ಕರ್ನಾಟಕದ ತುಣುಕು ಸುದ್ದಿಗಳ ಇಣುಕು ನೋಟ
ಬೆಂಗಳೂರು, ಅ.23 : ಕರ್ನಾಟಕದಲ್ಲಿ ಭೂ ವ್ಯಾಜ್ಯಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪತ್ಯೇಕ ಭೂ ವ್ಯಾಜ್ಯ ನ್ಯಾಯಾಲಯ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ. ಭೂ ವ್ಯಾಜ್ಯಗಳನ್ನು ನಿಗದಿತ ಕಾಲಮಿತಿಯೊಳಗೆ ವಿಚಾರಣೆ ನಡೆಸಲು ಈ ನ್ಯಾಯಾಲಯ ಸ್ಥಾಪಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಮೊದಲ ಭೂ ವ್ಯಾಜ್ಯ ನ್ಯಾಯಾಲಯ ಪ್ರಾಯೋಗಿಕವಾಗಿ ಸ್ಥಾಪನೆಯಾಗಲಿದೆ.
ಕೆಲವು ದಿನಗಳ ಹಿಂದೆ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಸೇರಿದಂತೆ ಮತ್ತಿತರ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಹತ್ತು ಪ್ರತ್ಯೇಕ ತ್ವರಿತ ನ್ಯಾಯಾಲಯಗಳನ್ನು ಸ್ಥಾಪನೆ ಮಾಡುವುದಾಗಿ ಸರ್ಕಾರ ಘೋಷಿಸಿತ್ತು. ಇದೇ ಮಾದರಿಯಲ್ಲಿ ಪ್ರತ್ಯೇಕ ಭೂ ವ್ಯಾಜ್ಯ ನ್ಯಾಯಾಲಯ ಸ್ಥಾಪಿಸಲು ಕಂದಾಯ ಇಲಾಖೆ ಪ್ರಸ್ತಾವನೆ ರಚಿಸಿದೆ. ಇದಕ್ಕಾಗಿ ಪ್ರತ್ಯೇಕ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು ನೇಮಕವಾಗಲಿದ್ದಾರೆ.
ಬೆಂಗಳೂರಿನಲ್ಲಿ ಪ್ರಾಯೋಗಿಕ ನ್ಯಾಯಾಲಯ ಆರಂಭವಾದ ನಂತರ ನಾಲ್ಕು ಕಂದಾಯ ವಿಭಾಗಗಳಾದ ಮೈಸೂರು, ಮಂಗಳೂರು, ಬೆಳಗಾವಿ ಮತ್ತು ಗುಲ್ಬರ್ಗಾದಲ್ಲಿ ಹಂತ ಹಂತವಾಗಿ ಭೂ ನ್ಯಾಯಾಲಯಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ. ಈ ಕುರಿತು ಶೀಘ್ರದಲ್ಲೇ ಆದೇಶ ಪ್ರಕಟಗೊಳ್ಳಲಿದೆ.
ಪ್ರತ್ಯೇಕವಾಗಿ ಆರಂಭವಾಗಲಿರುವ ಈ ನ್ಯಾಯಾಲಯಗಳು ಭೂ ವ್ಯಾಜ್ಯದ ಕುರಿತಾಗಿ ತ್ವರಿತವಾಗಿ ವಿಚಾರಣೆ ನಡೆಸಿ ತೀರ್ಪು ನೀಡಲಿವೆ. ಕಾನೂನು ಬಾಹಿರವಾಗಿ ಜಮೀನು ವಶಪಡಿಸಿಕೊಂಡಿದ್ದರೆ ಅದನ್ನು ಸರ್ಕಾರಕ್ಕೆ ಹಿಂದಿರುಗಿಸುವುದು ಈ ನ್ಯಾಯಾಲಯಗಳ ಉದ್ದೇಶವಾಗಿದೆ. ಹೆಚ್ಚುತ್ತಿರುವ ಭೂ ವ್ಯಾಜ್ಯಗಳನ್ನು ಪರಿಹರಿಸಬೇಕೆಂಬ ಉದ್ದೇಶದಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಪ್ರತ್ಯೇಕ ಭೂ ವ್ಯಾಜ್ಯ ನ್ಯಾಯಾಲಯ
ಕರ್ನಾಟಕದಲ್ಲಿ ಭೂ ವ್ಯಾಜ್ಯಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪತ್ಯೇಕ ಭೂ ವ್ಯಾಜ್ಯ ನ್ಯಾಯಾಲಯ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ. ಭೂ ವ್ಯಾಜ್ಯಗಳನ್ನು ನಿಗದಿತ ಕಾಲಮಿತಿಯೊಳಗೆ ವಿಚಾರಣೆ ನಡೆಸಲು ಈ ನ್ಯಾಯಾಲಯ ಸ್ಥಾಪಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಮೊದಲ ಭೂ ವ್ಯಾಜ್ಯ ನ್ಯಾಯಾಲಯ ಪ್ರಾಯೋಗಿಕವಾಗಿ ಸ್ಥಾಪನೆಯಾಗಲಿದೆ. ನಂತರ ಮೈಸೂರು, ಮಂಗಳೂರು, ಬೆಳಗಾವಿ ಮತ್ತು ಗುಲ್ಬರ್ಗಾದಲ್ಲಿ ನ್ಯಾಯಾಲಯ ಸ್ಥಾಪನೆ ಮಾಡಲು ಸರ್ಕಾರ ಉದ್ದೇಶಿಸಿದೆ.

ಆನೆ ಹಾವಳಿಗೆ ಬೆಳೆ ನಾಶ
ಕನಕಪುರ ತಾಲೂಕಿನ ತಟ್ಟೆಕೆರೆ ಗ್ರಾಮದ ಸುತ್ತಮುತ್ತ ಕಾಡಾನೆಗಳ ಗುಂಪು ಕಾಣಿಸಿಕೊಂಡು ರೈತರು ಬೆಳೆದ ಫಸಲನ್ನು ನಾಶಪಡಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮಂಗಳವಾರ ಮಧ್ಯರಾತ್ರಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಅರಣ್ಯ ಪ್ರದೇಶದಿಂದ ಬಂದ ಸುಮಾರು 20ಕ್ಕೂ ಹೆಚ್ಚು ಆನೆಗಳ ಗುಂಪು ರೈತರ ಜಮೀನಿನಲ್ಲಿ ಬೆಳೆದು ನಿಂತಿದ್ದ ರಾಗಿ ಮತ್ತು ಕಡಲೆಕಾಯಿ ಬೆಳೆಯನ್ನು ನಾಶಪಡಿಸಿವೆ. ಆನೆಗಳನ್ನು ಗ್ರಾಮಕ್ಕೆ ಹೊಂದಿಕೊಂಡಿರುವ ಕಾಡಿನಲ್ಲಿ ಬೀಡು ಬಿಟ್ಟಿದ್ದು, ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಅರಣ್ಯ ಇಲಾಖೆ ಆಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ವ್ಯಾಪಾರಿಯಿಂದ 4 ಕೋಟಿ ಪಂಗನಾಮ
ಕೋಲಾರ ತಾಲೂಕಿನ ಬಂಗಾರಪೇಟೆಯಲ್ಲಿ ಬಟ್ಟೆ ವ್ಯಾಪಾರಿಯೊಬ್ಬರು ಸುಮಾರು 4 ಕೋಟಿ ಹಣದೊಂದಿಗೆ ರಾತ್ರೋರಾತ್ರಿ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಚೀಟಿಗಾಗಿ ನೂರಾರು ಜನರು ಈ ಬಟ್ಟೆ ವ್ಯಾಪಾರಿಬಳಿ ಹಣ ನೀಡಿದ್ದರು. ಸೋಮವಾರ ರಾತ್ರಿ ಈ ವ್ಯಾಪಾರಿ ಪಟ್ಟಣದಿಂದ ನಾಪತ್ತೆಯಾಗಿದ್ದಾನೆ. ಹಲವು ತಿಂಗಳಿನಿಂದ ಈತ ಜನರ ಬಳಿ ಹಣ ಸಂಗ್ರಹಿಸಿದ್ದ ಎಂದು ಸ್ಥಳೀಯರು ಹೇಳಿದ್ದಾರೆ. ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಲ್ಲರಿಗೂ ಮನೆ, ಮುನಿಯಪ್ಪ ಭರವಸೆ
ಕೋಲಾರ ಜಿಲ್ಲೆಯಲ್ಲಿ ಎಲ್ಲಾ ವರ್ಗಗಳ ಬಡವರಿಗೂ ಕೇಂದ್ರ ಸರ್ಕಾರದ ಯೋಜನೆ ಮುಖಾಂತರ ಮನೆ ವಿತರಣೆ ಮಾಡಲು, ಫಲಾನುಭವಿಗಳ ಪಟ್ಟಿ ತಯಾರಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ಮಂಗಳವಾರ ಬಂಗಾರಪೇಟೆಯಲ್ಲಿ ಮಾತನಾಡಿದ ಅವರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಎಲ್ಲಾ ವರ್ಗಗಳ ಬಡವರಿಗೆ ಮನೆಗಳನ್ನು ವಿತರಣೆ ಮಾಡುವ ಸಲುವಾಗಿ ಫಲಾನುಭವಿಗಳ ಪಟ್ಟಿಯನ್ನು ತಯಾರು ಮಾಡಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ ತಕ್ಷಣ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಯಂತೆ ಪ್ರತಿಯೊಬ್ಬ ಬಡವರಿಗೂ ಮನೆಗಳ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಚಳ್ಳಕೆರೆಯಲ್ಲಿ ಶಾಲಾ ವಿದ್ಯಾರ್ಥಿಗಳು ನಾಪತ್ತೆ
ಎರಡು ಪ್ರತ್ಯೇಕ ಪ್ರಕರಣದಲ್ಲಿ ಶಾಲಾ ವಿದ್ಯಾರ್ಥಿಗಳಿಬ್ಬರು ನಾಪತ್ತೆಯಾದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ. ನೀರು ತರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದ ಪಾತ್ರೆ ವ್ಯಾಪಾರಿ ಶಂಕರ್ ಎಂಬುವರ ಪುತ್ರಿ ಚೈತ್ರಾ (12) ಮತ್ತು ಟ್ಯೂಷನ್ ಗೆಂದು ತೆರಳಿದ ಗಾಂಧಿನಗರ ನಿವಾಸಿ ಸುಬ್ರಹ್ಮಣಿ (11) ಸೋಮವಾರ ಸಂಜೆಯಿಂದ ಕಾಣೆಯಾಗಿದ್ದಾರೆ. ಈ ಕುರಿತು ವಿದ್ಯಾರ್ಥಿಗಳ ಪೋಷಕರು ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಈರುಳ್ಳಿ ರಫ್ತು ನಿಷೇಧವಿಲ್ಲ
ಈರುಳ್ಳಿ ಬೆಲೆ ಹೆಚ್ಚಾಗುತ್ತಿದ್ದರೂ ಈರುಳ್ಳಿ ರಫ್ತನ್ನು ರಾಜ್ಯ ಸರ್ಕಾರ ನಿಷೇಧಿಸುವುದಿಲ್ಲ ಎಂದು ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಶಂಕರಲಿಂಗೇಗೌಡ ಹೇಳಿದ್ದಾರೆ. ಈರುಳ್ಳಿ ಬೆಲೆ ಹೆಚ್ಚಾಗಿರುವುದರಿಂದ ರೈತರಿಗೆ ಅನುಕೂಲವಾಗಿದೆ. ಕೇಂದ್ರದಿಂದ ಯಾವ ಸೂಚನೆ ಬರುತ್ತದೆ ಎಂದು ಕಾದು ನೋಡುತ್ತಿದ್ದೇವೆ. ಈರುಳ್ಳಿ ರಫ್ತು ನಿಷೇಧಿಸುವ ಯಾವುದೇ ಕ್ರಮ ಸರ್ಕಾರದ ಮುಂದಿಲ್ಲ ಎಂದು ಶಂಕರಲಿಂಗೇಗೌಡ ತಿಳಿಸಿದ್ದಾರೆ.












Click it and Unblock the Notifications