'ಕರ್ನಾಟಕದಲ್ಲಿ ಕ್ಯಾಸಿನೋ ತೆರೆಯಲು ಮುಂದಾಗಿದ್ದ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ'
ಬೆಂಗಳೂರು, ಸೆ. 15: ಪ್ರವಾಸೋದ್ಯಮ ಅಭಿವೃದ್ಧಿ ನೆಪದಲ್ಲಿ ರಾಜ್ಯದಲ್ಲಿ ಕ್ಯಾಸಿನೋ ಶುರು ಮಾಡಲು ಹೊರಟವರು ಸಚಿವ ಸಿ.ಟಿ. ರವಿ. ಅವರೇ ಈಗ ಕ್ಯಾಸಿನೋ ವಿರೋಧಿಸಿ ಮಾತನಾಡುತ್ತಿದ್ದಾರೆ. ಅವರಿಗೆ ಮಾನ-ಮರ್ಯಾದೆ ಇದೆಯಾ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಾಗ್ದಾಳಿ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸಚಿವ ಸಿಟಿ ರವಿಯವರೇ ಈಗ ಕ್ಯಾಸಿನೋ ಬಗ್ಗೆ ಮಾತನಾಡ್ತಾರೆ ಅಂದ್ರೆ ಹೇಗೆ? ಇಲ್ಲಿ ಕ್ಯಾಸಿನೋ ತರೋಕೆ ಮುಂದಾಗಿದ್ದರು ಎಂದು ಸಚಿವ ಸಿ.ಟಿ. ರವಿ ಅವರ ವಿರುದ್ಧ ಈಶ್ವರ್ ಖಂಡ್ರೆ ಅವರು ಕಿಡಿಕಾರಿದ್ದಾರೆ.
ಜೊತೆಗೆ ಈಗ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ಕರ್ನಾಟಕ ಮತ್ತೊಂದು ಉಡ್ತಾ ಪಂಜಾಬ್ ಆಗಲಿದೆ ಎಂದು ಕೆಪಿಸಿಸಿ ಕಾಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಎಚ್ಚರಿಸಿದ್ದಾರೆ. ರಾಜ್ಯದಲ್ಲಿ ಡ್ರಗ್ ಮಾಫಿಯಾ ಮಟ್ಟಹಾಕದೆ ಹೋದರೆ ಕಷ್ಟ. ರಾಜ್ಯ ಮತ್ತೊಂದು ಉಡ್ತಾ ಪಂಜಾಬ್ ಆಗಲಿದೆ. ಡ್ರಗ್ಸ್ ತಡೆಯಲು ಎಲ್ಲರೂ ಕೈಜೋಡಿಸಬೇಕು. ಸಮಾಜಘಾತುಕ ವಿಚಾರಗಳನ್ನು ತಡೆಗಟ್ಟಬೇಕು. ಇದಕ್ಕೆ ವಿಶೇಷ ತನಿಖಾ ತಂಡವನ್ನು ರಚಿಸಬೇಕು.
ಇದರೊಂದಿಗೆ ಡ್ರಗ್ಸ್ ಪಿಡುಗಿನಿಂದ ನಮ್ಮ ಯುವಕರು ಹಾಳಾಗುತ್ತಿದ್ದಾರೆ. ಇದರಿಂದ ಅವರ ಬದುಕು ಕಗ್ಗತ್ತಲಾಗಿದೆ. ಡ್ರಗ್ಸ್ ತಡೆಯಲು ಪಕ್ಷಾತೀತವಾಗಿ ಕೈಜೋಡಿಸಬೇಕಿದೆ. ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚಾಗಿದೆ. ರೇವ್ ಪಾರ್ಟಿಗಳು ಮುಂದುವರಿಯುತ್ತಿವೆ. ದಿ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಅಧಿಕಾರದ ಅವಧಿಯಲ್ಲಿ ಡ್ರಗ್ ನಿಷೇಧ ಕಾಯ್ದೆ ಬಂದಿತ್ತು. ಡ್ರಗ್ಸ್ ಯಾರು ತಯಾರು ಮಾಡ್ತಿದ್ದಾರೆ. ಯಾರು ಸರಬರಾಜು ಮಾಡ್ತಿದ್ದಾರೆ. ಕಳ್ಳಸಾಗಾಣಿಕೆ ಯಾರು ಮಾಡ್ತಿದ್ದಾರೆ ಅವರಿಗೆ ಕಠಿಣ ಶಿಕ್ಷೆಯಾಗಬೇಕು.

ಸಂಸತ್ ಅಧಿವೇಶನ ಪ್ರಾರಂಭವಾಗಿದೆ. ಸೆ. 21 ರಿಂದ ವಿಧಾನಸಭೆ ಅಧಿವೇಶನವೂ ಆರಂಭವಾಗಲಿದೆ. ವಿವಾದಾತ್ಮಕ ಕಾಯ್ದೆಗಳನ್ನು ಜಾರಿಗೆ ತರುವುದನ್ನು ಬಿಡಿ, ಮೊದಲು ಡ್ರಗ್ಸ್ ಪಿಡುಗಿನ ಬಗ್ಗೆ ವಿಶೇಷ ಚರ್ಚೆಗೆ ಅವಕಾಶ ಕೊಡಿ. ಆ ಕಾಯ್ದೆಯನ್ನು ಮತ್ತಷ್ಟು ಬಲಗೊಳಿಸುವ ಬಗ್ಗೆ ನಿರ್ಧರಿಸಿ. ಡ್ರಗ್ಸ್ ದಂಧೆ ಮಾಡುವವರಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಮಾದಕ ವಸ್ತು ಪೂರೈಕೆದಾರರಿಗೆ 20 ವರ್ಷಗಳ ಶಿಕ್ಷೆ ನೀಡಬೇಕು. ವ್ಯಸನಿಗಳನ್ನು ಸರಿಪಡಿಸುವ ಕೇಂದ್ರಗಳನ್ನು ಆರಂಭಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಕೆಪಿಸಿಸಿ ಕಾಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಒತ್ತಾಯ ಮಾಡಿದ್ದಾರೆ. ಸಚಿವ ಸಿ.ಟಿ.ರವಿ ವಿರುದ್ಧ ಈಶ್ವರ್ ಖಂಡ್ರೆ ಗುಡುಗು












Click it and Unblock the Notifications