ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ; ಕ್ಲೆಮ್ ಕಮೀಷನ್ಗೆ 90 ಅರ್ಜಿ ಮಾತ್ರ
ಬೆಂಗಳೂರು, ಆಗಸ್ಟ್ 02: ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ನಡೆದು ಎರಡು ವರ್ಷಗಳಾಗುತ್ತಿವೆ. ಈ ಸಂಬಂಧ ರಚಿಸಲಾಗಿರುವ ನಿವೃತ್ತ ನ್ಯಾ. ಎಚ್. ಎಸ್. ಕೆಂಪಣ್ಣ ನೇತೃತ್ವದ ಕ್ಲೇಮ್ಸ್ ಕಮೀಷನ್ ಗೆ ಇದುವರೆಗೂ 90 ಅರ್ಜಿಗಳು ಮಾತ್ರ ಬಂದಿದ್ದು, ತನಿಖೆ ಕಾರ್ಯ ಅಂತಿಮ ಹಂತದಲ್ಲಿದ್ದು ಒಂದೆರಡು ತಿಂಗಳಲ್ಲಿ ಹೈಕೋರ್ಟ್ಗೆ ವರದಿ ನೀಡಲು ಸಿದ್ದತೆ ಪ್ರಾರಂಭವಾಗಿದೆ.
ಮಹಮದ್ ಪೈಗಂಬರ್ ಬಗ್ಗೆ ಆಕ್ಷೇಪಾರ್ಹ ರೀತಿಯಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಏಕಾಏಕಿ ಆರೋಪಿಯ ಮನೆ, ಶಾಸಕ ಅಖಂಡ ಶ್ರೀನಿವಾಸ್ ಮನೆ ಸೇರಿದಂತೆ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಗಲಭೆ ನಡೆದಿತ್ತು. ಈ ಗಲಭೆಯಲ್ಲಿ ಅಪಾರ ಪ್ರಮಾಣ ಆಸ್ತಿ- ಪಾಸ್ತಿ ಹಾನಿಯಾಗಿತ್ತು. ಹಲವು ವಾಹನಗಳಿಗೆ ಬೆಂಕಿಯನ್ನು ಹಚ್ಚಲಾಗಿತ್ತು.
ಇದರಿಂದಾಗಿ ಸರಕಾರ ನಿವೃತ್ತ ನ್ಯಾ. ಎಚ್. ಎಸ್. ಕೆಂಪಣ್ಣ ನೇತೃತ್ವದ ಕ್ಲೇಮ್ಸ್ ಕಮೀಷನ್ ಗೆ ಜವಾಬ್ದಾರಿಯನ್ನು ನೀಡಿತ್ತು. ಎರಡು ವರ್ಷಗಳಲ್ಲಿ 90 ಮಂದಿ ಮಾತ್ರ ಕ್ಲೆಮ್ಸ್ ಕಮೀಷನರ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಡಿಜೆ ಹಳ್ಳಿ 75 ಹಾಗೂ ಕೆಜಿ ಹಳ್ಳಿಯಲ್ಲಿ 15 ಅರ್ಜಿಗಳು ಬಂದಿವೆ. ಡಿಜೆ ಹಳ್ಳಿ 89 ಹಾಗೂ ಕೆಜಿ ಹಳ್ಳಿ 13 ಸೇರಿ ಒಟ್ಟು 102 ವಾಹನಗಳು ನಷ್ಟ ಪರಿಹಾರ ನೀಡುವಂತೆ ಮಾಲೀಕರು ದೂರು ನೀಡಿದ್ದಾರೆ. 17 ಪ್ರಾರ್ಪಟಿಗಳು ಗಲಭೆಯಲ್ಲಿ ನಷ್ಟವಾಗಿದೆ. ಇದರಲ್ಲಿ ಪೊಲೀಸ್ ಠಾಣೆ, ಅಂಗಡಿ, ಮನೆ ಇನ್ನಿತರ ಆಸ್ತಿಗಳು ಸೇರಿವೆ.

ಸರ್ಕಾರಿ ವಾಹನ ಸೇರಿದಂತೆ ವಾಹನಗಳಿಗೆ ಬೆಂಕಿ
ಡಿಜೆ ಹಳ್ಳಿಯನಲ್ಲಿ ನಡೆದ ಗಲಭೆಯಿಂದಾಗಿ 65 ಹಾಗೂ ಕೆಜಿ ಹಳ್ಳಿಯಲ್ಲಿ 35 ಸೇರಿ 100 ವಾಹನಗಳು ನಾಶವಾಗಿದ್ದವು. ಕೆಜಿ ಹಳ್ಳಿಯಲ್ಲಿ ಮೂರು ವಾಹನಗಳು ಸಾರ್ವಜನಿಕರಾದರೆ, ಏಳು ಸರ್ಕಾರಿ ವಾಹನಗಳಾಗಿವೆ. ತಮ್ಮ ಬೈಕ್ ಸುಟ್ಟಿರುವುದಾಗಿ 25 ಮಂದಿ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ಅದೇ ರೀತಿ ಡಿಜೆ ಹಳ್ಳಿಯಲ್ಲಿ 65 ವಾಹನಗಳು ನಷ್ಟವಾಗಿದೆ. 26 ವಾಹನಗಳು ಸಾರ್ವಜನಿಕರಿಂದ ಅರ್ಜಿಗಳು ಬಂದಿವೆ. 9 ಸರ್ಕಾರಿ ನೌಕರರ ವಾಹನಗಳು, ಎರಡು ಪೊಲೀಸ್ ವ್ಯಾನ್, ಐದು ಬಸ್ ಹಾಗೂ 9 ನಾಲ್ಕುಚಕ್ರ ಸೇರಿ 65 ವಾಹನಗಳು ನಷ್ಟವಾಗಿರುವ ಬಗ್ಗೆ ದೂರುಗಳು ಬಂದಿವೆ.

ಗಲಭೆಕೋರರಿಂದಲೇ ನಷ್ಟ ಭರಿಸಲು ಕ್ಲೇಮ್ ಕಮೀಷನ್ ನೇಮಕ
ಏಕಾಏಕಿ ನಡೆದ ಗಲಭೆಯು ಕಾಡ್ಗಿಚ್ಚಿನಂತೆ ಹರಡಿ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ಗಲಭೆ ಉಂಟಾಗಿ ನೂರಾರು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿತ್ತು. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿಗೆ ಧಕ್ಕೆಯಾಗಿತ್ತು. ಹಿಂಸಾಚಾರ ಸಂಬಂಧ 400ಕ್ಕೂ ಹೆಚ್ಚು ಆರೋಪಿಗಳನ್ನ ಬಂಧಿಸಲಾಗಿತ್ತು.
ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ವಿವಾದತಾತ್ಮಕ ಬರಹ ಅಹಿತಕರ ಘಟನೆಗಳಿಗೆ ಕಾರಣವಾಗಿತ್ತು. ನೂರಾರು ಸಂಖ್ಯೆಯಲ್ಲಿ ವಾಹನಗಳು ಹೊತ್ತಿ ಉರಿದರೆ, ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿತ್ತು. ಘಟನೆ ಸಂಬಂಧ 2020 ಆಗಸ್ಟ್ ನಲ್ಲಿ ಹೈಕೋರ್ಟ್ ಅಧಿಸೂಚನೆಯಂತೆ ರಾಜ್ಯ ಸರ್ಕಾರ ನಿವೃತ್ತ ನ್ಯಾ.ಕೆಂಪಣ್ಣ ನೇತೃತ್ವದಲ್ಲಿ ಕ್ಲೆಮ್ಸ್ ಕಮೀಷನ್ ರಚಿಸಿ ಬಾಲಬ್ರೂಯಿ ಕಟ್ಟಡದಲ್ಲಿ ಮೂಲಸೌಕರ್ಯ ಒದಗಿಸಿತ್ತು. ಗಲಭೆಕೋರರಿಂದಲೇ ನಷ್ಟ ಭರಿಸುವುದು ಕಮೀಷನ್ ಉದ್ದೇಶವಾಗಿತ್ತು. ಸದ್ಯ 90 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದು ಹಲವರು ಸೂಕ್ತ ದಾಖಲಾತಿಯಿಲ್ಲದೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಹಾನಿಗೊಳಗಾಗಿರುವ ವಾಹನ ಮಾಲೀಕರ ಬಳಿ ದಾಖಲಾತಿ ಲಭ್ಯವಿಲ್ಲದಿರುವುದು ನಿರೀಕ್ಷಿತ ಮಟ್ಟದಲ್ಲಿ ಅರ್ಜಿ ಸಲ್ಲಿಸದಿರಲು ಕಾರಣವಾಗಿದೆ.

ಆಸ್ತಿ ಪಾಸ್ತಿ ನಷ್ಟದ ಮೌಲ್ಯವನ್ನು ತುಲನೆ ಮಾಡಿ ವರದಿ
ಗಲಭೆಯಲ್ಲಿ ಉಂಟಾಗಿರುನ ನಷ್ಟ ಸಂಬಂಧ ವಾಹನ ಮಾಲೀಕರು ಹಾಗೂ ಪ್ರಾಪರ್ಟಿ ಮಾಲೀಕರು ಪರಿಹಾರ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಇದರಂತೆ ವಾಹನಗಳ ನೈಜ ನಷ್ಟವಾಗಿರುವ ಬಗ್ಗೆ ಮೌಲ್ಯಮಾಪನವನ್ನು ಆರ್ ಟಿಓ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಿದ್ದಾರೆ. ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮೌಲ್ಯಮಾಪನ ಮಾಡಿಸಲಾಗಿದೆ. ಪರಿಹಾರ ಕೋರಿ ಅರ್ಜಿದಾರರು ಸಲ್ಲಿಸುವ ಮೊತ್ತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಡೆಸಿದ ಮೌಲ್ಯಮಾಪನ ವರದಿ ತುಲನೆ ಮಾಡಿ ಅಂತಿಮವಾಗಿ ಹಾನಿಯಾಗಿರುವ ಆಧಾರದ ಮೇರೆಗೆ ಪರಿಹಾರ ಮೊತ್ತವನ್ನ ಕ್ಲೆಮ್ಸ್ ಕಮೀಷನ್ ನಿಗದಿಪಡಿಸಲಿದೆ.

ಶ್ರೀಘ್ರದಲ್ಲೇ ಹೈಕೋರ್ಟ್ಗೆ ವರದಿ ಸಲ್ಲಿಗೆ
'ಸದ್ಯ 90 ಮಂದಿ ಅರ್ಜಿಗಳು ಬಂದಿವೆ. ಸಂಬಂಧಿಸಿದ ಅಧಿಕಾರಿಗಳು ಮೌಲ್ಯಮಾಪನ ನಡೆಸಿದ ರಿಪೋರ್ಟ್ ಬಂದಿದ್ದು ಎರಡನ್ನು ತುಲನೆ ಮಾಡಿ ಅಧ್ಯಯನ ನಡೆಸಿ ಹೈಕೋರ್ಟ್ಗೆ ವರದಿ ನೀಡಲಾಗುವುದು ಎಂದು ಕ್ಲೇಮ್ಸ್ ಕಮೀಷನರ್ ನ್ಯಾ. ಎಚ್. ಎಸ್. ಕೆಂಪಣ್ಣ ತಿಳಿಸಿದ್ದಾರೆ.












Click it and Unblock the Notifications