ಅಡಗಿದ ಸದ್ದು, ಕಣ್ಣು ಹಾಳು ಮಾಡದ ಪಟಾಕಿ ಮದ್ದು
ಬೆಂಗಳೂರು, ಅ. 23 : ದೀಪಾವಳಿ ಬಂತೆಂದರೆ ಪಾಲಕರ ಎದೆ ಢವಗುಡಲು ಪ್ರಾರಂಭಿಸುತ್ತದೆ, ಕಣ್ಣಿನಾಸ್ಪತ್ರೆಯ ವೈದ್ಯರುಗಳಿಗೆ ಎಡೆಬಿಡದ ಕೆಲಸ. ಆದರೆ, ಈ ದೀಪಾವಳಿ ಬೆಂಗಳೂರಿನ ಪಾಲಿಗೆ ಸಂತಸದ ಸುದ್ದಿಯನ್ನು ತಂದಿದೆ. ಅದೇನೆಂದರೆ, ಪಟಾಕಿ ಹಾರಿಸಲು ಹೋಗಿ ಹೆಚ್ಚಿನ ಮಕ್ಕಳು ಕಣ್ಣಿಗೆ ಗಾಯ ಮಾಡಿಕೊಳ್ಳದಿರುವುದು.
ಇದಕ್ಕಾಗಿ, ಪಟಾಕಿಯಿಂದ ಆಗುತ್ತಿರುವ ಅನಾಹುತದ ಬಗ್ಗೆ ಮಕ್ಕಳಲ್ಲಿ ಬೆಳೆಯುತ್ತಿರುವ ಜಾಗೃತಿ, ಗಗನಮುಖಿಯಾಗಿರುವ ಪಟಾಕಿ ಬೆಲೆ, ಪರಸರ ರಕ್ಷಣೆಯ ಬಗ್ಗೆ ನಾಗರಿಕರ ಕಾಳಜಿ ಮತ್ತು ಪಟಾಕಿಗಳನ್ನು ಟುಸ್ ಮಾಡುತ್ತಿರುವ ವರುಣದೇವನಿಗೆ ಒಂದು ಥ್ಯಾಂಕ್ಸ್ ಹೇಳಲೇಬೇಕು.
ಬೆಂಗಳೂರಿನಲ್ಲಿರುವ ನಾರಾಯಣ ನೇತ್ರಾಲಯದಲ್ಲಿ ನರಕ ಚತುರ್ಧಶಿಯ ಸಂಜೆ ಇಬ್ಬರು ಮಕ್ಕಳ ಕಣ್ಣು ಪಟಾಕಿ ಸಿಡಿತದಿಂದಾಗಿ ಕೆಂಪಾಗಿದ್ದರಿಂದ ಹೊರರೋಗಿಯಾಗಿ ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಗಿದೆ. ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ ಕೇವಲ 1 ಪ್ರಕರಣ ಮಾತ್ರ ದಾಖಲಾಗಿದೆ. ಶಾಹಿದ್ ಎಂಬ ಬಾಲಕ ಕಣ್ಣಿಗೆ ಗಾಯ ಮಾಡಿಕೊಂಡಿದ್ದಕ್ಕೆ ಚಿಕಿತ್ಸೆ ನೀಡಲಾಗಿದೆ.

ಆದರೆ, ಪ್ರತಿವರ್ಷಕ್ಕೆ ಹೋಲಿಸಿದರೆ ಈ ವರ್ಷ ಪಟಾಕಿಗಳ ಸದ್ದು ಅಡಗಿದೆ. ಪೊಲೀಸ್ ಇಲಾಘೆ ರಾತ್ರಿ ಹತ್ತರಿಂದ ಬೆಳಗಿನ 6ರವರೆಗೆ ಪಟಾಕಿ ಹಾರಿಸುವುದು ನಿಷಿದ್ಧ ಎಂದು ಆದೇಶ ಹೊರಡಿಸಿದೆ. ಹಲವಾರು ಶಾಲೆಗಳಲ್ಲಿ ಪಟಾಕಿ ಹಾರಿಸುವುದರಿಂದ ಆಗುವ ಅನಾಹುತಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಹಲವಾರು ಮಕ್ಕಳು ಪಟಾಕಿ ಹಚ್ಚುವುದಿಲ್ಲ, ಪರಿಸರ ನಾಶ ಮಾಡುವುದಿಲ್ಲವೆಂದು ಪ್ರತಿಜ್ಞೆ ಕೂಡ ತೆಗೆದುಕೊಂಡಿದ್ದಾರೆ. ಅಲ್ಲದೆ, ಸಾಮಾಜಿಕ ತಾಣಗಳಲ್ಲಿ ಕೂಡ ಇದರ ಬಗ್ಗೆ ಸಾಕಷ್ಟು ಜಾಗೃತಿ ಹುಟ್ಟುಹಾಕಲಾಗಿದೆ. [10ರ ನಂತರ ಪಟಾಕಿ ಹೊಡೀಬೇಡಿ]
ಇಷ್ಟಾದರೂ, ಪಟಾಕಿ ಹುಚ್ಚಿರುವವರು, ಪಟಾಕಿ ಹಾರಿಸದಿದ್ದರೆ ಅದೆಂತಹ ದೀಪಾವಳಿ, ಪಟಾಕಿ ಸಿಡಿಸದಿದ್ದರೆ ಮಜವನ್ನೇ ಕಳೆದುಕೊಂಡಂತಾಗುತ್ತದೆ ಎಂದು ಅಂದುಕೊಂಡವರು ಪಟಾಕಿ ಸಿಡಿಸದೆ ಬಿಡುತ್ತಾರೆಯೆ? ಹಾಗಾಗಿ, ಅಲ್ಲಲ್ಲಿ ಸುಯ್ ಅಂತ ಆಗಸಕ್ಕೆ ಏರುತ್ತಿರುವ ರಾಕೆಟ್ಟುಗಳ, ಕಿವಿ ಪರದೆ ಹರಿದುಹೋಗುವಂತಹ ಬಾಂಬ್ ಸದ್ದು ಅಲ್ಲಲ್ಲಿ ಕೇಳಿಬರುತ್ತಿದೆಯಾದರೂ, ಮೊದಲಿನ ಆರ್ಭಟ ಖಂಡಿತ ಕಡಿಮೆಯಾಗಿದೆ.
ಮಿಂಟೋ ಆಸ್ಪತ್ರೆಯ ನಿರ್ದೇಶಕರಾದ ಡಾ. ಶಿವಪ್ರಸಾದ್ ರೆಡ್ಡಿ ಅವರ ಪ್ರಕಾರ, ಈಗ ತಾನೆ ದೀಪಾವಳಿ ಆರಂಭವಾಗಿರುವುದರಿಂದ ಮಕ್ಕಳ ಕಣ್ಣುಗಳಿಗೆ ಗಾಯವಾದ ಹೆಚ್ಚಿನ ಪ್ರಕರಣಗಳು ಬಂದಿಲ್ಲ. ಆದರೆ, ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಪ್ರತಿವರ್ಷ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಮುಂದಿನ ಎರಡು ದಿನಗಳಲ್ಲಿ ಏನು ಕೂಡ ಆಗಬಹುದು. ಆದರೂ, ಮಕ್ಕಳು, ಪೋಷಕರು ಜಾಗೃತೆಯಿಂದ ಇರುವುದು ಉತ್ತಮ ಎಂದು ಒನ್ಇಂಡಿಯಾ ಪ್ರತಿನಿಧಿಗೆ ತಿಳಿಸಿದರು.












Click it and Unblock the Notifications