"ಎಸ್.ಎಲ್.ಭೈರಪ್ಪನವರೊಂದಿಗೆ ನಾವು- ನೀವು ಸಂತೇಶಿವರದಲ್ಲಿ" ಡಿ.30ಕ್ಕೆ
ಬೆಂಗಳೂರು, ಡಿಸೆಂಬರ್ 12: ಸಾಹಿತಿಗಳಾದ ಸಂತೇಶಿವರ ಲಿಂಗಪ್ಪ ಭೈರಪ್ಪ (ಎಸ್.ಎಲ್.ಭೈರಪ್ಪ) ತಮ್ಮ ಕಾದಂಬರಿಗಳ ಮೂಲಕ ದೇಶದಲ್ಲೇ ಬಹಳ ಹೆಸರು ಪಡೆದವರು. ಅವರ ಕಾದಂಬರಿಗಳು ಭಾರತದ ಇತರ ಪ್ರಾದೇಶಿಕ ಭಾಷೆಗಳಿಗೆ ಅನುವಾದವಾಗಿವೆ. ಅವರ ಕಾದಂಬರಿಗಳಲ್ಲಿನ ಪಾತ್ರ, ಸ್ಥಳಗಳು ನಮ್ಮೂರಿನವೇ ಎಂದು ಹಲವರು ಭಾವಿಸಿದ್ದಿದೆ, ಭ್ರಮಿಸಿದ್ದಿದೆ.
ಲಿಂಗಾಯತ ಧರ್ಮ ವಿವಾದ : ಎಸ್ಎಲ್ ಭೈರಪ್ಪ ಸಂದರ್ಶನ
ಇದೀಗ ಆ ಲೇಖಕರ ಹುಟ್ಟೂರು ಸಂತೇಶಿವರದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು, ಇಡೀ ದಿನ ಅವರೊಂದಿಗೆ ಕಳೆಯುವ, ಅವರ ಮಾತು ಕೇಳುವ, ಜತೆಯಲ್ಲಿ ಊಟ ಮಾಡುವ ಅವಕಾಶವೊಂದು ಓದುಗರಿಗೆ ಸಿಗಲಿದೆ. ಇದೇ ತಿಂಗಳು ಅಂದರೆ ಡಿಸೆಂಬರ್ 30ರಂದು ಗೌರಮ್ಮ ಸ್ಮಾರಕ ಟ್ರಸ್ಟ್ ನಿಂದ "ಎಸ್.ಎಲ್.ಭೈರಪ್ಪನವರೊಂದಿಗೆ ನಾವು- ನೀವು ಸಂತೇಶಿವರದಲ್ಲಿ" ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ ಉಪಾಹಾರದೊಂದಿಗೆ ಕಾರ್ಯಕ್ರಮ ಆರಂಭವಾಗುತ್ತದೆ. ಆ ನಂತರ ಭೈರಪ್ಪನವರ ಜತೆಗೆ ಸಂವಾದ, ಛಾಯಾಚಿತ್ರ, ಸಂತೇಶಿವರದಲ್ಲಿ ಸುತ್ತಾಟ, ಮಾತುಕತೆ ಹೀಗೆ ಸಂಜೆಯವರೆಗೆ ಕಾರ್ಯಕ್ರಮಗಳಿರುತ್ತವೆ. ಈ ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸಬೇಕು ಎಂದು ನೀವಂದುಕೊಂಡರೆ ಮೇಲ್ ಮಾಡಿ, ಹಾಜರಿಯನ್ನು ಖಾತ್ರಿ ಪಡಿಸಿ.
ಉತ್ತರಕಾಂಡ ವಿಮರ್ಶೆಗೆ ವಿಮರ್ಶಕ ಸಿಎನ್ ರಾಮಚಂದ್ರನ್ ಪ್ರತಿಕ್ರಿಯೆ
ನೂರು ಮಂದಿಗೆ ಮಾತ್ರ ಅವಕಾಶ ಇರುವುದರಿಂದ ಆದಷ್ಟು ಬೇಗ ತಿಳಿಸಿದರೆ ಉತ್ತಮ. ಗೃಹಭಂಗ, ತಂತು, ಸಾಕ್ಷಿ, ಭೈರಪ್ಪನವರ ಆತ್ಮಕಥೆ ಭಿತ್ತಿ ಇವೆಲ್ಲವುದರಲ್ಲಿ ಚಿತ್ರಿತವಾಗಿರುವ ಸ್ಥಳಗಳಿಗೆ ಲೇಖಕ ಭೈರಪ್ಪನವರ ಜತೆಗೆ ಭೇಟಿ ನೀಡುವ ಅನುಭವ ತಪ್ಪಿಸಿಕೊಳ್ಳಬೇಡಿ. ಊಟ-ಉಪಾಹಾರದ ವ್ಯವಸ್ಥೆ ಮಾಡಬೇಕಾದ್ದರಿಂದ ಸ್ವಲ್ಪ ಮಟ್ಟಿಗಿನ ವೆಚ್ಚವನ್ನು ಭರಿಸಬೇಕಾಗುತ್ತದೆ.