ಶಬ್ದ ಮಾಲಿನ್ಯ: ಮಸೀದಿ ಚರ್ಚ್ಗಳಲ್ಲಿ ಧ್ವನಿ ವರ್ಧಕ ತೆರವು
ಬೆಂಗಳೂರು, ಡಿ. 22: ದಿನ ನಿತ್ಯ ಧ್ವನಿ ವರ್ಧಕ ಬಳಿಸಿ ಶಬ್ದ ಮಾಲಿನ್ಯ ಉಂಟು ಮಾಡುವ ಧ್ವನಿ ವರ್ಧಕಗಳ ತೆರವು. ಖಾಸಗಿ ಹೋಟೆಲ್ ಪಾರ್ಕಿಂಗ್ನಲ್ಲಿ ಜೀವಂತ ಗುಂಡುಗಳು ಪತ್ತೆ. ಇದು ಬೆಂಗಳೂರು ಅಪರಾಧ ಸುದ್ದಿಯ ಚಿತ್ರಣ.
ಬೆಂಗಳೂರಿನಲ್ಲಿ ಧ್ವನಿ ವರ್ಧಕಗಳು ತೆರವು:
ಶಬ್ದ ಮಾಲಿನ್ಯ ಉಂಟು ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಮಾಡುವ ಧ್ವನಿ ವರ್ಧಕಗಳನ್ನು ತೆರವು ಗೊಳಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಇದರ ಭಾಗವಾಗಿ ಸಿದ್ಧಾಪುರದ ಮಸೀದಿಯಲ್ಲಿ ಅಳವಡಿಸಿದ್ದ ಧ್ವನಿ ವರ್ಧಕಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ.
ಮಸೀದಿ, ಚರ್ಚ್, ದೇವಾಲಯಗಳಲ್ಲಿ ದಿನ ನಿತ್ಯ ಧ್ವನಿವರ್ಧಕ ಬಳಕೆ ಮಾಡಿ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ಬಗ್ಗೆ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ವಿಶೇಷ ದಿನ ಹೊರತು ಪಡಿಸಿ ದಿನ ನಿತ್ಯ ಬಳಕೆ ಮಾಡುವ ಧ್ವನಿ ವರ್ಧಕಗಳನ್ನು ತೆರವುಗೊಳಿಸುವಂತೆ ಮಧ್ಯಂತರ ತೀರ್ಪು ನೀಡಿದ್ದು, ಅರ್ಜಿಯ ವಿಚಾರಣೆ ಇನ್ನೂ ಬಾಕಿ ಇದೆ.
ಹೈಕೋರ್ಟ್ ಆದೇಶದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನ ಮಸೀದಿ, ಚರ್ಚ್, ದೇವಾಲಯಗಳಲ್ಲಿ ಧ್ವನಿ ವರ್ಧಕಗಳನ್ನು ತೆರವುಗೊಳಿಸಲಾಗುತ್ತಿದೆ. ಇದರ ಭಾಗವಾಗಿ ಸಿದ್ಧಾಪುರ ವಾರ್ಡ್ 144 ರಲ್ಲಿನ ಮಸೀದಿಗಳಲ್ಲಿ ಅಳವಡಿಸಿದ್ದ ಧ್ವನಿ ವರ್ಧಕಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಧ್ವನಿ ವರ್ಧಕಗಳನ್ನು ತೆರವುಗೊಳಿಸಲಾಗಿದೆ. ನ್ಯಾಯಾಲಯದ ಅಂತಿಮ ಆದೇಶದ ಬಳಿಕ ಅದನ್ನು ಪಾಲನೆ ಮಾಡಬೇಕಾಗುತ್ತದೆ. ಮಧ್ಯಂತರ ತೀರ್ಪಿನ ಪ್ರಕಾರ ವಿಶೇಷ ದಿನಗಳಲ್ಲಿ ಹೊರತು ಪಡಿಸಿ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ. ಹೀಗಾಗಿ ನಿಯಮ ಉಲ್ಲಂಘಿಸಿ ಧ್ವನಿ ವರ್ಧಕ ಬಳಕೆ ಮಾಡುತ್ತಿರುವರಿಗೆ ನೋಟಿಸ್ ನೀಡಲಾಗಿದೆ. ಇದರ ಹೊರತಾಗಿಯೂ ತೆಗೆಯದೇ ಇದ್ದ ಧ್ವನಿ ವರ್ಧಕಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ.
ಶಬ್ದಮಾಲಿನ್ಯ:
ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ಬೆಳಗಾದರೆ ಎಲ್ಲೆಲ್ಲೂ ಧ್ವನಿ ವರ್ಧಕಗಳ ಸದ್ದು. ಮಸೀದಿ, ಚರ್ಚ್, ದೇವಾಲಯಗಳಲ್ಲಿ ಧ್ವನಿ ವರ್ಧಕ ಬಳಕೆ ಮಾಡುವ ಕಾರಣ ಶಬ್ಧ ಮಾಲಿನ್ಯವಾಗುತ್ತಿದೆ ಎಂಬುದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವರ ವಾದ. ಈ ವಾದವನ್ನು ಅಲಿಸಿರುವ ಹೈಕೋರ್ಟ್ ಅನಾವಶ್ಯಕವಾಗಿ ದಿನ ನಿತ್ಯ ಧ್ವನಿ ವರ್ಧಕ ಬಳಕೆ ಮಾಡದಂತೆ ಸೂಚಿಸಿ ಮಧ್ಯಂತರ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಧ್ವನಿ ವರ್ಧಕ ತೆರವುಗೊಳಿಸಲಾಗುತ್ತಿದೆ.
ಜೀವಂತ ಮದ್ದುಗುಂಡು ಪತ್ತೆ:
ಬೆಂಗಳೂರಿನ ಖಾಸಗಿ ಹೋಟೆಲ್ ಕಾರ್ ಪಾರ್ಕಿಂಗ್ ನಲ್ಲಿ ಎರಡು ಜೀವಂತ ಮದ್ದುಗುಂಡು ಪತ್ತೆಯಾಗಿವೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ. 17 ರಂದು ಘಟನೆ ಬೆಳಕಿಗೆ ಬಂದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹೋಟೆಲ್ ಸಿಬ್ಬಂದಿ ಕಸ ಗುಡಿಸುವ ವೇಳೆ ಜೀವಂತ ಮದ್ದುಗುಂಡು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ತಪಾಸಣೆ ನಡೆಸಿದ್ದರು. ಆ ಬಳಿಕ ಪೊಲೀಸರು ತನಿಖೆ ನಡೆಸಿದಾಗ ಸ್ಫೋಟಕ ಸಂಗತಿಗಳು ಹೊರ ಬಿದ್ದಿವೆ. ಏರ್ ಪೋರ್ಸ್ ನಿವೃತ್ತ ಕ್ಯಾಪ್ಟನ್ ಅವರ ಪತ್ನಿ ಎರಡು ಜೀವಂತ ಮದ್ದುಗುಂಡು ಹೂತಿಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪತಿಗೆ ತಿಳಿಯದಂತೆ ಜೀವಂತ ಗುಂಡು ಹೋಟೆಲ್ನಲ್ಲಿ ಇಟ್ಟು ಹೋಗಿರುವ ಸಂಗತಿ ಬೆಳಕಿಗೆ ಬಂದಿದೆ.
Recommended Video
ಮನೆಯಲ್ಲಿ ಜೀವಂತ ಮದ್ದುಗುಂಡು ಇದ್ದಿದ್ದರಿಂದ ಮಗನಿಗೆ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಹೋಟೆಲ್ ಪಾರ್ಕಿಂಗ್ ನಲ್ಲಿ ಹೂತಿಟ್ಟಿದ್ದಾಗಿ ಏರ್ ಪೋರ್ಸ್ ನಿವೃತ್ತ ಕ್ಯಾಪ್ಟನ್ ಪತ್ನಿ ಹೇಳಿಕೆ ನೀಡಿದ್ದಾರೆ. ನಿವೃತ್ತ ಏರ್ ಪೋರ್ಸ್ ಅಧಿಕಾರಿ ತನ್ನ ಬಳಿ ಇದ್ದ ಸಿಂಗಲ್ ಬ್ಯಾರಲ್ ಗನ್ ಮಾರಾಟ ಮಾಡಿದ್ರು. ಗುಂಡುಗಳು ಮನೆಯಲ್ಲಿಯೇ ಇದ್ದವು. ಇದರಿಂದ ಮಗನಿಗೆ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಪಾರ್ಕಿಂಗ್ ಲಾಟ್ ನಲ್ಲಿ ಹೂತಿಟ್ಟಿದ್ದಾಗಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.