ಎಲೆಕ್ಟ್ರಿಕ್ ಅಂಗಡಿಯಲ್ಲಿ 20 ಲಕ್ಷ ರೂ. ಕದ್ದು ಕೆಲಸಗಾರ ಎಸ್ಕೇಪ್
ಬೆಂಗಳೂರು, ಜ. 07: ಸಾರ್ವಜನಿಕರ ಜೀವ ಪಡೆಯುತ್ತಿದ್ದ ರಿಪೇರಿ ರಸ್ತೆ ಈ ಸಲ ಕೆಲಸಗಾರನನ್ನೇ ಬಲಿ ಪಡೆದಿದೆ. ಎಲೆಕ್ಟ್ರಿಕ್ ಅಂಗಡಿಯಲ್ಲಿ ಎಂಟು ತಿಂಗಳಲ್ಲಿ 20 ಲಕ್ಷ ರೂ. ಕದ್ದು ಕಳ್ಳ ಎಸ್ಕೇಪ್. ಕುಡಿದ ಅಮಲಿನಲ್ಲಿ ಸಂಭವಿಸಿದ ಅಪಘಾತಕ್ಕೆ ಇಬ್ಬರು ಬಲಿ. ಆನೇಕಲ್ ರಾಜಶೇಖರರೆಡ್ಡಿ ಕೊಲೆ ಪ್ರಕರಣದಲ್ಲಿ ನೂರು ಸಿಸಿಟಿವಿ ಪರಿಶೀಲಿಸಿದರೂ ಸುಳಿವಿಲ್ಲ! ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣ.
ರಸ್ತೆ ಕಾಮಗಾರಿಗೆ ಕಾರ್ಮಿಕ ಬಲಿ:
ನಿಧಿ ಕಳ್ಳರಿಗಿಂತಲೂ ಹೀನಾಯವಾಗಿ ಬೆಂಗಳೂರಿನಲ್ಲಿ ಅಗೆದಿರುವ ರಸ್ತೆಗಳ ಅನೇಕ ಜನರ ಜೀವ ಬಲಿ ಪಡೆದಿವೆ. ಇದೇ ಮೊದಲ ಭಾರಿಗೆ ಕಾರ್ಮಿಕನ ಜೀವವನ್ನು ಕಸಿದುಕೊಂಡಿದೆ. ಬ್ಯಾಡರಹಳ್ಳಿ ಸಮೀಪದ ಈಸ್ಟ್ ವೆಸ್ಟ್ ಕಾಲೇಜು ರಸ್ತೆಯಲ್ಲಿ ಅಗೆದಿದ್ದ ರಸ್ತೆಗೆ ಪೈಪ್ ಅಳವಡಿಸುವ ವೇಳೆ ಕಾರ್ಮಿಕನೊಬ್ಬ ಸಿಕ್ಕಿ ಸಾವನ್ನಪ್ಪಿದ್ದಾನೆ. ಧನರಾಜ್ ಸಾವನ್ನಪ್ಪಿದ ಕಾರ್ಮಿಕ. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಈಸ್ಟ್ ವೆಸ್ಟ್ ಕಾಲೇಜು ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆಯನ್ನು ಅಗೆಯಲಾಗಿದೆ. ಪ್ರಪಾತದಂತೆ ಅಗೆದಿರುವ ರಸ್ತೆಗೆ ಶುಕ್ರವಾರ ಪೈಪ್ ಅಳವಡಿಸುವಾಗ ಕಾರ್ಮಿಕ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರ್ಮಿಕನನ್ನು ಹೊರ ತೆಗೆದಿದ್ದು, ಅಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ.

ಖತರ್ ನಾಕ್ ಕಳ್ಳ ಎಸ್ಕೇಪ್ :
ಎಲೆಕ್ಟ್ರಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮಾಲೀಕನಿಗೆ ಗೊತ್ತಾಗದೇ ಎಂಟು ತಿಂಗಳಲ್ಲಿ 20 ಲಕ್ಷ ರೂ. ಕದ್ದು ಪರಾರಿಯಾಗಿದ್ದಾನೆ. ರಾಜಸ್ತಾನ ಮೂಲದ ವ್ಯಕ್ತಿ ಕೆ.ಆರ್. ಮಾರ್ಕೆಟ್ ನ ಎಲೆಕ್ಟ್ರಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಯಾರೂ ಇಲ್ಲದ ವೇಳೆ ಕೌಂಟರ್ನಲ್ಲಿ ಹಣ ಎಗರಿಸುತ್ತಿದ್ದ. ಕಳೆದ ಎಂಟು ತಿಂಗಳಿನಿಂದ ಬರೋಬ್ಬರಿ 20 ಲಕ್ಷ ರೂ. ಹಣ ಎಗರಿಸಿದ್ದಾನೆ. ಆತ ಇತ್ತೀಚೆಗೆ ಕೆಲಸ ಬಿಟ್ಟು ಪರಾರಿಯಾಗಿದ್ದು, ಅನುಮಾನಗೊಂಡು ಮಾಲೀಕರು ಪರಿಶೀಲಿಸಿದಾಗ ಹಣ ಕಳ್ಳತನ ಆಗಿರುವುದು ಗೊತ್ತಾಗಿದೆ. ಈ ಕುರಿತು ಕೆ.ಆರ್. ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಪಘಾತಕ್ಕೆ ಇಬ್ಬರು ಬಲಿ:
ಬೆಂಗಳೂರಿನ ಪಿಇಎಸ್ ಕಾಲೇಜು ಸಮೀಪ ಸಂಭವಿಸಿದ ಬೈಕ್ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಲಕ್ಷ್ಮೀಶ ಮತ್ತು ರಾಘವೇಂದ್ರ ಮೃತಪಟ್ಟವರು. ನಾಗರಭಾವಿಯ ರೆಸ್ಟೋರಂಟ್ ನಲ್ಲಿ ಸ್ನೇಹಿತರ ಜತೆ ಗೂಡಿ ಪಾರ್ಟಿ ಮಾಡಿದ್ದ ಇಬ್ಬರು ಯುವಕರು ಬೈಕ್ ನಲ್ಲಿ ವಾಪಸು ಮನೆಗೆ ತೆರಳಿದ್ದರು. ಪಿಎಎಸ್ ಕಾಲೇಜು ಸಮೀಪದ ಕ್ಯಾಂಟೀನ್ ಬಳಿ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಬನಶಂಕರಿ ಸಂಚಾರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ರಾಜಶೇಖರ ರೆಡ್ಡಿ ಕೊಲೆ ಪ್ರಕರಣ:
ಆನೇಕಲ್ ನಲ್ಲಿ ಭೀಕರವಾಗಿ ಹತ್ಯೆಯಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ರಾಜಶೇಖರ ರಡ್ಡಿ ಪ್ರಕರಣ ಸಂಬಂಧ ಪೊಲೀಸರು ಅರೋಪಿಗಳ ಪತ್ತೆಗೆ ಎರಡು ಪ್ರತ್ಯೇಕ ತನಿಖಾ ತಂಡ ರಚನೆ ಮಾಡಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿದ ಸುಮಾರು ನೂರಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೂ ಮುನ್ನ ರಾಜಶೇಖರ್ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಮುನಿರಾಜು, ಹರೀಶ್, ವಾಸುದೇವ್ ಕೊಲೆಗೂ ಮುನ್ನ ರಾಜಶೇಖರ್ ಜತೆಗಿದ್ದರು. ಈ ಹಿನ್ನೆಲೆಯಲ್ಲಿ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ರಾಜಶೇಖರ್ ರೆಡ್ಡಿ ನೋಡಿಕೊಳ್ಳುತ್ತಿದ್ದ ಸಿಂಧು ಮತ್ತು ಪದ್ಮಾ ಅವರ ಜಮೀನಿಗೆ ಸಂಬಂಧಸಿದಂತೆ ಘಟನೆ ನಡೆದಿರಬಹುದೇ ಎಂದು ಶಂಕಿಸಿದ್ದಾರೆ. ಸಿಂಧು ಆಪ್ತನಾಗಿದ್ದ ಅಕ್ಮಲ್ ನನ್ನು ಸಹ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿಂಧು ಹಾಗೂ ರಾಜಶೇಖರರೆಡ್ಡಿ ಮದುವೆಯಾಗಲು ನಿಶ್ಚಯಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಂಧು ಆಪ್ತನಾಗಿದ್ದ ಅಕ್ಮಲ್ ಮೇಲೆ ಅನುಮಾನ ಮೂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications