ಡಿಕೆಶಿ ಮನೆಯಲ್ಲಿ ಮುಂದುವರಿದ ತನಿಖೆ: ದಿನದ 10 ಪ್ರಮುಖ ಬೆಳವಣಿಗೆ
ಡಿಕೆ ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ರೈಡ್. ದಿನದ ಪ್ರಮುಖ ಬೆಳವಣಿಗೆಗಳಲ್ಲಿ ಜಾರಿ ನಿರ್ದೇಶನಾಲಯದಲ್ಲಿ ಡಿಕೆಶಿ ವಿರುದ್ಧ ಹೊಸ ದೂರು ದಾಖಲಾಗಿದೆ. ಡಿಕೆಶಿಯಿಂದ ಮಹತ್ವದ ಡೈರಿಯೊಂದನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿ
ಬೆಂಗಳೂರು, ಆಗಸ್ಟ್ 3: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ ಬುಧವಾರ ಬೆಳಗ್ಗೆಯಿಂದ ಪರಿಶೀಲನೆ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ಗುರುವಾರ ತಡರಾತ್ರಿಯಾದರೂ ಅಲ್ಲೇ ಠಿಕಾಣಿ ಹೂಡಿ ಹಲವಾರು ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದರು.
ಬುಧವಾರ ಬೆಳಗ್ಗೆಯಿಂದ ಆರಂಭವಾಗಿದ್ದ ಪರಿಶೀಲನೆ, ಹಲವಾರು ದಾಖಲಾತಿಗಳ ವಶ ಪ್ರಕ್ರಿಯೆಗಳು ಗುರುವಾರ ಅಂತ್ಯಕ್ಕೆ ಮುಗಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಗುರುವಾರ ರಾತ್ರಿ 11 ಗಂಟೆಯಾದರೂ, ತನಿಖಾಧಿಕಾರಿಗಳು ಸಚಿವರ ಮನೆಯಲ್ಲೇ ಮೊಕ್ಕಾಂ ಹೂಡಿ, ತನಿಖೆ ಮುಂದುವರಿಸಿದ್ದರು.
ಇನ್ನು, ದಿನ ಪ್ರಮುಖ ಹತ್ತು ಬೆಳವಣಿಗೆಗಳು ಈ ರೀತಿಯಾಗಿವೆ.

ದುಬೈನಲ್ಲಿ ಶಾಪಿಂಗ್ ಮಾಲ್?
ದಿನದ ಪ್ರಮುಖ ಬೆಳವಣಿಗೆಯಲ್ಲಿ ಹಲವಾರು ಮಹತ್ವದ ವಿಚಾರಗಳು ಹಲವಾರು ಸುದ್ದಿ ಮಾಧ್ಯಮಗಳ ಮೂಲಕ ಹೊರಬಿದ್ದವು. ಅದರಲ್ಲೊಂದು, ಡಿಕೆಶಿ ಅವರು ಲಂಡನ್ ನಲ್ಲಿ ವಿಜಯ್ ಮಲ್ಯ ಮನೆಯ ಬಳಿ ಬಂಗಲೆ ಹೊಂದಿರುವುದು, ಸಿಂಗಾಪುರ ಹಾಗೂ ಇತರೆಡೆ ಹಲವಾರು ಕಂಪನಿಗಳಲ್ಲಿ ಹಣ ತೊಡಗಿಸಿರುವುದು, ದುಬೈನಲ್ಲಿ ಶಾಪಿಂಗ್ ಮಾಲ್ ಅನ್ನೂ ಕಟ್ಟಿಸುತ್ತಿರುವುದಾಗಿ ಕೆಲವು ಸುದ್ದಿಸಂಸ್ಥೆಗಳು ವರದಿ ಮಾಡಿದವು. ಈ ಎಲ್ಲಾ ವಿದೇಶಿ ಆಸ್ತಿ, ವ್ಯವಹಾರಗಳಿಗೆ ಹವಾಲಾ ಮಾರ್ಗಗಳ ಮೂಲಕ ಹಣ ಸಾಗಿದೆ ಎಂದ ವಿಚಾರವನ್ನು ವರದಿಯಲ್ಲಿ ಹೇಳಲಾಯಿತು.
ಗ್ಯಾಲರಿ: ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ

ಆಸ್ಪತ್ರೆಗೆ ದಾಖಲಾದ ಶಾಸಕರು
ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಕೆಲ ದಿನಗಳಿಂದ ವಾಸ್ತವ್ಯ ಹೂಡಿದ್ದ ಗುಜರಾತ್ ನ ಇಬ್ಬರು ಶಾಸಕರು ಜ್ವರದ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಹತ್ತಿರದ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಗಂಭೀರವಾಗಿಲ್ಲವೆಂದು ತಿಳಿಸಿದ ವೈದ್ಯರು ಅವರ ಚಿಕಿತ್ಸೆ ಮುಂದುವರಿಸಿದರು.

ಡಿಕೆಶಿ ಮಾವನ ಮನೆಯಲ್ಲಿ ಮುಗಿದ ತನಿಖೆ
ಲಾಕರ್ ಗಳಲ್ಲಿ 2 ಲಾಕರ್ ಗಳನ್ನು ಓಪನ್ ಮಾಡಲಾಯಿತು. ಮೂರು ಲಾಕರ್ ತೆರೆಯಲು ಡಿಕೆಶಿ ನಿರಾಕರಣೆ. ನಕಲಿ ಕೀಲಿಕೈ ತಯಾರಿಸುವವರನ್ನು ಕರೆಸಿ ಲಾಕರ್ ಓಪನ್ ಮಾಡಿಸಿದ ಐಟಿ ಅಧಿಕಾರಿಗಳು ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆನ್ನಲಾಗಿದೆ. ಅತ್ತ, ಮೈಸೂರಿನ ಇಟ್ಟಿಗೆಗೂಡು ಪ್ರಾಂತ್ಯದಲ್ಲಿದ್ದ ಡಿಕೆಶಿ ಮಾವನ ಮನೆಯಲ್ಲಿ ಬುಧವಾರ ಬೆಳಗಿನ ಜಾವದಿಂದ ಮೊಕ್ಕಾಂ ಹೂಡಿದ್ದ ಐಟಿ ಅಧಿಕಾರಿಗಳಲ್ಲಿ ಆರು ಮಂದಿ ಗುರುವಾರ ರಾತ್ರಿ ವೇಳೆಗೆ ಅಲ್ಲಿಂದ ಹೊರಟರು. ಆದರೆ, ಒಬ್ಬ ಅಧಿಕಾರಿ, ಮೈಸೂರಿನ ನಜಾರಾಬಾದ್ ನ ಒಬ್ಬ ಪುರುಷ ಪೇದೆ, ಮಹಿಳಾ ಪೇದೆ ಆ ಅಧಿಕಾರಿ ಜತೆಗೆ ಅಲ್ಲೇ ಮೊಕ್ಕಾಂ ಹೂಡಿದರು.

ಹಣ ವರ್ಗಾವಣೆ ಒಪ್ಪಿದ ಆಪ್ತ: ವರದಿ
ಐಟಿ ಅಧಿಕಾರಿಗಳು ದೆಹಲಿಯಲ್ಲಿರುವ ಡಿಕೆಶಿಗೆ ಸೇರಿದ ಸಫ್ದರ್ಜಂಗ್ ಮನೆಯಲ್ಲಿ ಗುರುವಾರವೂ ತಮ್ಮ ಹುಡುಕಾಟ ಮುಂದುವರಿಸಲಾಗಿತ್ತು. ಈ ವೇಳೆ, ದೆಹಲಿಯ್ಲಲಿ ತನಿಖೆ ನಡೆಸುತ್ತಿದ್ದ ಅಧಿಕಾರಿಗಳ ಮುಂದೆ ಡಿಕೆಶಿ ಆಪ್ತ ಆಂಜನೇಯ (ಇವರು ದೆಹಲಿ ಕರ್ನಾಟಕ ಭವನದ ಉದ್ಯೋಗಿ) ಅವರು, ಡಿಕೆಶಿ ಕಡೆಯಿಂದ ಹಲವಾರು ರೀತಿಯಲ್ಲಿ ಹಣ ವರ್ಗಾವಣೆ ಆಗಿರುವುದನ್ನು ಒಪ್ಪಿಕೊಂಡಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿದವು.

ಈಗಲ್ಟನ್ ಗೆ ಭೇಟಿ ನೀಡಿದ ಬಾಲಕೃಷ್ಣ
ಗುಜರಾತ್ ಶಾಸಕರು ವಾಸ್ತವ್ಯ ಹೂಡಿದ್ದ ಈಗಲ್ಟನ್ ರೆಸಾರ್ಟ್ ಗೆ ಗುರುವಾರ ಮಾಗಡಿಯ ಜೆಡಿಎಸ್ ಬಂಡಾಯ ಶಾಸಕ ಎಚ್.ಸಿ. ಬಾಲಕೃಷ್ಣ ಗುರುವಾರ ಭೇಟಿ ನೀಡಿದರು. ಸಂಸದ ಡಿ.ಕೆ. ಸುರೇಶ್ ಅವರನ್ನು ರೆಸಾರ್ಟ್ ಒಳಗೆ ಭೇಟಿ ಮಾಡಿ ಧೈರ್ಯ ಹೇಳಿದ್ದೇನೆ ಎಂದು ಹೇಳಿದ ಬಾಲಕೃಷ್ಣ, "ರೆಸಾರ್ಟಿನಲ್ಲಿ ಏನೂ ಸಿಗುವುದಿಲ್ಲ ಎಂದು ಅಧಿಕಾರಿಗಳಿಗೆ ಗೊತ್ತಿದ್ದೂ ಹೆದರಿಸಲು ದಾಳಿ ನಡೆಸಿದ್ದಾರೆ. ಈ ಮೂಲಕ ಡಿ.ಕೆ. ಶಿವಕುಮಾರ್ ಅವರನ್ನು ಇಡೀ ದೇಶದಲ್ಲೇ ಹೀರೊ ಮಾಡಿದ್ದಾರೆ,"' ಎಂದು ಅವರು ಹೇಳಿ
ದ್ದಾರೆ.

ಎಸಿಬಿ ಅಧಿಕಾರಿಗಳೊಂದಿಗೆ ಸಿಎಂ ಸಮಾಲೋಚನೆ
ತಮ್ಮ ಪಕ್ಷದ ಪ್ರಭಾವಿ ಮುಖಂಡ ಶಿವಕುಮಾರ್ ಅವರ ಮನೆಗಳ ಮೇಲೆ ಐಟಿ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಭೇಟಿಯಾಗಿ ಸುಧೀರ್ಘ ಮಾತುಕತೆ ನಡೆಸಿದರು. ಆನಂತರ,, ಎಸಿಬಿ ಅಧಿಕಾರಿಗಳನ್ನು ಮಧ್ಯಾಹ್ನ ತಮ್ಮ ಮನೆಗೆ ಕರೆಯಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಆ ಅಧಿಕಾರಿಗಳೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು.

ಡಿಕೆಶಿ ತಾಯಿಯಿಂದ ಕಿಡಿ ನುಡಿ
ಮಾಧ್ಯಮವೊಂದರ ಬಳಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಡಿಕೆಶಿ ತಾಯಿ ಗೌರಮ್ಮ, ತಮ್ಮ ಮಗನ ಈ ಸ್ಥಿತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ಕೆಲ ಹಿರಿಯ ರಾಜಕಾರಣಿಗಳೇ ಕಾರಣ ಎಂದು ಕಿಡಿಕಾರಿದರು. ಡಿಕೆಶಿ ಹಾಗೂ ಡಿ.ಕೆ. ಸುರೇಶ್ ಅವರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಆರೋಪಿಸಿದರು. ಕೆಲ ಹೊತ್ತಿನ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, ''ನಮ್ಮ ತಾಯಿ ಬಹುವಾಗಿ ನೊಂದಿದ್ದರಿಂದ ಆ ರೀತಿ ಮಾತನಾಡಿದ್ದಾರೆ. ಅದು ಅವರ ಹತಾಶೆಯ ನುಡಿಗಳಷ್ಟೇ'' ಎಂದು ಹೇಳುವ ಮೂಲಕ ಆ ವಿಚಾರವನ್ನು ಅಲ್ಲಿಗೇ ಸಮಾಪ್ತಿಗೊಳಿಸಲು ಯತ್ನಿಸಿದರು.

ರಾಜಕೀಯ ಬೇಡವೆಂದ ಮಾಜಿ ಡಿಸಿಎಂ
ರಾತ್ರಿ ವೇಳೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿಯ ಮಾಜಿ ಡಿಸಿಎಂ ಆರ್. ಅಶೋಕ್, ಡಿಕೆಶಿ ಮನೆ ಮೇಲಿನ ಐಟಿ ದಾಳಿಯಲ್ಲಿ ರಾಜಕೀಯ ಸಲ್ಲ. 2013ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಲಿಂಗಾಯತ, ಒಕ್ಕಲಿಗ ಮಠಗಳ ಮೇಲೆ ಐಟಿ ದಾಳಿಯಾಗಿತ್ತು. ಅದಕ್ಕೇನಂತೀರಿ? ಹಾಗಾಗಿ, ಡಿಕೆಶಿ ವಿಚಾರದಲ್ಲಿ ರಾಜಕೀಯ ಬಣ್ಣ ಬಳಿಯಬೇಡಿ ಎಂದು ಕಾಂಗ್ರೆಸ್ಸಿಗರಿಗೆ ತಾಕೀತು ಮಾಡಿದರು.

ಡಿಕೆಶಿ ವಿರುದ್ಧ ಬಿಡದಿ ವ್ಯಕ್ತಿಯಿಂದ ಆರೋಪ
ಸಂಜೆ ವೇಳೆಗೆ, ಬಿಡದಿಯ ಗುರುಪ್ರಸಾದ್ ಎಂಬುವರಿಂದ ನವದೆಹಲಿಯ ಜಾರಿ ನಿರ್ದೇಶನಾಲಯಕ್ಕೆ ಹೊಸತೊಂದು ದೂರು ದಾಖಲಾಯಿತು. ಅದರಲ್ಲಿ ಡಿಕೆಶಿ, ದ್ವಾರಕಾನಾಥ್, ಸಚಿನ್ ನಾರಾಯಣ್ (ಉದ್ಯಮಿ), ದ್ವಾರಕಾನಾಥ್ (ಜ್ಯೋತಿಷಿ), ಪುಟ್ಟಸ್ವಾಮಿ ಗೌಡ (ಎಲೆಕ್ಟ್ರಿಕಲ್ ಕಂಟ್ರಾಕ್ಟರ್), ಜಿವಿ ಬಲರಾಂ (ಕರ್ನಾಟಕ ನವೀಕರಿಸಬಹುದಾದ ಇಂಧನ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ), ಶ್ರೀಧರ್ (ಇಂಧನ ಸಚಿವರ ಆಪ್ತ ಕಾರ್ಯದರ್ಶಿ) ಹಲವಾರು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಡಿಕೆಶಿ ಅವರು 2 ಸಾವಿರ ಕೋಟಿ ರು. ಕಪ್ಪು ಹಣ ಬಿಳಿ ಮಾಡಿದ್ದಾರೆಂಬ ಆರೋಪಗಳೂ ಇದ್ದವು.

ಡೈರಿಯಲ್ಲಿ ಮಹತ್ವದ ಅಂಶ?
ರಾತ್ರಿ ವೇಳೆಗೆ, ಡಿಕೆಶಿಯವರಿಂದ ಮಹತ್ವದ ಡೈರಿಯೊಂದನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ ವರದಿಯಾಯಿತು. ಇದೇ ಡೈರಿಯನ್ನು ಡಿಕೆಶಿ, ಬುಧವಾರದ ವಿಚಾರಣೆ ವೇಳೆ ಹರಿದುಹಾಕಿದ್ದು, ಹರಿದ ಹಾಳೆಗಳನ್ನು ಒಟ್ಟುಗೂಡಿಸಿ ಅದರಿಂದ ಅಧಿಕಾರಿಗಳು ಮಾಹಿತಿ ಪಡೆದಿರುವುದಾಗಿ ಹೇಳಲಾಯಿತು. ಅದರಲ್ಲಿ ಎಐಸಿಸಿಗೆ (ಕಾಂಗ್ರೆಸ್) ಡಿಕೆಶಿಯಿಂದ ಮೂರು ಕೋಟಿ ಹೋಗಿರುವುದು ತಿಳಿದುಬಂದಿರುವುದಾಗಿ ಹೇಳಲಾಯಿತು.











Click it and Unblock the Notifications