ಬಿಜೆಪಿಯೇ ಸೂತ್ರದಾರ, ಇವರೆಲ್ಲ ಪಾತ್ರಧಾರಿಗಳು: ಇದು ಡ್ರಾಮಾ ಪೊಲಿಟಿಷಿಯನ್ಸ್!
ಬೆಂಗಳೂರು, ನವೆಂಬರ್.14: ಡ್ರಾಮಾ ಜೂನಿಯರ್ಸ್, ಡ್ರಾಮಾ ಸೀನಿಯರ್ಸ್ ಬಗ್ಗೆ ಕೇಳಿದ್ದೀರಿ ಅಲ್ವಾ. ಇದು ಅದೆರಡಕ್ಕಿಂತ ಫುಲ್ ಡಿಫರೆಂಟ್. ಯಾಕೆಂದರೆ ಇದು ಡ್ರಾಮಾ ಪೊಲಿಟಿಶಿಯನ್ಸ್. ಈ ಮಾತನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿದ್ದಾರೆ.
ರಾಜ್ಯದಲ್ಲಿ ಉಪ ಚುನಾವಣೆ ಕಾವು ಏರುತ್ತಿದೆ. 16 ಮಂದಿ ಅನರ್ಹ ಶಾಸಕರು ಕೇಸರಿ ಬಾವುಟ ಹಿಡಿದು ಸಂಭ್ರಮಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿಗರು ನಡೆಸುತ್ತಿರುವ ನಾಟಕದ ಮುಂದುವರಿದ ಭಾಗ ಅಂತಾ ಕಿಡಿ ಕಾರಿದ್ದಾರೆ.
ಉಪ ಚುನಾವಣೆ: 13 ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈತ್ರಿ ಸರ್ಕಾರಕ್ಕೆ ಬೆನ್ನು ತೋರಿಸಿ ಹೋಗಿದ್ದು. ಪಕ್ಷಾಂತರ ಕಾಯ್ದೆಗೆ ವಿರುದ್ಧವಾಗಿ ಪಕ್ಷ ತೊರೆದಿದ್ದು. 17 ಮಂದಿ ಶಾಸಕರೆಲ್ಲ ರಾಜೀನಾಮೆ ಸಲ್ಲಿಸಿದ್ದು ಎಲ್ಲವೂ ಬಿಜೆಪಿಗರೇ ಆಡಿಸಿದ ನಾಟಕ. ಈಗ ಅನರ್ಹ ಶಾಸಕರೆಲ್ಲ ಬಿಜೆಪಿ ಸೇರ್ಪಡೆಗೊಂಡಿದ್ದು ಅದರ ಮುಂದುವರಿದ ಭಾಗ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.
ಅನರ್ಹ ಶಾಸಕರೆಲ್ಲ ಪಾತ್ರಧಾರಿಗಳು!
ರಾಜ್ಯದಲ್ಲಿ ಈ ಹಿಂದೆ ನಡೆದಿರುವ ಹಾಗೂ ಈಗ ನಡೆಯುತ್ತಿರುವ ರಾಜಕೀಯ ನಾಟಕಕ್ಕೆಲ್ಲ ಬಿಜೆಪಿಗೇ ಸೂತ್ರಧಾರಿಗಳು ಎಂದು ಸಿದ್ದರಾಮಯ್ಯ ಆರೋಪಿಸಿದರು. ಬಿಜೆಪಿ ನಾಯಕರು ಆಡಿಸಿದಂತೆ ಇವರು ಆಡಿದ್ದಾರೆ. ಈಗಲೂ ರಾಜ್ಯದಲ್ಲಿ ಡ್ರಾಮಾ ನಡೆಯುತ್ತಿದೆ. ಉಪ ಚುನಾವಣೆಯಲ್ಲಿ ಈಗ ಅವರಿಗೆ ಟಿಕೆಟ್ ನೀಡಿದ್ದು, ಅದರ ಮುಂದುವರಿದ ಭಾಗ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಅವರೆಲ್ಲ ಈಗ ಅನರ್ಹ ಶಾಸಕರು ಸ್ವಾಮಿ!
16 ಮಂದಿ ಶಾಸಕರಿಗೆ ಬಿಜೆಪಿ ಟಿಕೆಟ್ ಘೋಷಿಸಿದ್ದು ಆಗಿದೆ. ಆದರೆ, ಅವರೆಲ್ಲ ಈಗ ಹಾಲಿ ಶಾಸಕರಲ್ಲ. ಮಾಜಿ ಶಾಸಕರೂ ಅಲ್ಲ, ಸುಪ್ರೀಂಕೋರ್ಟ್ ತೀರ್ಪಿನಲ್ಲೇ ಹೇಳಿದಂತೆ ಅವರೆಲ್ಲ ಅನರ್ಹ ಶಾಸಕರು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
"ಅನರ್ಹ ಶಾಸಕರ ಅನ್ಯಾಯಕ್ಕೆ ತಕ್ಕ ಉತ್ತರ ನಮ್ಮಲ್ಲಿದೆ"
ಅವರು ಸೇರಿದ್ದು ಬಿಜೆಪಿಗೆ, ಅರ್ಹರ ಪಟ್ಟಿಗಲ್ಲ!
ಮೈತ್ರಿ ಸರ್ಕಾರಕ್ಕೆ ಮೋಸ ಮಾಡಿ ಹೋಗಿರುವ 16 ಮಂದಿಯನ್ನು ಅನರ್ಹರು ಎಂದು ಸ್ವತಃ ಸುಪ್ರೀಂಕೋರ್ಟ್ ಹೇಳಿದೆ. ಈ ಹಣೆಪಟ್ಟಿಯನ್ನು ಹೊತ್ತುಕೊಂಡು ಅವರೆಲ್ಲ ಚುನಾವಣೆಗೆ ಹೋಗಬೇಕು. ಬಿಜೆಪಿ ಸೇರ್ಪಡೆಗೊಂಡರೆ, ಚುನಾವಣೆಯಲ್ಲಿ ಸ್ಪರ್ಧಿಸಿದರೆ ಈ ಹಣೆಪಟ್ಟಿ ಕಳಚುತ್ತದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಅನರ್ಹಗೊಂಡ ಶಾಸಕರೆಲ್ಲ ತಿರಸ್ಕೃತರು!
ಸುಪ್ರೀಂಕೋರ್ಟ್ ಅವರನ್ನು ಅನರ್ಹ ಶಾಸಕರು ಎಂದ ಮೇಲೆ ಅಂಥ ನಾಯಕರನ್ನು ಮತದಾರರು ಹೇಗೆ ತಾನೆ ಒಪ್ಪಿಕೊಳ್ಳುತ್ತಾರೆ ಹೇಳಿ. ಇಂಥ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಿದರೂ ಮತದಾರರು ಅವರನ್ನು ತಿರಸ್ಕರಿಸುತ್ತಾರೆ. ಉಪ ಚುನಾವಣೆಯಲ್ಲಿ ಅವರ ಆಟ ಏನೂ ನಡೆಯೋದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.