ಡಿಕೆ ರವಿ ನಿಗೂಢ ಸಾವು: ಬೆಂಗಳೂರಿಗೆ ಏಮ್ಸ್ ವೈದ್ಯರ ತಂಡ
ಬೆಂಗಳೂರು, ಆಗಸ್ಟ್ 02: ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವಿನ ಪ್ರಕರಣದ ಮತ್ತೊಮ್ಮೆ ತಿರುವು ಪಡೆದುಕೊಳ್ಳುವ ನಿರೀಕ್ಷೆ ಹುಟ್ಟಿಸಿದೆ. ಇದು ಆತ್ಮಹತ್ಯೆ ಪ್ರಕರಣ ಎಂದಿದ್ದ ಸಿಬಿಐ ಈಗ ಮತ್ತೊಮ್ಮೆ ಘಟನೆ ನಡೆದ ದಿನದ ವಿಡಿಯೋ ತುಣುಕುಗಳ ಪರೀಕ್ಷೆಗೆ ಮುಂದಾಗಿದೆ. ವಿಡಿಯೋ ಸಾಕ್ಷಿಗಳ ಪರೀಕ್ಷೆಗೆ ದೆಹಲಿಯಿಂದ ಏಮ್ಸ್ ವೈದ್ಯರ ತಂಡ ಆಗಮಿಸುತ್ತಿದೆ.
ದೆಹಲಿಯ ಆಲ್ ಇಂಡಿಯನ್ಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಏಮ್ಸ್) ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಸುಧೀರ್ ಕೆ ಗುಪ್ತಾ ಅವರು ಹಾಗೂ ಅವರ ತಂಡ ಬೆಂಗಳೂರಿಗೆ ಬರಲಿದೆ. [ಡಿಕೆ ರವಿ ಸಾವಿನ ಪ್ರಕರಣ Timeline]
ಡಿಕೆ ರವಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂಬುದಕ್ಕೆ ಸಿಕ್ಕಿರುವ ಸಾಕ್ಷಿಗಳ ಪರೀಕ್ಷೆ ನಡೆಯಲಿದೆ. ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ಸಿಐಡಿ ವರದಿಯಲ್ಲಿ ಹೇಳಲಾಗಿತ್ತು. ಸಿಬಿಐ ಮಧ್ಯಂತರ ವರದಿಯಲ್ಲೂ ಇದೇ ರೀತಿ ಅಭಿಪ್ರಾಯ ವ್ಯಕ್ತವಾಗಿತ್ತು. ಅದರೆ, ಘಟನೆ ನಡೆದ ದಿನದ ವಿಡಿಯೋಗ್ರಾಫ್ ಸಾಕ್ಷಿ, ಘಟನಾ ಸ್ಥಳದ ಬಗ್ಗೆ ಮತ್ತೊಮ್ಮೆ ಪರೀಕ್ಷೆ ನಡೆಸಲು ಸಿಬಿಐ ಮುಂದಾಗಿದೆ.

ಡಿಕೆ ರವಿ ಶವದ ಕೊರಳಿನಲ್ಲಿ ಉಂಟಾಗಿರುವ ಗುರುತು ಯಾವಾಗ ಆಗಿದ್ದು, ಸತ್ತ ಮೇಲೆ ನೇಣು ಹಾಕಿಲ್ಲವಷ್ಟೇ? ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಕ್ಕೆ ಸರಿಯಾದ ಸಾಕ್ಷಿ ಮರಣೋತ್ತರ ವರದಿಯಿಂದ ಸಿಕ್ಕಿದೆಯೇ? ಎಂಬ ಪ್ರಶ್ನೆಗಳಿಗೆ ಏಮ್ಸ್ ತಂಡ ಉತ್ತರ ಕಂಡುಕೊಳ್ಳಲಿದೆ. [ರವಿ ಕೇಸ್: ಮತ್ತೊಮ್ಮೆ ಅಟಾಪ್ಸಿ ಪರೀಕ್ಷೆ]
ಸಾರ್ವಜನಿಕರು ಸೇರಿದಂತೆ ಅನೇಕರಿಗೆ ಕಾಡುತ್ತಿರುವ ಪ್ರಶ್ನೆಯಾಗಿರುವ ನೇಣು ಹಾಕಿಕೊಂಡಿರುವ ವಿಧಾನ. ಫ್ಯಾನಿನಿಂದ ನೆಲಕ್ಕೆ ಇರುವ ಅಂತರ ಹಾಗೂ ರವಿ ಅವರು ಚೇರ್ ಅಥವಾ ಹಾಸಿಗೆ ಸಹಾಯ ಬಳಸಿ ನೇಣುಬಿಗಿದುಕೊಳ್ಳಲು ಇರುವ ಅಂತರದ ಲೆಕ್ಕಾಚಾರ ಹಾಕಲಾಗುತ್ತದೆ. [ಡಿಕೆ ರವಿ ಲವ್ ಅಫೇರ್ ಎಲ್ಲಾ ಕಟ್ಟುಕಥೆ ಎಂದ ಸಿಬಿಐ]
ಡಿ.ಕೆ.ರವಿ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ನಿಗೂಢವಾಗಿದ್ದು, ಸಿಬಿಐ ತನ್ನ ತನಿಖೆ ಬಹುತೇಕ ಮುಗಿಸಿದ್ದು, ಅಂತಿಮ ವರದಿ ಸಲ್ಲಿಸುವುದಕ್ಕೂ ಮೊದಲು ಎರಡೆರಡು ಬಾರಿ ತನ್ನ ವರದಿಯನ್ನು ದೃಢಪಡಿಸಿಕೊಳ್ಳಲು ನಿರ್ಧರಿಸಿದೆ.
ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಪ್ರಕರಣದ ತನಿಖೆ ಅಂತಿಮ ಘಟ್ಟ ತಲುಪಿದ್ದು, ಕೆಲವೇ ದಿನಗಳಲ್ಲಿ ಅಂತಿಮ ವರದಿಯನ್ನು ಸಲ್ಲಿಕೆ ಮಾಡಲಾಗುತ್ತದೆ ಎಂದು ಸಿಬಿಐ ನಿರ್ದೇಶಕ ಅನಿಲ್ ಕುಮಾರ್ ಸಿನ್ಹಾ ಅವರು ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications