'ದೆಹಲಿ ಮಾದರಿ ಉಚಿತ ವಿದ್ಯುತ್ ನೀಡುವ ತಾಕತ್ತು ಬಿಎಸ್ವೈ ಸರ್ಕಾರಕ್ಕೆ ಇದೆಯೇ?'
ಬೆಂಗಳೂರು, ನವಂಬರ್ 19: ಇಡೀ ಭಾರತಕ್ಕೆ ಮಾದರಿಯಾದ ದೆಹಲಿ ಸಿಎಂ ಕೇಜ್ರಿವಾಲ್ ಸರ್ಕಾರದ ವಿದ್ಯುಚ್ಛಕ್ತಿ ನೀತಿಯನ್ನು ಕರ್ನಾಟಕದಲ್ಲೂ ಜಾರಿ ಮಾಡಬೇಕು ಹಾಗೂ ಶೀಘ್ರವೇ ವಿದ್ಯುತ್ ದರ ಏರಿಕೆ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ಒತ್ತಾಯಿಸಿದ್ದಾರೆ.
ಇಂದು ಮೈಸೂರು ಬ್ಯಾಂಕ್ ವೃತ್ತದ ಬಳಿಯ ಕಾವೇರಿ ಭವನದ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ದೆಹಲಿ ರಾಜ್ಯ ವಿದ್ಯುತ್ ಉತ್ಪಾದನೆ ಮಾಡುವುದಿಲ್ಲ. ಎಲ್ಲವನ್ನೂ ಖಾಸಗಿ ಕಂಪೆನಿಗಳಿಂದಲೇ ಖರೀದಿಸುತ್ತದೆ, ಆದರೂ ತನ್ನ ರಾಜ್ಯದ ಜನರಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿದೆ ಎಂದು ಹೇಳಿದರು.

ಮೂರೂ ಪಕ್ಷಗಳು ಸಾಕಷ್ಟು ಹಗರಣ ನಡೆಸಿವೆ
ಆದರೆ ಶೇ.100 ರಷ್ಟು ಸ್ವಾವಲಂಬಿಯಾಗಿರುವ ನಮ್ಮ ಕರ್ನಾಟಕ ರಾಜ್ಯ ಶೇ.6 ರಷ್ಟು ಹೆಚ್ಚಳ ಮಾಡಿ ಜನಸಾಮಾನ್ಯರಿಗೆ ಹೊರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರ ಅನುಭವಿಸಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ವಿದ್ಯುತ್ ಖರೀದಿಯಲ್ಲಿ ಸಾಕಷ್ಟು ಹಗರಣ ನಡೆಸಿದ್ದು, ಅದನ್ನು ಸಾಮಾನ್ಯ ಜನರ ಮೇಲೆ ಹಾಕುತ್ತಿದೆ ಎಂದು ಕಿಡಿಕಾರಿದರು.

ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್
ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದ್ದು, 200 ಯೂನಿಟ್ಗಿಂತ ಹೆಚ್ಚು ಬಳಸಿದರೆ ಅದನ್ನು ಅರ್ಧ ಬೆಲೆಗೆ ನೀಡಲಾಗುತ್ತಿದೆ. ಅತ್ಯಂತ ಕಡಿಮೆ ದರದಲ್ಲಿ ಹಾಗೂ ಉಚಿತವಾಗಿ ತನ್ನ ನಾಗರಿಕರಿಗೆ ಇಡೀ ದೇಶದಲ್ಲೇ ವಿದ್ಯುತ್ ನೀಡುವ ಏಕೈಕ ರಾಜ್ಯ ಎಂದರೆ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಮಾತ್ರ ಎಂದರು.

ಆಮ್ ಆದ್ಮಿ ಪಕ್ಷ ಸರಣಿ ಪ್ರತಿಭಟನೆ
ಇಡೀ ದೇಶಕ್ಕೆ ಮಾದರಿಯಾದ ದೆಹಲಿ ಮಾದರಿ ವಿದ್ಯುಚ್ಛಕ್ತಿ ನೀತಿಯನ್ನು ಕರ್ನಾಟಕ ರಾಜ್ಯದಲ್ಲಿ ಅಳವಡಿಸಿ 200 ಯೂನಿಟ್ ವಿದ್ಯುಚ್ಛಕ್ತಿಯನ್ನು ನೀಡುವ ತಾಕತ್ತು ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇದೆಯೇ ಎಂದು ಪ್ರಶ್ನಿಸಿದರು.
ಈ ಕೂಡಲೇ ಈ ದರ ಹೆಚ್ಚಳದ ಆದೇಶವನ್ನು ಸರ್ಕಾರ ಹಿಂಪಡೆಯದೇ ಹೋದರೆ, ಇಡೀ ರಾಜ್ಯದಾದ್ಯಂತ ಆಮ್ ಆದ್ಮಿ ಪಕ್ಷ ಸರಣಿ ಪ್ರತಿಭಟನೆ ಮಾಡಬೇಕಾಗುತ್ತದೆ ಹಾಗೂ ನಾಳೆಯಿಂದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬೆಂಗಳೂರಿನ ಪ್ರತಿ ಮನೆ ಮನೆಗೆ ತೆರಳಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ದುರಾಡಳಿತದ ಬಗ್ಗೆ ಜನರಿಗೆ ತಿಳಿಸಲಾಗುವುದು ಎಂದು ತಿಳಿಸಿದರು.

ದುರಾಡಳಿತದ ಬಗ್ಗೆ ಜನರಿಗೆ ತಿಳಿಸಲಾಗುವುದು
ಪ್ರತಿಭಟನೆಯಲ್ಲಿ ರಾಜ್ಯ ಸಹ ಸಂಚಾಲಕ ವಿಜಯ್ ಶರ್ಮ, ಗೋಪಾಲ ರೆಡ್ಡಿ, ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮೀಕಾಂತ್ ರಾವ್, ಎಸ್.ವಿ. ಪಣಿರಾಜ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ, ಉಪಾಧ್ಯಕ್ಷ ಸುರೇಶ್ ರಾಥೋಡ್, ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ, ಮುಖ್ಯ ವಕ್ತಾರ ಶರತ್ ಖಾದ್ರಿ, ಜ್ಯೋತೀಶ್, ರಾಜಾಜಿನಗರ ಕ್ಷೇತ್ರದ ಹಿರಿಯ ಮುಖಂಡ ಗುರುಮೂರ್ತಿ, ಚನ್ನಪ್ಪ ಗೌಡ, ಆಟೋ ಘಟಕದ ಅಯೂಬ್ ಖಾನ್, ಜಗದೀಶ್ ಚಂದ್ರ, ಸತೀಶ್ ಗೌಡ ಇದ್ದರು.












Click it and Unblock the Notifications