ಬಸವರಾಜ ಹೊರಟ್ಟಿಯಿಂದ ಜೀವ ಬೆದರಿಕೆ : ದಿಂಗಾಲೇಶ್ವರ ಶ್ರೀ
ಹುಬ್ಬಳ್ಳಿ, ನವೆಂಬರ್ 07 : ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯಿಂದ ನನಗೆ ಜೀವ ಬೆದರಿಕೆ ಇದೆ ಎಂದು ಬಾಲೆಹೊಸೂರು ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ.
ಲಿಂಗಾಯತ ಧರ್ಮ ಸಮಾವೇಶದಲ್ಲಿ ನಾನು ಬಡ್ಡಿ ವ್ಯವಹಾರ ಮಾಡುತ್ತೇನೆ ಎಂದು ಇಲ್ಲಸಲ್ಲದ ಆರೋಪ ಹೊರಟ್ಟಿಯವರು ಮಾಡಿದ್ದಾರೆ. ಅವರಿಗೆ ಸಾಮಾಜಿಕ ಜವಾಬ್ದಾರಿ ಇದ್ದರೆ ಇದನ್ನು ಸಾಬೀತು ಪಡಿಸಲಿ ಎಂದು ನ.7ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಹೊರಟ್ಟಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ನಮ್ಮ ಮೇಲೆ ಇಂತಹ ಆರೋಪ ಮಾಡುತ್ತಿರುವ ಹೊರಟ್ಟಿಯವರು ಈ ಹಿಂದೆ ಮೂರು ಸಾವಿರ ಮಠದ ಆಸ್ತಿ ಕಬಳಿಸಲು ಪ್ರಯತ್ನಿಸಿದ್ದರು. ಮಠಾಧೀಶರ ಮೇಲೆ ತಮ್ಮ ದರ್ಪವನ್ನು ತೋರದೆ ಹೊರಟ್ಟಿ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಲಿ. ಆದರೂ ನಮ್ಮ ಮೇಲೆ ನಾನೇ ಮಠ ಒಡೆಯಲು ಹುನ್ನಾರ ನಡೆಸಿದ್ದೇನೆ ಎಂದು ಆರೋಪಿಸುತ್ತಿದ್ದಾರೆ.
ನಾನು ಮೂರು ಸಾವಿರ ಮಠವನ್ನು ನುಂಗುವ ಕೆಲಸ ಮಾಡಿಲ್ಲ. ಒಂದೊಮ್ಮೆ ನಾನು ಬಡ್ಡಿ ವ್ಯಾಪಾರ ಮಾಡುವ ಹಾಗೂ ಸಮಾಜಕ್ಕೆ ದ್ರೋಹ ಮಾಡುವ ವ್ಯಕ್ತಿಯಾಗಿದ್ದರೆ, ಅವರ ಮಗನ ತಲೆಯ ಮೇಲೆ ಕೈ ಇಟ್ಟು ಪ್ರಮಾಣ ಮಾಡಲಿ ಎಂದು ಸವಾಲೆಸಿದಿದ್ದಾರೆ.
ಗದಗಿನ ತೋಂಟದಾರ್ಯ ಶ್ರೀ ತಮ್ಮ ಕಪಿಮುಷ್ಠಿಯಲ್ಲಿಯೇ ಎಲ್ಲ ಮಠಾಧೀಶರು ಇರಲಿ ಎಂಬ ಕಾರಣಕ್ಕೆ ಯಾವೊಂದು ಮಠವನ್ನು ಬೆಳೆಯಲು ಬಿಡುತ್ತಿಲ್ಲ. ಈ ಕಾರಣದಿಂದ ಅವರು ಮಠಾಧೀಶರ ಕಾಲೆಳೆಯುವ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಹಲವು ಮಠಾಧೀಶರಿಗೆ ತೊಂದರೆಯಾಗುತ್ತಿದೆ, ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಡುತ್ತಿರುವ ಎಂದು ವೇದಿಕೆ ಮೇಲೆ ಕಾಣಿಸಿಕೊಂಡಿರುವ ಎಲ್ಲ ಮಠಾಧೀಶರುಗಳು ರಾಜಕಾರಣ ಮಾಡುವ ಮಠಾದೀಶರು ಎಂದು ಕಿಡಿಕಾರಿದ್ದಾರೆ.
ಲಿಂಗಾಯತ ಸಮಾವೇಶ ಮಾಡುತ್ತಿರುವ ಯಾರೊಬ್ಬ ರಾಜಕಾರಣಿಯೂ ವಿಭೂತಿ ಹಚ್ಚಿಲ್ಲ, ಲಿಂಗ ಧರಿಸಿಲ್ಲ. ಇವರೆಲ್ಲ ಯಾವ ಕಾರಣಕ್ಕೆ ಲಿಂಗಾಯತ ಸಮಾವೇಶ ಮಾಡುತ್ತಾರೋ ತಿಳಿದಿಲ್ಲ ಎಂದು ಲೇವಡಿ ಮಾಡಿದ ಅವರು, ಒಂದು ತಂದೆಗೆ ಹುಟ್ಟಿದವರು ಲಿಂಗಾಯತರು, ಐದು ತಂದೆಗೆ ಹುಟ್ಟಿದವರು ವೀರಶೈವರು ಎಂಬ ಶ್ರೀಗಳ ಹೇಳಿಕೆಯಿಂದ ನಮಗೂ ನೋವಾಗಿದೆ. ಜವಾಬ್ದಾರಿ ಸ್ಥಾನದಲ್ಲಿರುವವರು ಹೀಗೆ ಮಾತನಾಡಬಾರದು. ಈ ಹಿಂದೆಯು ಮೃತ್ಯುಂಜಯ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ಸೃಷ್ಟಿಸಿದ್ದರು. ಇದು ಮೃತ್ಯುಂಜಯ ಸ್ವಾಮೀಜಿ ಯೋಗ್ಯತೆಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿದ್ದಾರೆ.
ಅಮಿನಗಢದ ಪ್ರಭುಶಂಕರ ಸ್ವಾಮೀಜಿ, ಕುಂದಗೋಳದ ಬಸವರಾಜ ಸ್ವಾಮೀಜಿ, ಮಣಕವಾಡದ ಬಸವಾನಂದ ಸ್ವಾಮೀಜಿ ಉಪಸ್ಥಿತರಿದ್ದರು.