ಐಶಾರಾಮಿ ಕಾರಿನಲ್ಲಿ ಗುಪ್ತ ಸಭೆಗೆ ಬಂದ ಎಂಟಿಬಿ ನಾಗರಾಜು
Recommended Video
ಬೆಂಗಳೂರು, ಸೆಪ್ಟೆಂಬರ್ 13: ತಮ್ಮ ಐಶಾರಾಮಿ ಕಾರಿನಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜು ಅವರು ಬೆಂಗಳೂರಿನಲ್ಲಿ ನಡೆದ ಗುಪ್ತ ಸಭೆಯೊಂದಕ್ಕೆ ಆಗಮಿಸಿದರು.
ಮತ್ತೊಬ್ಬ ಅನರ್ಹ ಶಾಸಕ ಸುಧಾಕರ್ ಅವರ ನಿವಾಸದಲ್ಲಿ ಇಂದು ಗುಪ್ತ ಸಭೆಯೊಂದು ನಡೆದಿದ್ದು, ಅನರ್ಹಗೊಂಡಿರುವ ಕೆಲವು ಶಾಸಕರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಚರ್ಚಿಸಲೆಂದು ಇಲ್ಲಿ ಸೇರಿದ್ದರು.
11 ಕೋಟಿ ಬೆಲೆಯ ಐಶಾರಾಮಿ ರೋಲ್ಸ್ ರಾಯ್ಸ್ ಕಾರಿನಲ್ಲಿ, ಪ್ಯಾಲೆಸ್ ರಸ್ತೆಯಲ್ಲಿರುವ ಸುಧಾಕರ್ ಅವರ ನಿವಾಸಕ್ಕೆ ಆಗಮಿಸಿದರು. ಉಳಿದ ಅನರ್ಹ ಶಾಸಕರಾದ ಬಿಸಿ.ಪಾಟೀಲ್, ಪ್ರತಾಪ್ ಗೌಡ ಪಾಟೀಲ್, ರಮೇಶ್ ಜಾರಕಿಹೊಳಿ ಆಪ್ತರೂ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಗೆ ರೋಷನ್ ಬೇಗ್ ಸಹ ಬಂದಿದ್ದರು.
ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರಿಗೆ ಸಣ್ಣ ಹಿನ್ನಡೆ ಆಗಿದೆ. 'ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಆತುರವೇಕೆ' ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಹಾಗಾಗಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಇನ್ನಷ್ಟು ತಡವಾಗುವ ಸಾಧ್ಯತೆ ಇದೆ. ಹಾಗಾಗಿ ಅನರ್ಹರು ಇಂದು ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.

ಮುಂದಿನ ವಾರ ಪ್ರಕರಣ ಕೈಗೆತ್ತಿಕೊಳ್ಳುತ್ತಾರೆ: ಬಿಸಿ.ಪಾಟೀಲ್
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಅರ್ಜಿ ವಿಚಾರಣೆಗೆ ಆತುರವೇಕೆ ಎಂದು ಸುಪ್ರೀಂ ಕೇಳಿದೆ. ಪ್ರಕರಣ ಆಗಿ ಒಂದೂವರೆ ತಿಂಗಳಾಯಿತು ಎಂದು ನಮ್ಮ ವಕೀಲರು ಹೇಳಿದ್ದಾರೆ. ಹಾಗಾಗಿ ಪ್ರಕರಣವನ್ನು ಮುಂದಿನ ವಾರ ನೋಡೋಣವೆಂದು ಸುಪ್ರಿಂ ಹೇಳಿದೆ ಎಂದು ಅವರು ಹೇಳಿದರು.

ನ್ಯಾಯಾಲಯದ ಅರ್ಜಿ ಬಗ್ಗೆ ಚರ್ಚೆ ನಡೆಸಲು ಸಭೆ
'ನ್ಯಾಯಾಲಯದಲ್ಲಿರುವ ಪ್ರಕರಣದ ಕುರಿತು ಚರ್ಚೆ ನಡೆಸಲು ಸಭೆ ಸೇರಿದ್ದೆವು ಎಂಬ ಬಿ.ಸಿ.ಪಾಟೀಲ್, ನಮ್ಮ ವಕೀಲರ ಮೂಲಕ ನ್ಯಾಯಾಲಯದ ಮೇಲೆ ಒತ್ತಡ ಹೇರಿ ವಿಚಾರಣೆ ಎದುರಿಸುತ್ತೇವೆ' ಎಂದರು.

'ಜೆಡಿಎಸ್ ಶಾಸಕರು ಬಿಜೆಪಿ ಬಂದರೆ ನಮಗೆ ಆತಂಕವಿಲ್ಲ'
ಜೆಡಿಎಸ್ನ ಕೆಲವು ಶಾಸಕರು ಬಿಜೆಪಿ ಬರುವ ಸುಳಿವು ನೀಡಿರುವ ಬಗ್ಗೆ ಮಾತನಾಡಿದ ಅವರು, ಜೆಡಿಎಸ್ಗೂ ನಮಗೂ ಸಂಬಂಧವಿಲ್ಲ, ಯಾವ ಶಾಸಕರು ಬಿಜೆಪಿಗೆ ಬಂದರೂ ನಮಗೆ ಆತಂಕವಿಲ್ಲ, ಅದು ಅವರ ವೈಯಕ್ತಿಕ ವಿಚಾರ ಆಗಿರುತ್ತದೆ ಎಂದು ಹೇಳಿದರು.

ಬಿಜೆಪಿ ಆಡಳಿತದಲ್ಲಿ ಕ್ಷೇತ್ರ ಅಭಿವೃದ್ಧಿ ಆಗುತ್ತಿದೆ: ಬಿಸಿ.ಪಾಟೀಲ್
'ಬಿಜೆಪಿ ಆಡಳಿತದಲ್ಲಿ ನಮಗೆ ನಮ್ಮ ಕ್ಷೇತ್ರಕ್ಕೆ ಯಾವ ತೊಂದರೆಯೂ ಆಗುತ್ತಿಲ್ಲ, ನಿಗದಿತವಾಗಿ ಅನುದಾನ ಬಿಡುಗಡೆ ಆಗುತ್ತಿವೆ, ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತಿವೆ ಎಂದರು.

ಬಿಜೆಪಿ ಮೇಲೆ ಒತ್ತಡ ಮುಂದುವರೆಸಲು ನಿರ್ಧಾರ
ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆ ಇನ್ನಷ್ಟು ತಡವಾಗುವ ಸಾಧ್ಯತೆ ಇರುವ ಕಾರಣ, ಬಿಜೆಪಿ ಪಕ್ಷದ ಮೇಲೆ ಸಚಿವ ಸ್ಥಾನಕ್ಕಾಗಿ ಹಾಕಿರುವ ಒತ್ತಡವನ್ನು ಇನ್ನಷ್ಟು ಮುಂದುವರೆಸಲು ಇಂದು ಅನರ್ಹ ಶಾಸಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications