೆ ಎಂದು ಕಾಂಗ್ರೆಸ್ ನಾಯಕರು ತೋರಿಸಲಿ ಎಂದು ತಿರುಗೇಟು ನೀಡಿದರು.
ಸಮೀಕ್ಷೆ ಬೇಕೆನ್ನುವವರೇ ಜಾತ್ಯಾತೀತ ಅಂತಾರೆ
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಒಂದು ಕಡೆ ಜಾತಿ ಸಮೀಕ್ಷೆ ಬೇಕೆಂದು ಹೇಳುತ್ತಾರೆ. ನಂತರ ಜಾತ್ಯಾತೀತ ಎನ್ನುತ್ತಾರೆ. ಜವಹರಲಾಲ್ ನೆಹರು ಅವರು ಒಂದನೇ ತಿದ್ದುಪಡಿ ತಂದರು. ಒಟ್ಟು 17 ತಿದ್ದುಪಡಿಗಳನ್ನು ಅವರು ಮಾಡಿದ್ದಾರೆ. ನಂತರ ಬಂದ ಇಂದಿರಾಗಾಂಧಿ 26 ತಿದ್ದುಪಡಿ ಮಾಡಿದ್ದಾರೆ. ಬಾಬಾ ಸಾಹೇಬರ ಮೂಲ ಆಶಯಗಳನ್ನೇ ತಿದ್ದುಪಡಿ ಮಾಡಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್ 68 ತಿದ್ದುಪಡಿಗಳನ್ನು ಮಾಡಿದೆ ಎಂದು ವಿವರಿಸಿದರು.
ತುರ್ತು ಪರಿಸ್ಥಿತಿ ತರಬೇಕೆಂದು ಯಾವ ಸಂವಿಧಾನದಲ್ಲಿ ಎಲ್ಲಿ ಬರೆದಿದ್ದಾರೆ ಎಂದು ಕಾಂಗ್ರೆಸ್ ಹೇಳಬೇಕು. ಕಾಂಗ್ರೆಸ್ನವರು ಕುತಂತ್ರ ಮಾಡಿ ಈ ಎರಡೂ ಪದಗಳನ್ನು ಸೇರಿಸಿದ್ದಾರೆ. ಈ ಬಗ್ಗೆ ಚರ್ಚೆಯಾಗಬೇಕಿದೆ.
ಗೃಹ ಇಲಾಖೆ ಕಾಂಗ್ರೆಸ್ನ ಡಿಪಾರ್ಟ್ಮೆಂಟ್ ಆಗಿದೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿ ಪತ್ರಕರ್ತರನ್ನು ಜೈಲಿಗೆ ಹಾಕಿದ್ದರು. ಅದೇ ರೀತಿ ಗೃಹ ಇಲಾಖೆಯ ಹೊಸ ಕಾನೂನು ತಂದು, ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಬರೆಯುವವರ ವಿರುದ್ಧ ಕ್ರಮ ವಹಿಸಲಿದೆ. ಇದರಿಂದ ಪತ್ರಕರ್ತರನ್ನು ಜೈಲಿಗೆ ಹಾಕಲಾಗುತ್ತದೆ. ಗ್ಯಾರಂಟಿಗಳನ್ನು ನಿಲ್ಲಿಸಲು ಹೈಕಮಾಂಡ್ ಬಿಡುತ್ತಿಲ್ಲ. ಅದಕ್ಕಾಗಿ ಹಣ ಉಳಿಸಲು ಪಿಂಚಣಿ ಸೇರಿದಂತೆ ಎಲ್ಲ ಯೋಜನೆಗಳಲ್ಲಿ ಹಣ ಕಡಿತ ಮಾಡಲಾಗುತ್ತದೆ. ಅನೇಕ ಫಲಾನುಭವಿಗಳನ್ನು ಅನರ್ಹ ಮಾಡಲಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಮಟ್ಟದಲ್ಲಿ ಸಮಸ್ಯೆ ಪರಿಹರಿಸಲು ಸಮಿತಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನೇತೃತ್ವದ ಬಿಜೆಪಿ ಸಮಿತಿಯ ಸಭೆಗೆ ಹೋಗಲು ಸಾಧ್ಯವಾಗಿಲ್ಲ. ನಾನು ಆಗ ದೆಹಲಿಯಲ್ಲಿ ಉಳಿದಿದ್ದೆ. ಪ್ರತಿ ಜಿಲ್ಲೆಗೆ ಹೋಗಿ ಜಿಲ್ಲಾಮಟ್ಟದಲ್ಲಿ ಸಮಸ್ಯೆ ಪರಿಹರಿಸಲು ಈ ಸಮಿತಿ ರಚಿಸಲಾಗಿದೆ. ಸರ್ಕಾರದ ವಿರುದ್ಧ ಬಿಜೆಪಿ ಯಶಸ್ವಿಯಾಗಿ ಹೋರಾಟಗಳನ್ನು ಮಾಡಿದೆ. ಆದರೆ ಜಿಲ್ಲಾಮಟ್ಟದಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಿದರೆ ಹೋರಾಟಗಳನ್ನು ಇನ್ನಷ್ಟು ವೇಗವಾಗಿ ಮಾಡಬಹುದು ಎಂಬ ಅಭಿಪ್ರಾಯ ಬಂದಿದೆ. ಬಿಜೆಪಿಯಲ್ಲಿ ಎಲ್ಲರೂ ಒಂದಾಗಿ ಹೋಗಲೇಬೇಕಿದೆ. ಆಗಲೇ ಪಕ್ಷಕ್ಕೆ ಕಳೆ ಬರಲಿದೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೇಳಿದರು.












Click it and Unblock the Notifications