Pothole Issue: ಬೆಂಗಳೂರಲ್ಲಿ 12000 ರಸ್ತೆಗುಂಡಿಗಳಲ್ಲಿ ಮುಚ್ಚಿದ್ದೆಷ್ಟು?: ಡಿಕೆ ಶಿವಕುಮಾರ್ ಅಪ್ಡೇಟ್ಸ್
ಬೆಂಗಳೂರು, ಸೆಪ್ಟಂಬರ್ 20: ಬೆಂಗಳೂರಿನಲ್ಲಿ ರಸ್ತೆ ಗುಂಡಿ ಸಮಸ್ಯೆ ಉಲ್ಬಣಿಸಿದ್ದು, ಅದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಿದೆ. ಈಗಾಗಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಆಯುಕ್ತರು, ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬಾಕಿ ಇರುವ 5000ಕ್ಕೂ ಅಧಿಕ ಗುಂಡಿಗಳ ಮುಚ್ಚುವ ಕಾರ್ಯ ಮುಂದುವರಿದಿದೆ ಎಂದು ಭಾನುವಾರ ಅಪ್ಡೇಟ್ ನೀಡಿದರು.
ಹೌದು, ಬೆಂಗಳೂರಿನಲ್ಲಿ ರಸ್ತೆ ಗುಂಡಿ ಸಮಸ್ಯೆ, ಸಂಚಾರ ತಾಪತ್ರಯ ಎಷ್ಟಿದೆ ಎಂದರೆ ಇಲ್ಲಿನ ಐಟಿ ಕಂಪನಿಯೊಂದು ನಗರ ತೊರೆಯಲು ಮನಸ್ಸು ಮಾಡುವಷ್ಟರ ಮಟ್ಟಿಗಿದೆ. ಇಂತಹ ಸಮಸ್ಯೆಗೆ ಕಡಿವಾಣ ಹಾಕಲು ಮತ್ತು ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಗಳನ್ನು ಪರಿಹರಿಸಲು ನಾನು ಬದ್ಧನಾಗಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದರು.

ಸುದ್ದಿಗಾರರ ಜೊತೆಗೆ ಮಾತನಾಡಿರುವ ಅವರು, ವಿರೋಧ ಪಕ್ಷಗಳು ರಾಜಕೀಯದಲ್ಲಿ ನಿರತವಾಗಿವೆ. ಹೀಗಿದ್ದರೂ, ಬೆಂಗಳೂರಿಗರ ದೈನಂದಿನ ಸಂಚಾರ ಸಮಸ್ಯೆ ಪರಿಹರಿಸಲು, ಸಂಚಾರ ಸುಧಾರಣೆಯ ಕೆಲಸ ಮಾಡುತ್ತಿದ್ದೇವೆ. ಸುಮಾರು 7000 ರಸ್ತೆ ಗುಂಡಿಗಳನ್ನು ಈಗಾಗಲೇ ದುರಸ್ತಿ ಮಾಡಲಾಗಿದೆ. ಸದ್ಯ 5000 ಕ್ಕೂ ಹೆಚ್ಚು ರಸ್ತೆ ಗುಂಡಿಗಳ ಕೆಲಸ ಮುಂದುವರೆದಿದೆ ಎಂದು ಅವರು ರಸ್ತೆಗುಂಡಿಗಳ ಲೆಕ್ಕ ಕೊಟ್ಟರು.
ನಗರದಾದ್ಯಂತ ಸಮಸ್ಯಾತ್ಮಕ ಸ್ಥಳಗಳನ್ನು ವರದಿ ಮಾಡುವ ಮೂಲಕ ನಾಗರಿಕರು ಮತ್ತು ಪೊಲೀಸರು ಸಕ್ರಿಯವಾಗಿ ನಮಗೆ ಸಹಾಯ ಮಾಡುತ್ತಿದ್ದಾರೆ. ನಮ್ಮ ಸರ್ಕಾರವು ಪಕ್ಷಪಾತವಿಲ್ಲದೆ ಹಣವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ರಸ್ತೆ ಕಾಮಗಾರಿಗಳಿಗಾಗಿ ಬಿಜೆಪಿ ಶಾಸಕರಿಗೂ ₹25 ಕೋಟಿ ಸಿಕ್ಕಿದೆ. ಆದರೆ ಅವರು ಕೆಲಸವನ್ನು ಪೂರ್ಣಗೊಳಿಸುವ ಬದಲು ಸರ್ಕಾರದ ವಿರುದ್ಧ ದೂಷಿಸುವ ರಾಜಕೀಯ ಆಟವಾಡುತ್ತಿದ್ದಾರೆ. ನಮ್ಮ ಸರ್ಕಾರವು ನಮ್ಮ ಜನರಿಗೆ ಜೀವನವನ್ನು ಸುರಕ್ಷಿತ ಮತ್ತು ಸುಗಮಗೊಳಿಸುವ ಪರಿಹಾರಗಳಿಗೆ ಬದ್ಧವಾಗಿದೆ ಎಂದು ಅವರು ತಿರುಗೇಟು ನೀಡಿದರು. ನಮ್ಮ ಬೆಂಗಳೂರು ಅದ್ಭುತವಾಗಿತ್ತು, ಅದ್ಭುತವಾಗಿದೆ ಮತ್ತು ಯಾವಾಗಲೂ ಉತ್ತಮವಾಗಿರುತ್ತದೆ ಎಂದು ಭರವಸೆ ನೀಡಿದರು.
ಆದಷ್ಟು ಶೀಘ್ರವೇ ನಗರದ ಎಲ್ಲ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಲಾಗುತ್ತದೆ. ಭಾರತದ ಅಭಿವೃದ್ಧಿಯನ್ನು ಬೆಂಗಳೂರಿನ ಮುಖಾಂತರ ನೋಡುತ್ತದೆ. ಅಭಿವೃದ್ಧಿಗೆ ಇನ್ನೊಂದು ಹೆಸರೇ ನಮ್ಮ ಬೆಂಗಳೂರು. ಐಟಿ ಸಿಟಿ ಎಂದೆಂದೂ ಖ್ಯಾತಿಗಳಿಸಿರುವ ನಮ್ಮ ಕೆಂಪೇಗೌಡರು ಕಟ್ಟಿದ ರಾಜಧಾನಿಯನ್ನು ಹಾಗೂ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡಿದ್ದೇವೆ. ವಾಹನ ಸವಾರರಿಗೆ ರಸ್ತೆ ಗುಂಡಿಗಳನ್ನು ಮುಚ್ಚಿ, ಅನುಕೂಲ ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿ ಎಲ್ಲ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳ ಪರಿಶೀಲನೆ ಮಾಡಲಾಗುತ್ತಿದೆ. ತ್ವರಿತವಾಗಿ ಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದ್ದಾರೆ. ಆಯಾ ನಗರ ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳು ರಸ್ತೆ ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತಿದ್ದಾರೆ.












Click it and Unblock the Notifications