ಮಾಧ್ಯಮದಲ್ಲಿ ದಲಿತ ಸಂವೇದನೆ, ವಿಶೇಷ ಕಾರ್ಯಾಗಾರ
ಬೆಂಗಳೂರು, ಜ. 5 : ಕರ್ನಾಟಕ ಮಾಧ್ಯಮ ಅಕಾಡೆಮಿಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ ಸಹಯೋಗದೊಡನೆ ಜ.8ರಂದು ಮಾಧ್ಯಮಗಳಲ್ಲಿ ದಲಿತ ಸಂವೇದನೆ ವಿಶೇಷ ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ಏರ್ಪಡಿಸಿದೆ.
ಬೆಳಿಗ್ಗೆ 11 ಗಂಟೆಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಎಚ್. ಆಂಜನೇಯ ಅವರು ಉದ್ಘಾಟಿಸಲಿದ್ದಾರೆ. ಮೂಲಸೌಲಭ್ಯ ಅಭಿವೃದ್ಧಿ, ಹಜ್, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಸಚಿವರಾದ ಆರ್. ರೋಷನ್ ಬೇಗ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಎಂ.ಎ. ಪೊನ್ನಪ್ಪ ಅವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ಎಲ್. ಹನುಮಂತಯ್ಯ, ಕನ್ನಡ, ಸಂಸ್ಕೃತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್ ಅವರು ಪಾಲ್ಗೊಳ್ಳುತ್ತಿದ್ದಾರೆ.
ಈ ವಿಶೇಷ ಕಾರ್ಯಾಗಾರದಲ್ಲಿ ದಲಿತ ಪ್ರಜ್ಞೆ ಹಾಗೂ ಮಾಧ್ಯಮ ಎಂಬ ವಿಷಯ ಕುರಿತು ಹಿರಿಯ ಪತ್ರಕರ್ತರಾದ ಕೋಟಿಗಾನಹಳ್ಳಿ ರಾಮಯ್ಯ, ಖಾದ್ರಿ ಎಸ್. ಅಚ್ಯುತನ್ ಹಾಗೂ ಲಕ್ಷ್ಮಣ್ ಹೂಗಾರ್ ಅವರು ವಿಷಯ ಮಂಡನೆ ಮಾಡಲಿದ್ದಾರೆ.
'ಸರ್ಕಾರದ ಸವಲತ್ತುಗಳು ಹಾಗೂ ಮಾಧ್ಯಮ' ವಿಷಯ ಕುರಿತು ಮೈಸೂರು ವಿಶ್ವ ವಿದ್ಯಾನಿಲಯದ ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಬಿ.ಪಿ. ಮಹೇಶಚಂದ್ರ ಗುರು ಹಾಗೂ ಈಶಾನ್ಯ ಟೈಮ್ಸ್ ದಿನಪತ್ರಿಕೆಯ ಸಂಪಾದಕರಾದ ನಾಗತಿಹಳ್ಳಿ ನಾಗರಾಜು ಅವರು ವಿಷಯ ಮಂಡನೆ ಮಾಡಲಿದ್ದಾರೆ. [ಜಾತಿ ಗಣತಿ : ಏಕೆ ಏನು, ಇದೆಲ್ಲ ಬೇಕೆ?]
ಗೋಷ್ಠಿಯ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎನ್. ರಾಜು ಅವರು ವಹಿಸಲಿದ್ದಾರೆ. 'ಸವಾಲುಗಳು ಮತ್ತು ಪರಿಹಾರ' ವಿಷಯ ಕುರಿತು ಹಿರಿಯ ಪತ್ರಕರ್ತರಾದ ಇಂದೂಧರ ಹೊನ್ನಾಪುರ, ಶೂದ್ರ ಶ್ರೀನಿವಾಸ, ಸಿರಿಗೆರೆ ತಿಪ್ಪೆಸ್ವಾಮಿ ಹಾಗೂ ಕರ್ನಾಟಕ ಸಂಧ್ಯಾಕಾಲ ಪತ್ರಿಕೆಯ ಸಂಪಾದಕರಾದ ಡಿ. ಶಿವಲಿಂಗಪ್ಪ, ಆರಂಭ ಪತ್ರಿಕೆಯ ಸಂಪಾದಕರಾದ ಅಬ್ಬೂರು ರಾಜಶೇಖರ ಅವರು ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಗೋಷ್ಠಿಯ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ ಅಧ್ಯಕ್ಷರಾದ ಚೆಲುವರಾಜು ಅವರು ವಹಿಸಲಿದ್ದಾರೆ. ಈ ವಿಶೇಷ ಕಾರ್ಯಾಗಾರದ ಸಂಚಾಲಕರಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರಾದ ಮಾಳಪ್ಪ ಅಡಸಾರೆ ಅವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಸಕ್ತ ಸಾರ್ವಜನಿಕರು, ಪತ್ರಿಕೋದ್ಯಮ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಲು ಮುಕ್ತ ಅವಕಾಶವಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಎಸ್. ಶಂಕರಪ್ಪ ಅವರು ತಿಳಿಸಿದ್ದಾರೆ.
ಸ್ಥಳ : ಸಮ್ಮೇಳನ ಸಭಾಂಗಣ, ವಿಕಾಸ ಸೌಧ, ಕೊಠಡಿ ಸಂಖ್ಯೆ 149, 4ನೇ ಮಹಡಿ, ಬೆಂಗಳೂರು. ಸಮಯ : ಬೆಳಿಗ್ಗೆ 11 ಗಂಟೆಗೆ. ದಿನಾಂಕ : ಜನವರಿ 8.