ಕದ್ದ ಸರವನ್ನು ನುಂಗಿದ್ದ ಸರಗಳ್ಳ: ಸ್ಕ್ಯಾನಿಂಗ್ ಮಾಡಿಸಿ ಹೊರ ತೆಗೆಸಿದ ಪೊಲೀಸ್
ಬೆಂಗಳೂರು, ಆ. 23: ಯುವತಿ ಸರ ಕದ್ದ ಸರಗಳ್ಳ ಹೊಟ್ಟೆಯಿಂದ ಚಿನ್ನದ ಸರ ಕಕ್ಕಿಸಿದ ಬೆಂಗಳೂರು ಪೊಲೀಸರು. ಚಿಕನ್ ಫ್ರೈ ಸರಿ ಮಾಡಲಿಲ್ಲ ಎಂದು ಪತ್ನಿಯನ್ನು ಕೊಂದು ಕೆರೆಗೆ ಬಿಸಾಡಿದ ಗಂಡ ಜೈಲು ಪಾಲು. ಹಸಮಣೆ ಏರಬೇಕಿದ್ದ ಬಿಹಾರ ಮೂಲದ ಇಬ್ಬರು ಚಿರ ಯುವಕರು ಬಾಯ್ಲರ್ ಸ್ಫೋಟಕ್ಕೆ ಬಲಿ. ಇದು ಬೆಂಗಳೂರಿನಲ್ಲಿ ಸೋಮವಾರ ನಡೆದ ಮಹತ್ವದ ಅಪರಾಧ ಪ್ರಕರಣಗಳು.
ಸರಗಳ್ಳನ ಹೊಟ್ಟೆಯಿಂದ ಚಿನ್ನದ ಸರ ರೀಕವರಿ: ರಾಖಿ ಖರೀದಿಸಲು ತೆರಳಿದ್ದ ಯುವತಿಯ ಕೊರಳಿನಲ್ಲಿದ್ದ ಚಿನ್ನದ ಸರ ಕದ್ದ ಸರಗಳ್ಳನೊಬ್ಬ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದ. ತಾನು ಕಳ್ಳ ಎಂದು ಗೊತ್ತಾದರೆ ಜೀವ ತೆಗೆಯುತ್ತಾರೆ ಎಂಬ ಭಯದಲ್ಲಿ ಚಿನ್ನದ ಸರದ ತುಂಡನ್ನೇ ನುಂಗಿದ್ದಾನೆ. ಈ ಖತರ್ ನಾಕ್ ಸರಗಳ್ಳನನ್ನು ಸ್ಕ್ಯಾನಿಂಗ್ ಗೆ ಒಳಪಡಿಸಿದ ಪೊಲೀಸರು ಹೊಟ್ಟೆಯಲ್ಲಿದ್ದ ಚಿನ್ನದ ಸರವನ್ನು ಕಕ್ಕಿಸಿ ಜೈಲಿಗೆ ಕಳುಹಿಸಿದ್ದಾರೆ. ಇಂತಹ ಅಪರೂಪದ ಘಟನೆ ನಡೆದಿದ್ದು ಕೆ.ಆರ್. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ.
ಇಂತಹ ಅಪರೂಪದ ಘಟನೆ ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಟಿ. ಸ್ಟ್ರೀಟ್ ನಲ್ಲಿ ನಡೆದಿದೆ. ಯುವತಿಯೊಬ್ಬಳು ರಾಖಿ ಖರೀದಿಸಲು ಅಂಗಡಿಗೆ ಹೋಗುತ್ತಿದ್ದರು. ಯುವತಿಯ ಕೊರಳಿನಲ್ಲಿ ಚಿನ್ನದ ಸರಕ್ಕೆ ಕಣ್ಣು ಹಾಕಿದ ಸರಗಳ್ಳರು ಕಸಿದುಕೊಂಡಿದ್ದಾರೆ. ಯುವತಿ ಕಿರುಚಿಕೊಂಡ ಪರಿಣಾಮ ಸಾರ್ವಜನಿಕರು ಜಮಾಯಿಸಿ ಇಬ್ಬರು ಆರೋಪಿಗಳನ್ನು ಹಿಡಿದುಕೊಂಡಿದ್ದಾರೆ. ಚಿನ್ನ ಕೀಳುವಾಗ ಯುವತಿ ಪ್ರತಿರೋಧ ತೋರಿದ್ದರಿಂದ ಅರ್ಧ ಸರ ಉಳಿದುಕೊಂಡಿದೆ. ಉಳಿದ ಅರ್ಧ ಸರವನ್ನು ಕಸಿದುಕೊಂಡಿದ್ದ ಸರಗಳ್ಳ, ಸಾರ್ವಜನಿಕರ ಮುಂದೆ ಕಳ್ಳ ಎಂದು ಗೊತ್ತಾದರೆ ಜೀವ ಸಮೇತ ಕೊಂದು ಬಿಡುತ್ತಾರೆ ಎಂಬ ಭಯದಲ್ಲಿ ಬಾಯಿಗೆ ಹಾಕಿಕೊಂಡು ನುಂಗಿದ್ದಾನೆ. ತಾನು ಸರ ಕದ್ದಿಲ್ಲ ಎಂದು ವಾದ ಮಂಡಿಸಿದ್ದಾನೆ. ಸರ ಕದ್ದು ನುಂಗಿದ್ದನ್ನು ನೋಡಿದ್ದ ಯುವತಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಶಂಕಿತ ಇಬ್ಬರು ಸರಗಳ್ಳರಾದ ವಿಜಯ್ ಮತ್ತು ಸಂಜಯ್ ಎಂಬುವರನ್ನು ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್ ಗೆ ಒಳಪಡಿಸಿದಾಗ ಚಿನ್ನದ ಸರ ಹೊಟ್ಟೆಯಲ್ಲಿ ಇರುವುದು ಗೊತ್ತಾಗಿದೆ. ಸರ ನುಂಗಿದ್ದ ವಿಜಯ್ ಹೊಟ್ಟೆಯಲ್ಲಿರುವ ಕದ್ದ ಚಿನ್ನದ ಸರ ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕೆ.ಆರ್. ಮಾರ್ಕೆಟ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಚಿಕನ್ ಫ್ರೈ ಚೆನ್ನಾಗಿ ಮಾಡಲಿಲ್ಲ ಎಂದು ಪತ್ನಿಯ ಕೊಲೆ : ಯಾವುದೋ ದೊಡ್ಡ ಕಾರಣವಿದ್ದರೆ ಕೊಲೆ ನಡೆಯುವುದು ಸಹಜ. ಆದ್ರೆ, ಚಿಕನ್ ಫ್ರೈ ಸರಿಯಾಗಿ ಮಾಡಲಿಲ್ಲ ಎಂಬ ಕಾರಣಕ್ಕೆ ಕುಡಕ ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಕೆರೆಗೆ ಬಿಸಾಡಿರುವ ಘಟನೆ ಬೆಂಗಳೂರಿನ ಹೊರ ವಲಯದಲ್ಲಿ ನಡೆದಿದೆ. ಹದಿನೆಂಟು ದಿನಗಳ ಹಿಂದೆ ನಡೆದ ಕೃತ್ಯ ಈಗ ಬೆಳಕಿಗೆ ಬಂದಿದ್ದು, ಆರೋಪಿತ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕ ಬಾಣಾವಾರ ಸಮೀಪದ ತರಬನಹಳ್ಳಿ ನಿವಾಸಿ ಶಿರಿನ್ (28) ಕೊಲೆಯಾದವಳು. ದಾವಣಗೆರೆ ಮೂಲದ ಶಿರಿನ್ ನನ್ನು ಹೆಸರಘಟ್ಟ ಮುಖ್ಯ ರಸ್ತೆಯ ತರಬನಹಳ್ಳಿಯಲ್ಲಿ ವಾಸವಾಗಿದ್ದ ಮುಬಾರಕ್ ಗೆ ಕೊಟ್ಟು ಮದುವೆ ಮಾಡಿಸಲಾಗಿತ್ತು. ಹಾಸಿಗೆ ಹೊಲೆಯುವ ವ್ಯಾಪಾರ ಮಾಡುತ್ತಿದ್ದ ಮುಬಾರಕ್ ಯಾವಾಗಲೂ ಕುಡಿದು ಮನೆಗೆ ಬಂದು ಪತ್ನಿ ಜತೆ ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡುತ್ತಿದ್ದ. ಕಳೆದ ಹದಿನೆಂಟು ದಿನಗಳ ಹಿಂದೆ ಶಿರಿನ್ ಸಹೋದರಿ ಮನೆಗೆ ಬಂದಿದ್ದರು. ಈ ವೇಳೆ ಮುಬಾರಕ್ ಚಿಕನ್ ತಂದು ಫ್ರೈ ಮಾಡುವಂತೆ ಸೂಚಿಸಿದ್ದ. ಶಿರಿನ್ ಸಹೋದರಿ ಊರಿಗೆ ತೆರಳಿದ ಬಳಿಕ ಚಿಕನ್ ಫ್ರೈ ಚೆನ್ನಾಗಿ ಮಾಡಿಲ್ಲ ಎಂಬ ಕಾರಣಕ್ಕೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಗೆ ಒಳಗಾಗಿದ್ದ ಶಿರಿನಿನ್ ಸಾವನ್ನಪ್ಪಿದ್ದಾಳೆ. ಹಾಸಿಗೆಯಲ್ಲಿ ಮೃತದೇಹವನ್ನು ಸುತ್ತಿ ಚಿಕ್ಕ ಬಾಣಾವರದ ಕೆರೆಗೆ ಬಿಸಾಡಿದ್ದಾನೆ. ಶಿರಿನ್ ಮನೆಯಿಂದ ಪದೇ ಪದೇ ಕರೆ ಮಾಡಿ ಶಿರನ್ ಜತೆ ಮಾತನಾಡಲು ಕೇಳುತ್ತಿದ್ದರು. ಪ್ರತಿದಿನವೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಇನ್ನು ಶಿರನ್ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಅನುಮಾನಗೊಂಡಿದ್ದ ಪೋಷಕರು ದಾವಣಗೆರೆಯಿಂದ ತರಬನಹಳ್ಳಿಗೆ ಬಂದು ಪರಿಶೀಲನೆ ನಡೆಸಿದಾಗ ಶಿರಿನ್ ಕಾಣಿಸಿಲ್ಲ. ಅನುಮಾನಗೊಂಡು ಸೋಲದೇವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಾಥಮಿಕವಾಗಿ ಕಾಣೆಯಾಗಿರುವ ದೂರು ದಾಖಲಿಸಿಕೊಂಡು ಶಿರಿನ್ ಪತಿ ಮುಬಾರಕ್ ನನ್ನು ವಿಚಾರಣೆ ನಡೆಸಿದ ವೇಳೆ ಚಿಕನ್ ಫ್ರೈ ವಿಚಾರವಾಗಿ ಜಗಳ ನಡೆದು ಪತ್ನಿಯನ್ನು ಕೊಲೆ ಮಾಡಿ ಮೃತ ದೇಹ ಬಿಸಾಡಿರುವ ವಿಚಾರ ಬಾಯಿ ಬಿಟ್ಟಿದ್ದಾನೆ. ಮುಬಾರಕ್ ನೀಡಿದ ಮಾಹಿತಿ ಮೇರೆಗೆ ಚಿಕ್ಕಬಾಣಾವರ ಕೆರೆಯಲ್ಲಿ ಮೃತದೇಹವನ್ನು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕಾಣೆಯಾಗಿದ್ದ ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿ ಪರಿವರ್ತನೆ ಮಾಡಿರುವ ಪೊಲೀಸರು ಮೃತದೇಹ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. ಶಿರಿನ್ ನೀಡಿರುವ ದೂರಿನ ಮೇರೆಗೆ ಮುಬಾರಕ್, ಬಾದ್ ಷಬ್, ಸಾಬೀರಬಿ, ಸಲ್ಮಾಭಾನು, ಜಾಕಿರ್, ಸದ್ದಾಂ ಇತರರ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯ ಮೇಲ್ನೋಟಕ್ಕೆ ಚಿಕನ್ ಫ್ರೈ ವಿಚಾರವಾಗಿ ಜಗಳ ಎಂದು ಹೇಳುತ್ತಿದ್ದು, ಮುಂದಿನ ತನಿಖೆಯಲ್ಲಿ ಅಸಲಿ ಕಾರಣ ಗೊತ್ತಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಯ್ಲರ್ ಬ್ಲಾಸ್ಟ್ ನಿಂದ ಇಬ್ಬರು ಯುವಕರು ಸಾವು : ಮಾಗಡಿ ರಸ್ತೆಯಲ್ಲಿ ಸ್ಯಾಕ್ಸ್ ತಯಾರಿಸುವ ಆಹಾರ ಘಟಕದಲ್ಲಿ ಬಾಯ್ಲರ್ ಬ್ಲಾಸ್ಟ್ ಆಗಿರುವ ಪರಿಣಾಮ ಬಿಹಾರ ಮೂಲದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮುಂದಿನ ತಿಂಗಳು ಇಬ್ಬರು ಮದುವೆಯಾಗಲು ಮಾತುಕತೆ ಆಗಿತ್ತು. ವಿಪರ್ಯಾಸವೆಂದರೆ ಬೆಂಗಳೂರಿನಲ್ಲಿ ಯಾವುದೇ ಸುರಕ್ಷತೆ ಇಲ್ಲದ ಶೆಡ್ ನಲ್ಲಿ ಬಾಯ್ಲರ್ ಸ್ಫೋಟಕ್ಕೆ ಬಲಿಯಾಗಿದ್ದಾರೆ.

ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರದಲ್ಲಿ ಎಂಎಂ ಫುಡ್ ಫ್ರಾಡಕ್ಸ್ ಎಂಬ ಗೋಡನ್ ಇದೆ. ಶಾಲೆಗೆ ಹೊಂದಿಕೊಂಡಂತೆ ಇರುವ ಈ ಗೋಡನ್ ನಲ್ಲಿ ಚಿಪ್ಸ್ ಸೇರಿದಂತೆ ನಾನಾ ತಿನಿಸುಗಳನ್ನು ತಯಾರಿಸಿ ಅಂಗಡಿಗಳಿಗೆ ಮಾರುತ್ತಿದ್ದರು. ವಿಜಯ್ ಮೆಹ್ತಾ, ಸಚಿನ್ ಸೇರಿದಂತೆ ಮೂವರು ಸೇರಿ ಈ ಉದ್ಯಮ ನಡೆಸುತ್ತಿದ್ದರು. ಶಾಲೆ ಪಕ್ಕದಲ್ಲಿಯೇ ಸಿಲಿಂಡರ್ ಗಳನ್ನು ಇಟ್ಟು ತಿನಿಸುಗಳನ್ನು ತಯಾರಿಸುತ್ತಿದ್ದ ಬಗ್ಗೆ ಸ್ಥಳೀಯರು ಬಿಬಿಎಂಪಿಗೆ ದೂರು ನೀಡಿದ್ದರು. ಆದರೆ ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿರಲಿಲ್ಲ.

Recommended Video
ಸೋಮವಾರ ಮಧ್ಯಾಹ್ನ 1.30 ರ ಸುಮಾರಿಗೆ ಇದ್ದಕ್ಕಿದ್ದಂತೆ ಬಾಯ್ಲರ್ ಸ್ಫೋಟಗೊಂಡಿದೆ. ಇಲ್ಲಿ ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರು ಆಗಸ್ಟೇ ಗೋಡನ್ ನಿಂದ ಹೊರಗೆ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೌರವ್ ಮತ್ತು ಮನೀಷ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಎಂಎಂ ಪ್ರಾಡಕ್ಟ್ ಪಾಲುದಾರ ಸಚಿನ್ ಗೆ ಸುಟ್ಟು ಗಾಯಗಳಾಗಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಾಗಡಿ ರಸ್ತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ವಸತಿ ಪ್ರದೇಶದಲ್ಲಿ ಯಾವುದೇ ಪರವಾನಗಿ ಇಲ್ಲದೇ ಗೋಡನ್ ನಡೆಸುತ್ತಿದ್ದ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅವರು ಪರಿಶೀಲನೆ ನಡೆಸಿದ್ದಾರೆ. ಮಾಗಡಿ ರಸ್ತೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications