ಬಿಜೆಪಿಯ ಸ್ನೇಹಿತರೂ ಸಹಾಯ ಮಾಡಿದ್ದಾರೆ: ಡಿಕೆ ಶಿವಕುಮಾರ್
ಬೆಂಗಳೂರು, ಅಕ್ಟೋಬರ್ 26: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 50 ದಿನ ಸೆರೆವಾಸದಿಂದ ಜೈಲಿನಿಂದ ಹೊರಬಂದು ಮೂರು ದಿನಗಳ ಬಳಿಕ ಮಾಜಿ ಸಚಿವ ಡಿಕೆ ಶಿವಕುಮಾರ್ ಶನಿವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದರು.
ವಿಮಾನ ನಿಲ್ದಾಣದಲ್ಲಿಯೇ ಸೇರಿದ್ದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಅವರಿಗೆ ಅದ್ದೂರಿ ಸ್ವಾಗತ ನೀಡಿದರು. ಹೂವಿನ ಹಾರ ಹಾಕಿ ಮೆರವಣಿಗೆಯಲ್ಲಿ ಕರೆತಂದರು. ಸಾದಹಳ್ಳಿ ಗೇಟ್ ಬಳಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ತಮ್ಮನ್ನು ಬೆಂಬಲಿಸಿದ ಜನರಿಗೆ ಕೃತಜ್ಞತೆ ಅರ್ಪಿಸಿದರು.
ಈ ನಿಮ್ಮ ಡಿಕೆ ಶಿವಕುಮಾರ್ ಅಳುವ ಮಗ ಅಲ್ಲ. ನನ್ನಲ್ಲಿ ಕಣ್ಣೀರು ಬಿದ್ದರೆ ಅದು ಬರುವುದು ನೋವಿನಿಂದ ಬೀಳುವುದಿಲ್ಲ. ನಿಮ್ಮ ಪ್ರೀತಿ ವಿಶ್ವಾಸ ಕಂಡು ಕಣ್ಣೀರು ಬರಬಹುದು. ಸತ್ಯ, ನ್ಯಾಯ ಮತ್ತು ಕಾಲ, ಈ ಮೂರೂ ಸೇರಿ ಸೂಕ್ತವಾದ ಸಂದರ್ಭದಲ್ಲಿ ಉತ್ತರ ಕೊಡಲಿವೆ ಎಂದು ಹೇಳಿದರು.

40 ವರ್ಷದ ನನ್ನ ರಾಜಕಾರಣದ ಬದುಕನ್ನು ಮುಗಿಸುವ ಷಡ್ಯಂತ್ರ ಮಾಡಲಾಗಿದೆ. ನನ್ನ ಸ್ನೇಹಿತರು ಬಂಧುಗಳಿಗೆ ಕೊಟ್ಟ ಕಿರುಕುಳ ನೋಡಿದ್ದೇನೆ. ಇದು ಒಂದು ದಿನಕ್ಕೆ ಮುಗಿಯುವುದಲ್ಲ. ಇದು ಅಂತ್ಯವಲ್ಲ, ಇದು ಪ್ರಾರಂಭ. ನನಗೆ ಶಾಸಕರು, ಕನ್ನಡಪರ ಸಂಘಟನೆಗಳು, ನನ್ನ ಸಮುದಾಯದ ಸಂಘಗಳು ಸೇರಿ ಎಲ್ಲರೂ ಬೆಂಬಲ ನೀಡಿದ್ದೀರಿ. ಬಿಜೆಪಿಯಲ್ಲಿದ್ದುಕೊಂಡೇ ಅನೇಕ ಸ್ನೇಹಿತರು ನನಗೆ ಸಹಾಯ ಮಾಡಿದ್ದಾರೆ ಎಂದರು.
ಈ ಸರ್ಕಾರ, ಪೊಲೀಸರು ನಿಮ್ಮನ್ನು ಕಾಡಿದರೂ, ನನಗೋಸ್ಕರ ಹಗಲು ರಾತ್ರಿ ಹೋರಾಟ ಮಾಡಿದ್ದೀರಿ. ಅನ್ಯಾಯದ ವಿರುದ್ಧ ನೀವೆಲ್ಲರೂ ಪ್ರತಿಭಟನೆ ನಡೆಸಿದ್ದೀರಿ. ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾನು ಚಿರ ಋಣಿ. ಎಲ್ಲ ತಾಯಂದಿರಿಗೂ ನನ್ನ ನಮಸ್ಕಾರ. ನಿಮ್ಮ ಋಣವನ್ನು ಹೇಗೆ ತೀರಿಸಬೇಕೋ ಗೊತ್ತಾಗುತ್ತಿಲ್ಲ. ನಿಮ್ಮ ಋಣದ ಸಾಲ ತೀರಿಸುವ ಶಕ್ತಿಯನ್ನು ಆ ಭಗವಂತ ನನಗೆ ನೀಡಲಿ. ನಿಮ್ಮ ಸೇವೆಗೆ ನಾನು ಸದಾ ಸಿದ್ಧ ಎಂದು ಹೇಳಿದರು.
ನಾನು ಲಂಚ ಹೊಡೆದಿಲ್ಲ, ಯಾರಿಗೂ ಮೋಸ ಮಾಡಿಲ್ಲ. ನಾನು ಒಂದು ಕುಟುಂಬದ ಆಸ್ತಿಯಲ್ಲ. ನಾನು ನಿಮ್ಮ ಕುಟುಂಬದ ಆಸ್ತಿ. ನಾವು ನೀವೆಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎಂದು ಕರೆ ನೀಡಿದರು.
ವಿಪರೀತ ಜನಜಂಗುಳಿ ನೆರೆದಿದ್ದರಿಂದ ವಿಮಾನ ನಿಲ್ದಾಣದಿಂದ ಬರುವ ಮಾರ್ಗದಲ್ಲಿ ತೀವ್ರ ವಾಹನದಟ್ಟಣೆ ಉಂಟಾಗಿತ್ತು. ಹೀಗಾಗಿ ಮೆರವಣಿಗೆಯಲ್ಲಿಯೇ ಕೆಪಿಸಿಸಿ ಕಚೇರಿಯವರೆಗೂ ಬರುವ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಡಿಕೆ ಶಿವಕುಮಾರ್ ಬೇರೆ ಕಾರಿನಲ್ಲಿ ತೆರಳಿದರು.












Click it and Unblock the Notifications