ಕೊರೊನಾ ವೈರಸ್ಗೆ ತುತ್ತಾಗಿರುವ ಡಿ.ಕೆ. ಶಿವಕುಮಾರ್ ಆರೋಗ್ಯದ ಅಪ್ಡೇಟ್
ಬೆಂಗಳೂರು, ಆಗಸ್ಟ್ 25: ಕೋವಿಡ್ ಸೋಂಕಿಗೆ ಒಳಗಾಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.
Recommended Video
ಕಳೆದ ನಾಲ್ಕು ದಿನಗಳಿಂದ ಬೆನ್ನುನೋವು ಮತ್ತು ಜ್ವರದಿಂದ ಬಳಲುತ್ತಿದ್ದ ಡಿ.ಕೆ. ಶಿವಕುಮಾರ್, ಎರಡು ದಿನಗಳ ಹಿಂದೆ ಕೊರೊನಾ ವೈರಸ್ ತಪಾಸಣೆಗೆ ಒಳಗಾಗಿದ್ದರು. ಅವರ ಪರೀಕ್ಷೆಯ ವರದಿ ಮಂಗಳವಾರ ಬಂದಿದ್ದು, ಅದರಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ಅವರು ಬೆಂಗಳೂರಿನ ಸುಗುಣ ಆಸ್ಪತ್ರೆಗೆ ದಾಖಲಾಗಿದ್ದರು.
ಸುಗುಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಆರ್. ರವೀಂದ್ರ ನೇತೃತ್ವದ ವಿವಿಧ ವಿಭಾಗಗಳ ತಜ್ಞರ ತಂಡವು ಡಿ.ಕೆ. ಶಿವಕುಮಾರ್ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ.
ಸುಗುಣ ಆಸ್ಪತ್ರೆಯ ಆಂತರಿಕ ಔಷಧ, ತುರ್ತು ಚಿಕಿತ್ಸೆ, ಶ್ವಾಸಕೋಶ ತಜ್ಞರು, ಸೋಂಕು ಕಾಯಿಲೆಗಳ ವಿಭಾಗದ ಪರಿಣತರನ್ನು ಒಳಗೊಂಡ ಬಹುತಜ್ಞರ ತಂಡವು ಡಿ.ಕೆ. ಶಿವಕುಮಾರ್ ಅವರ ಆರೋಗ್ಯದ ಪರಿಶೀಲನೆ ಮಾಡುತ್ತಿದೆ ಎಂದು ಆಸ್ಪತ್ರೆ ಹೇಳಿಕೆ ತಿಳಿಸಿದೆ. ಮುಂದೆ ಓದಿ.

ಚಿಕಿತ್ಸೆಗೆ ಸ್ಪಂದನೆ
'ಜ್ವರ ಮತ್ತು ಸ್ನಾಯು ಸೆಳೆತದ ನೋವಿನ ಕಾರಣಗಳಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸೋಮವಾರ ರಾತ್ರಿ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ ಕೋವಿಡ್ 19 ಪಾಸಿಟಿವ್ ಬಂದಿದೆ. ಪ್ರಸ್ತುತ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರ ಆರೋಗ್ಯ ಸ್ಥಿರ ಸ್ಥಿತಿಯಲ್ಲಿದೆ' ಎಂದು ಆಸ್ಪತ್ರೆಯ ವೈದ್ಯಕೀಯ ವರದಿ ತಿಳಿಸಿದೆ.

ಸೋನಿಯಾ, ರಾಹುಲ್ ಕರೆ
ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿಯ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಅನೇಕ ಹಿರಿಯ ಕಾಂಗ್ರೆಸ್ ನಾಯಕರು ಟ್ವೀಟ್, ದೂರವಾಣಿ ಕರೆ ಮಾಡಿ ಡಿ. ಕೆ. ಶಿವಕುಮಾರ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಯಡಿಯೂರಪ್ಪ ಹಾರೈಕೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, " ಡಿ. ಕೆ. ಶಿವಕುಮಾರ್ ಅವರು ಕೊರೊನಾ ಸೋಂಕಿನಿಂದ ಪೂರ್ಣ ಗುಣಮುಖರಾಗಿ, ಮತ್ತೆ ಎಂದಿನಂತೆ ತಮ್ಮ ಕಾರ್ಯಕ್ಷೇತ್ರದಲ್ಲಿ ಸಕ್ರಿಯರಾಗಿ ತೊಡಗಿಕೊಳ್ಳಲಿ ಎಂದು ಹಾರೈಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.

ಶೀಘ್ರ ಗುಣಮುಖರಾಗಲಿ
"ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರಿಗೆ ಕೋವಿಡ್ ಇರುವುದಾಗಿ ತಿಳಿಯಿತು. ಕೊರೊನಾ ವೈರಸ್ ಸೋಂಕಿನಿಂದ ಅವರು ಶೀಘ್ರ ಗುಣಮುಖರಾಗಲಿ ಎಂದು ನಾನು ಹಾರೈಸುತ್ತೇನೆ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications