ದಿನೇಶ್ ಗುಂಡೂರಾವ್ ತಾಯಿ ವರಲಕ್ಷ್ಮಿ ಗುಂಡೂರಾವ್ ಕೋವಿಡ್ನಿಂದ ನಿಧನ
ಬೆಂಗಳೂರು, ಜನವರಿ 6: ಮಾಜಿ ಮುಖ್ಯಮಂತ್ರಿ ದಿ. ಗುಂಡೂರಾವ್ ಅವರ ಪತ್ನಿ ಹಾಗೂ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಅವರ ತಾಯಿ ವರಲಕ್ಷ್ಮಿ ಗುಂಡೂರಾವ್ ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಕೋವಿಡ್ ಸಂಬಂಧಿ ಸಮಸ್ಯೆಗಳಿಂದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
Recommended Video
ದಿ. ಗುಂಡೂರಾವ್ ಅವರು 1993ರ ಆಗಸ್ಟ್ನಲ್ಲಿ ರಕ್ತ ಕ್ಯಾನ್ಸರ್ನಿಂದ ನಿಧನರಾಗಿದ್ದರು. ಅವರ ನಿಧನದ ನಂತರ 1996ರಲ್ಲಿ ವರಲಕ್ಷ್ಮಿ ಗುಂಡೂರಾವ್ ಕೂಡ ರಾಜಕೀಯಕ್ಕೆ ಇಳಿದಿದ್ದರು. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಅವರು ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಬಿಜೆಪಿಯ ಅನಂತಕುಮಾರ್ ಎದುರು ಸೋಲು ಅನುಭವಿಸಿದ್ದರು.
ವರಲಕ್ಷ್ಮಿ ಗುಂಡೂರಾವ್ ಅವರು ಮೂವರು ಪುತ್ರರಾದ ದಿನೇಶ್ ಗುಂಡೂರಾವ್, ಮಹೇಶ್ ಗುಂಡೂರಾವ್ ಮತ್ತು ರಾಜೇಶ್ ಗುಂಡೂರಾವ್ ಅವರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ದೇವನಹಳ್ಳಿಯ ತೋಟದಲ್ಲಿ ಬುಧವಾರ ನಡೆಯಲಿದೆ ಎಂದು ವರದಿಯಾಗಿದೆ.

ವರಲಕ್ಷ್ಮಿ ಗುಂಡೂರಾವ್ ಅವರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ. 'ಮಾಜಿ ಮುಖ್ಯಮಂತ್ರಿ ದಿ. ಗುಂಡೂರಾವ್ ರವರ ಧರ್ಮಪತ್ನಿ ಶ್ರೀಮತಿ ವರಲಕ್ಷ್ಮಿ ಗುಂಡೂರಾವ್ ರವರು ನಿಧನರಾದರೆಂಬ ಸುದ್ದಿ ಕೇಳಿದೆ.
ನನ್ನ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಪುತ್ರರಾದ ಶ್ರೀ ದಿನೇಶ್ ಗುಂಡೂರಾವ್ ಮತ್ತು ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೊರಕಲಿ' ಎಂದು ಸಚಿವ ಎಸ್. ಸುರೇಶ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
'ನಮ್ಮ ಶಕ್ತಿ, ಯಾವಾಗಲೂ ನಮ್ಮ ಮಾರ್ಗದರ್ಶಿ ಬೆಳಕು. ನೀವು ನಿಜಕ್ಕೂ ಕಠಿಣವಾಗಿ ಹೋರಾಡಿದ್ದೀರಿ. ಆದರೆ ಕೋವಿಡ್ ನಿಮಗಿಂತ ಶಕ್ತಿಶಾಲಿಯಾಗಿತ್ತು. ನಿಮ್ಮ ನಿಲುವು, ಮಗನ ಕುರಿತಾದ ಹೆಮ್ಮೆ ಮತ್ತು ಕುಟುಂಬದವರೊಂದಿಗೆ ಕಳೆದ ಕೊನೆಯ ದಿನಗಳು ಎಂದಿಗೂ ದೊಡ್ಡ ನೆನಪಾಗಿ ಉಳಿಯಲಿದೆ' ಎಂದು ದಿನೇಶ್ ಗುಂಡೂರಾವ್ ಅವರ ಪತ್ನಿ ತಬು ರಾವ್ ದುಃಖ ಹಂಚಿಕೊಂಡಿದ್ದಾರೆ.












Click it and Unblock the Notifications