ಕೊಡಗಿನ ಅಪರಾಧ ಚಟುವಟಿಕೆಗೆ ಕಡಿವಾಣ: ಆರಗ ಜ್ಞಾನೇಂದ್ರ
ಬೆಂಗಳೂರು, ಸೆಪ್ಟೆಂಬರ್ 13: ನೆರೆಯ ಕೇರಳ ರಾಜ್ಯದ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚು. ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಇಂತಹ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆದ್ಯತೆ ನೀಡಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಗೆ ತಿಳಿಸಿದರು.
ಸೋಮವಾರದಿಂದ ಮಳೆಗಾಲದ ವಿಧಾನಸಭೆ ಅಧಿವೇಶನ ಆರಂಭವಾಗಿದೆ. ಮಂಗಳವಾರ ಸದನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಅಪ್ಪಚ್ಚು ರಂಜನ್ ಕೇಳಿದ ಪ್ರಶ್ನೆಗಳಿಗೆ ಆರಗ ಜ್ಞಾನೇಂದ್ರ ಅವರು ಉತ್ತರಿಸಿದರು. ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವುದೇ ಕೃತ್ಯಗಳು ನಡೆಯದಂತೆ ಅಪರಾಧಿಗಳ ಮೇಲೆ ಕಣ್ಗಾವಲು ಇಡಲಾಗುವುದು .ಅದಕ್ಕಾಗಿ ಕೆಲವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಸಿಸಿ ಕ್ಯಾಮರಾಗಳನ್ನು ಆಳವಡಿಸಲಾಗುವುದು. ನಂತರ ಅವುಗಳನ್ನು ಸಂಬಂಧಿಸಿದ ಪೊಲೀಸ್ ಸಿಬ್ಬಂದಿ ಪರೀಶಿಸಲಿದ್ದಾರೆ ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರದ ಅತಿದೊಡ್ಡ ಭೂ ಹಗರಣವನ್ನು ವಿಧಾನಸಭೆ ಕಲಾಪದಲ್ಲಿ ಬಯಲು ಮಾಡುತ್ತೇನೆ: ಎಚ್ಡಿಕೆ
ಕೊಡುಗು ಜಿಲ್ಲೆಗೆ ನೆರೆ ರಾಜ್ಯವಾದ ಕೇರಳವು ಹತ್ತಿರ ಇರುವ ಕಾರಣದಿಂದ ಆ ರಾಜ್ಯದಿಂದ ಅನೇಕ ಅಪರಾಧಿಗಳು ವಿವಿಧ ಕಾರಣಗಳಿಗೆ ಜಿಲ್ಲೆ ಪ್ರವೇಶಿಸುತ್ತಾರೆ. ವಾಹನಗಳ ಮೂಲಕ ಬಂದು ಗಡಿ ಭಾಗದಲ್ಲಿ ಅಕ್ರಮವಾಗಿ ಕೋಕೈನ್, ಡ್ರಗ್ಸ್, ಗಾಂಜಾ, ಹ್ಯಾಶ್ ಆಯಿಲ್ನಂತಹ ವಿವಿಧ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಈ ವೇಳೆ ಪೊಲೀಸರ ಕಾರ್ಯಾಚರಣೆಯಲ್ಲಿ ಸಾಕಷ್ಟು ಮಂದಿಯ ಬಂಧನವಾಗಿದ್ದರ ಬಗ್ಗೆ ಆಗಾಗ ಸುದ್ದಿ ಬಿತ್ತರಗೊಳ್ಳುತ್ತಲೇ ಇವೆ.
2021ರಲ್ಲಿ 1,684 ಅಪರಾಧ ಪ್ರಕರಣ ಪತ್ತೆ
ಕೇರಳ ಹಾಗೂ ಕೊಡಗು ಜಿಲ್ಲಾ ಗಡಿ ಭಾಗದಲ್ಲಿ ಪ್ರದೇಶದಲ್ಲಿ ಕಸ, ಕಟ್ಟಡ ತ್ಯಾಜ್ಯ ಸುರಿದು ಸಮಸ್ಯೆ ಉಂಟು ಮಾಡುವ ಬಗ್ಗೆ ಮಾತುಗಳು ಕೇಳಿ ಬಂದಿದೆ. ಅಲ್ಲದೇ ಈ ಭಾಗದಲ್ಲಿ ರಾಜಕೀಯ, ಧಾರ್ಮಿಕ ವಿಚಾರವಾಗಿ ಗಲಾಟೆ, ಕೊಲೆಯಂತಹ ಕೃತ್ಯಗಳು ಹೆಚ್ಚು ಎನ್ನಲಾಗಿದೆ. ಈ ಆತಂಕ ಹಿನ್ನೆಲೆಯಲ್ಲಿ ಅಪ್ಪಚ್ಚು ರಂಜನ್ ಅವರು ಸದನದಲ್ಲಿ ಪ್ರಸ್ತಾಪಿಸಿ ಪ್ರಶ್ನೆಗಳನ್ನು ಕೇಳಿದ್ದರು.
ಶಾಸಕ ಬಸವರಾಜ ದಢೇಸೂಗೂರು ಲಂಚದ ವಿಡಿಯೋ ಬಹಿರಂಗ ಮಾಡಿದ ಕಾಂಗ್ರೆಸ್
ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಆರಗ ಜ್ಞಾನೇಂದ್ರ, ಕಳೆದ 2021ರಲ್ಲಿ ಒಂದೇ ವರ್ಷದಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು 1,684 ಅಪರಾಧ ಪ್ರಕರಣಗಳು ದಾಖಲಾಗಿವೆ. ಇಷ್ಟು ಪ್ರಕರಣಗಳ ಪೈಕಿ 1,612 ಪ್ರಕರಣಗಳನ್ನು ಜಿಲ್ಲಾ ಪೊಲೀಸರು ಪತ್ತೆ ಹಚ್ಚಿಸಿದ್ದಾರೆ. ಕೆಲವು ಪ್ರಕರಣಗಳು ಅಂತ್ಯಗೊಂಡರೆ, ಇನ್ನು ಹಲವು ಪ್ರಕರಣಗಳ ತನಿಖೆ ನಡೆಯುತ್ತಿದೆ.
ಅದೇ ರೀತಿ ಪ್ರಸಕ್ತ ವರ್ಷ 2022ರ ಆಗಸ್ಟ್ ತಿಂಗಳ ಅಂತ್ಯದವರೆಗೆ ಒಟ್ಟು 1,122 ಪ್ರಕರಣಗಳು ದಾಖಲಾಗಿದ್ದರ ಬಗ್ಗೆ ವರದಿಯಾಗಿದೆ. 820 ಪ್ರಕರಣಗಳನ್ನು ಪತ್ತೆ ಈಗಾಗಲೇ ಪೊಲೀಸರು ಪತ್ತೆ ಮಾಡಿ ಆರೋಪಿಗಳಿಗೆ ಶಿಕ್ಷೆ ಕೊಡಿಸಿದ್ದಾರೆ ಎಂದು ಸದನಕ್ಕೆ ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ಮುಖಂಡ ಯು .ಟಿ. ಖಾದರ್ ಸಹ ಕೊಡಗಿನಲ್ಲಿ ಪದೇ ಪದೆ ಕೇಳಿ ಬರುತ್ತಿರುವ ಗಲಾಟೆ ಇನ್ನಿತರ ಅಪರಾಧ ಚಟುಟಿಕೆಯ ಪ್ರಸ್ತಾಪ ಕುರಿತು ಅಪ್ಪಚ್ಚು ರಂಜನ್ ಅವರ ಜತೆ ಧ್ವನಿಗೂಡಿಸಿದರು.