ಸಾರಿಗೆ ನೌಕರರ ಮುಷ್ಕರದಲ್ಲಿ ರಾಜಕೀಯ ಆಟ: ಸಿ.ಟಿ ರವಿ
ಬೆಂಗಳೂರು, ಏಪ್ರಿಲ್ 6: ನಾಳೆ (ಏ.7)ಯಿಂದ ಆರಂಭಗೊಳ್ಳುವ ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.
Recommended Video
ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸಿ.ಟಿ ರವಿ, ""ಸದ್ಯ ಉಪಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಡಿಸಿಎಂ ಲಕ್ಷ್ಮಣ ಸವದಿಯವರು ಮೇ 2ರ ನಂತರ ಬೇಡಿಕೆ ಈಡೇರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ'' ಎಂದರು.
ಸಾರಿಗೆ ಪ್ರತಿಭಟನೆಯಲ್ಲಿ ರಾಜಕೀಯ ಆಟ ನಡೆಯುತ್ತಿದೆ. ನಿಮ್ಮ ಬೇಡಿಕೆ ನಮಗೆ ಗೊತ್ತಿದೆ. ನೀವು ದಾಳ ಆಗಬೇಡಿ ಎಂದು ಮಾಜಿ ಸಚಿವ ಸಿ.ಟಿ ರವಿ ಅವರು ಸಾರಿಗೆ ಹೋರಾಟಗಾರರಿಗೆ ಕಿವಿಮಾತು ಹೇಳಿದ್ದಾರೆ.
ಇನ್ನು ತಮಿಳುನಾಡು ಚುನಾವಣೆ ವಿಚಾರವಾಗಿ ಮಾತನಾಡಿ, ಉತ್ತಮ ಫಲಿತಾಂಶ ಬರಲಿದೆ ಅನ್ನುವುದು ಗೊತ್ತಾಗುತ್ತಿದೆ. ನಮ್ಮ ಪರಿಶ್ರಮ ಹಾಗೂ ಹೋರಾಟ ಅಲ್ಲಿ ನಡೆದಿದೆ. ಅದು ಫಲಿತಾಂಶವಾಗಿ ಪ್ರಕಟವಾಗಬಹುದು. ನಮಗೆ ಜನರ ಮೇಲೆ ಹಾಗೂ ಇವಿಎಂ ಎರಡರ ಮೇಲೂ ವಿಶ್ವಾಸವಿದೆ. ಕೆಲವರ ಹಾಗೆ ಇವಿಎಂ ಮೇಲೆ ಆರೋಪ ಮಾಡುವುದಿಲ್ಲ ಎಂದರು.
ಏ.7ರಿಂದ ಸಾರಿಗೆ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು: ಶಿವಯೋಗಿ ಕಳಸದ್
ಇದೇ ವೇಳೆ ಕರ್ನಾಟಕದ ಉಪ ಚುನಾವಣೆಗಳ ವಿಚಾರವಾಗಿಯೂ ಪ್ರತಿಕ್ರಿಯಿಸಿ, ಈಗಾಗಲೇ ಕೆಲವು ನಾಯಕರುಗಳಿಗೆ ಜವಾಬ್ದಾರಿ ನೀಡಲಾಗಿದೆ. ನಾನು ಮತ್ತು ಉಸ್ತುವಾರಿ ಅರುಣ್ ಸಿಂಗ್ ಪ್ರಚಾರಕ್ಕೆ ಹೋಗುತ್ತೇವೆ. ಮೂರು ಕ್ಷೇತ್ರಗಳಿಗೆ ಹೋಗಿ ಪ್ರಚಾರ ಮಾಡಲಿದ್ದು, ಬಿಜೆಪಿಯ ಮೂರು ಅಭ್ಯರ್ಥಿಗಳು ಗೆದ್ದು ಬರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.