ಡಿಕೆ ರವಿ ಕೇಸ್: ಸರ್ಕಾರದ ಷರತ್ತು ಒಪ್ಪಲು ಸಿಬಿಐ ನಕಾರ
ಬೆಂಗಳೂರು, ಏ.6: ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವಿನ ಪ್ರಕರಣವನ್ನು ವಹಿಸಿಕೊಂಡಿರುವ ಸಿಬಿಐ ತಂಡ ತನಿಖೆ ಆರಂಭಿಸುವುದಕ್ಕೂ ಮುನ್ನವೇ ವಿಘ್ನ ಉಂಟಾಗಿದೆ. ಕರ್ನಾಟಕ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಸಿಬಿಐ ವಾಪಸ್ ಕಳಿಸಿದ್ದು, ತನಿಖೆ ಸದ್ಯಕ್ಕೆ ಸ್ಥಗಿತಗೊಂಡಿದೆ.
ಮಾ.23ರಂದು ಸದನದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಸೂಚನೆ ಹೊರಡಿಸಿ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲಿದೆ ಎಂದಿದ್ದರು. ಈ ಅಧಿಸೂಚನೆಯಲ್ಲಿ ಮೂರು ತಿಂಗಳೊಳಗೆ ಕೇಸ್ ಮುಗಿಸುವಂತೆ ಷರತ್ತು ವಿಧಿಸಲಾಗಿತ್ತು. ಇದನ್ನು ಒಪ್ಪಲು ಸಿಬಿಐ ನಿರಾಕರಿಸಿದೆ. [ತನಿಖೆ ಸಿಬಿಐಗೆ ಒಪ್ಪಿಸಿದ ರಾಜ್ಯ ಸರ್ಕಾರ]

ಸಿದ್ದರಾಮಯ್ಯ ಸರ್ಕಾರ ಮಾ.23ರಂದು ಅಧಿಸೂಚನೆ ಹೊರಡಿಸಿದರೂ ಅಧಿಕೃತ ಪತ್ರ ಸಿಬಿಐ ಕಚೇರಿ ತಲುಪಲು ವಿಳಂಬವಾಗಿತ್ತು. ಅಲ್ಲದೆ, ಸಿಬಿಐ ತಂಡಕ್ಕೆ ಕರ್ನಾಟಕ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಪಾಲಿಸಿಕೊಂಡು ಮುಕ್ತವಾಗಿ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸಿಬಿಐ ತಂಡ ಹೇಳಿದೆ. [ರವಿ ಕೇಸ್: ಸಾವು, ಸಿಐಡಿ, ಸಿಬಿಐ ತನಕ ಟೈಮ್ ಲೈನ್]
ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸುವ ತಂಡದ ವಿವರ ಈಗ ಪ್ರಕಟವಾಗಿದೆ. ಚೆನ್ನೈ ಸಿಬಿಐ ಘಟಕದ ಡಿಐಜಿ ಸೆಲ್ವರಾಜ್ ಸೆಂಗತ್ತೀರ್ ಹಾಗೂ ವಿಶೇಷ ಬ್ರ್ಯಾಂಚಿನ ಎಸ್ಪಿ ಶರವಣನ್ ಅವರ ನೇತೃತ್ವದ ವಿಶೇಷ ತಂಡ ತನಿಖೆ ನಡೆಸುತ್ತಿದೆ.

ಪೂರ್ಣ ವರದಿಯನ್ನು ಸಿಬಿಐ ತಂಡ ಪಡೆದುಕೊಂಡಿಲ್ಲ
ಡಿಕೆ ರವಿ ಶವದ ಮರಣೋತ್ತರ ಪರೀಕ್ಷೆ ನಡೆಸಿದ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಪ್ರಾಥಮಿಕ ವರದಿಯನ್ನಷ್ಟೇ ತಯಾರಿಸಿದ್ದಾರೆ. ಅಟೋಪ್ಸಿ ಹಾಗೂ ಎಫ್ ಎಸ್ಎಲ್ ವರದಿ ಇನ್ನೂ ಲಭ್ಯವಾಗಿಲ್ಲ. ಸಿಐಡಿ ತಂಡದಿಂದ ಪೂರ್ಣ ವರದಿಯನ್ನು ಸಿಬಿಐ ತಂಡ ಪಡೆದುಕೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಸರ್ಕಾರ ಈಗೇನು ಮಾಡಬಹುದು?
ಮಾ.23ರಂದು ಕರ್ನಾಟಕ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಸಿಬಿಐ ತಿರಸ್ಕರಿಸುವುದರಿಂದ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಹೊಸದಾಗಿ ಅಧಿಸೂಚನೆ ಹೊರಡಿಸಬೇಕಾಗುತ್ತದೆ.ಮೂರು ತಿಂಗಳಲ್ಲಿ ಪ್ರಕರಣದ ತನಿಖೆ ಮುಕ್ತಾಯಗೊಳಿಸಬೇಕು ಎಂದು ಸರ್ಕಾರ ವಿಧಿಸಿದ್ದ ಷರತ್ತು ಸಿಬಿಐ ಅಧಿಸೂಚನೆ ತಿರಸ್ಕರಿಸಲು ಪ್ರಮುಖ ಕಾರಣ ಎನ್ನಲಾಗಿದೆ.

ಸಿಬಿಐ ಪ್ರಕರಣ ಕೈ ಬಿಡುವ ಸಾಧ್ಯತೆ?
ರವಿ ಕೇಸ್ ಬಗ್ಗೆ ಸಿಐಡಿ ವರದಿ ಪಡೆದುಕೊಳ್ಳುವುದಕ್ಕೆ ಮುಂಚೆ ಒಂದಷ್ಟು ಹಿನ್ನೆಲೆ ಕಾರ್ಯಾಚರಣೆ ಮಾಡಿರುವ ಸಿಬಿಐ ತಂಡದ ಕೆಲ ಅಧಿಕಾರಿಗಳು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಬಹುತೇಕ ನಿರ್ಧರಿಸಿದ್ದಾರೆ ಎಂಬ ಸುದ್ದಿಯಿದೆ.
ಇದು ಆತ್ಮಹತ್ಯೆ ಪ್ರಕರಣ ಎಂದು prima facie ಆಧಾರದ ಮೇಲೆ ಸಿಐಡಿ ಕೂಡಾ ಇದೇ ನಿರ್ಧಾರಕ್ಕೆ ಬಂದಿತ್ತು. ಹೀಗಾಗಿ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕೇ? ಅಥವಾ ಬೇಡವೇ? ಎಂಬುದರ ಬಗ್ಗೆ ಸಿಬಿಐ ನಿರ್ಧಾರ ಕೈಗೊಳ್ಳಬೇಕಿದೆ.











Click it and Unblock the Notifications