ಎಂಗೇಜ್ಮೆಂಟ್ ಹೆಸರಿನಲ್ಲಿ ಚಿನ್ನದ ಸರ ಎಗರಿಸಿದ ಐನಾತಿ ಕಳ್ಳ!
ಬೆಂಗಳೂರು, ಡಿ. 04: ನೆಲಮಂಗಲ ಸಮೀಪದ ಕುಣಿಗಲ್ ರಸ್ತೆಯಲ್ಲಿ ಬಸ್ ಗೆ ಗ್ಯಾಸ್ ಲಾರಿ ಡಿಕ್ಕಿ. ಸ್ವಲ್ಪದರಲ್ಲಿ ತಪ್ಪಿದ ಭಾರೀ ಅನಾಹುತ. ಅದೇ ಲಾರಿ ಗುದ್ದಿ ಪಾದಚಾರಿ ಸಾವು. ಜ್ಯುವೆಲರಿ ಖರೀದಿ ಮಾಡಿಸುವ ಸೊಗಿನಲ್ಲಿ ಚಿನ್ನದ ಅಂಗಡಿಗೆ ಎಂಟ್ರಿ ಕೊಟ್ಟು ಸರ ಎಗರಿಸಿದ ಖತರ್ ನಾಕ್ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆ. ಸೋಲದೇವನಹಳ್ಳಿಯಲ್ಲಿ ಕೋಳಿ ಅಂಗಡಿಯನ್ನೂ ಬಿಡದ ಕಳ್ಳರು. ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣ.
ಚಿನ್ನದ ಅಂಗಡಿ ಮಾಲೀಕರಿಗೆ ಟೋಪಿ ಹಾಕಿದ ಕಳ್ಳ:
ಎಂಗೇಜ್ಮೆಂಟ್ ಗೆ ಚಿನ್ನದ ಸರ ಖರೀದಿಸುವ ಸೋಗಿನಲ್ಲಿ ಚಿನ್ನದ ಅಂಗಡಿಗೆ ತೆರಳಿರುವ ಕಳ್ಳ ಚಿನ್ನದ ಸರ ಕೊರಳಿಗೆ ಹಾಕಿಕೊಂಡು ಪರಾರಿಯಾಗಿರುವ ಘಟನೆ ಸಂಪಂಗಿರಾಮನಗರದಲ್ಲಿ ನಡೆದಿದೆ.
ಗ್ರಾಹಕನ ಸೋಗಿನಲ್ಲಿ ವ್ಯಕ್ತಿಯೊಬ್ಬ ಸಂಪಂಗಿರಾಮನಗರದಲ್ಲಿರುವ ಅನಿತಾ ಜ್ಯುವೆಲರಿ ಅಂಗಡಿಗೆ ತೆರಳಿದ್ದಾನೆ. ವಿವಾಹ ನಿಶ್ಚಿತಾರ್ಥಕ್ಕೆ ಒಳ್ಳೆಯ ಚಿನ್ನದ ಸರ ನೀಡುವಂತೆ ಕೇಳಿದ್ದಾನೆ. ಒಳ್ಳೆಯ ಗ್ರಾಹಕನಂತೆ ಬಿಂಬಿಸಿಕೊಂಡಿದ್ದು, ಇದನ್ನು ನಂಬಿ ಚಿನ್ನದ ಅಂಗಡಿ ಮಾಲೀಕ ಚಿನ್ನದ ಸರಗಳನ್ನು ನೀಡಿದ್ದಾನೆ. 22 ಗ್ರಾಂ ತೂಕದ ಚಿನ್ನದ ಸರವನ್ನು ಮಾಲೀಕ ನೋಡದಂತೆ ಕೊರಳಿಗೆ ಹಾಕಿಕೊಂಡಿದ್ದಾನೆ. ಮೊಬೈಲ್ ಕರೆಗೆ ಉತ್ತರಿಸುವ ಸೋಗಿನಲ್ಲಿ ಹೊರ ಹೋಗಿರುವ ಕಳ್ಳ ಚಿನ್ನದ ಸರ ಸಮೇತ ಎಸ್ಕೇಪ್ ಆಗಿದ್ದಾನೆ. ಚಿನ್ನದ ಸರ ಎಣಿಸುವಾಗ ಒಂದು ಕಾಣೆಯಾಗಿರುವುದು ಗೊತ್ತಾಗಿದ್ದು, ಸಿಸಿಟಿವಿ ಪರಿಶೀಲಿಸಿದಾಗ ಅಸಲಿ ಬಂಡವಾಳ ಬೆಳಕಿಗೆ ಬಂದಿದೆ.

ಚಿನ್ನದ ಸರ ತೋರಿಸಲು ಅನಿತಾ ಜ್ಯುವೆಲರಿ ಮಾಲೀಕ ಕೆಳಗೆ ನೋಡುವ ವೇಳೆ ಚಿನ್ನದ ಸರ ಯಾಮಾರಿಸಿರುವುದು ಬೆಳಕಿಗೆ ಬಂದಿದೆ. ಅಂಗಡಿ ಮಾಲೀಕ ಸಂಪಂಗಿರಾಮನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಸಿಟಿವಿ ಆಧರಿಸಿ ಕಳ್ಳನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಲಾರಿ ಪಲ್ಟಿ:
ಗ್ಯಾಸ್ ಲಾರಿ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿರುವ ಘಟನೆ ನೆಲಮಂಗಲ ಕುಣಿಗಲ್ ರಸ್ತೆಯಲ್ಲಿ ನಡೆದಿದೆ. ಸೋಲೂರು ಸಮೀಪದ ಗುಡೇಮಾರನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಪಾದಚಾರಿಯೊಬ್ಬ ಸಾವನ್ನಪ್ಪಿದ್ದಾನೆ. ಕುಡಿದ ನಶೆಯಲ್ಲಿ ಚಾಲಕ ವಾಹನ ಚಾಲನೆ ಮಾಡಿ ಕೆಎಸ್ಆರ್ಟಿಸಿ ಬಸ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಲಾರಿ ಪಾದಚಾರಿಗೆ ಡಿಕ್ಕಿ ಹೊಡೆದಿದ್ದು ಆತ ಸಾವನ್ನಪ್ಪಿದ್ದಾನೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಅರಕಲಗೂಡಿಗೆ ಹೋಗುತ್ತಿದ್ದ ಕೆಎಸ್ಆರ್ ಟಿಸಿ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಪಾದಚಾರಿ ರಾಜು ಎಂಬಾತ ಸಾವನ್ನಪ್ಪಿದ್ದು, ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಳಿ ಅಂಗಡಿಯಲ್ಲಿ ಕಳ್ಳತನ:
ಹೆಸರಘಟ್ಟ ಮುಖ್ಯ ರಸ್ತೆಯ ಚಿಕ್ಕ ಬಾಣವಾರದಲ್ಲಿ ಕೋಳಿ ಅಂಗಡಿ ಬಾಗಿಲು ಬೀಗ ಮುರಿದು ಐವತ್ತು ಸಾವಿರ ರೂ. ನಗದು ಹಣ ದೋಚಿರುವ ಘಟನೆ ನಡೆದಿದೆ. ಶಕೀಲ್ ಅಹಮದ್ ಎಂಬುವರಿಗೆ ಸೇರಿದ ಕೋಳಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಶೆಟರ್ ಮುರಿದು ಒಳಗೆ ನುಗ್ಗಿರುವ ಕಳ್ಳರು ಅಂಗಡಿಯಲ್ಲಿದ್ದ ನಗದು ಹಣ ಹಾಗೂ ಇತರೆ ವಸ್ತು ದೋಚಿ ಪರಾರಿಯಾಗಿದ್ದಾರೆ. ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಶ್ವನಾಥ್ ಕೊಲೆಗೆ ಸಂಚು ಪ್ರಕರಣ:
ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಆರೋಪಿ ಕುಳ್ಳ ದೇವರಾಜ್ ಮತ್ತು ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಅವರಿಗೆ ಜಾಮೀನು ದೊರೆತಿದೆ. ವಿಚಾರಣೆಗೆ ಹಾಜರಾಗುವಂತೆ ಇಬ್ಬರು ಆರೋಪಿಗಳಿಗೆ ರಾಜಾನುಕುಂಟೆ ಪೊಲೀಸರು ನೋಟಿಸ್ ಜಾರಿ ಮಡಿದ್ದಾರೆ. ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ಇಬ್ಬರು ವಿಚಾರಣೆಗೆ ಹಾಜರಾಗಿದ್ದು ಘಟನೆ ಸಂಬಂಧ ರಾಜಾನುಕುಂಟೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಸಂಚು ರೂಪಿಸಿ ನನ್ನನ್ನು ಟ್ರ್ಯಾಪ್ ಮಾಡಲಾಗಿದೆ. ನನ್ನನ್ನು ದುರುದ್ದೇಶ ಪೂರ್ವಕವಾಗಿ ಹೋಟೆಲ್ ಗೆ ಕರೆದುಕೊಂಡು ಮಾತನಾಡುವಂತೆ ಪುಸಲಾಯಿಸಿ ಟ್ರ್ಯಾಪ್ ಮಾಡಿದ್ದಾರೆ. ನನ್ನ ರಾಜಕೀಯ ಭವಿಷ್ಯ ಮುಗಿಸಲು ಸಂಚು ರೂಪಿಸಿದ್ದಾರೆ. ನಾನು ಯಾವುದೇ ಕೊಲೆಗೆ ಸುಪಾರಿ ಕೊಟ್ಟಿಲ್ಲ ಎಂದು ಗೋಪಾಲಕೃಷ್ಣ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications