ಕೇರಳದ ದುರಂತ : ಬೆಂಗಳೂರು ಕರಗದಲ್ಲಿ ಪಟಾಕಿ ನಿಷೇಧ
ಬೆಂಗಳೂರು, ಏಪ್ರಿಲ್ 12 : ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್ನ ದೇವಾಲಯದಲ್ಲಿ ನಡೆದ ಅಗ್ನಿ ದುರಂತದ ಹಿನ್ನಲೆಯಲ್ಲಿ ಬೆಂಗಳೂರಿನ ಕರಗದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ. ಏ.12ರಿಂದ 24ರ ವರೆಗೆ ಕರಗ ಮಹೋತ್ಸವ ನಡೆಯಲಿದೆ.
ಧರ್ಮರಾಯಸ್ವಾಮಿ ದೇವಾಲಯ ಕರಗ ಮಹೋತ್ಸವ ಸಮಿತಿಯ ಗೌರವ ಅಧ್ಯಕ್ಷ ಪಿ.ಆರ್.ರಮೇಶ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಏ.22ರಂದು ನಡೆಯುವ ಕರಗದಂದು ಪಟಾಕಿ ಹೊಡೆಯುವ ಬದಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ' ಎಂದು ಹೇಳಿದ್ದಾರೆ. [ಪಟಾಕಿ ಹೊಡೆಯಬೇಡಿ ಎಂಬ ಅಜ್ಜಿ ಮಾತು ಕೇಳಲಿಲ್ಲ]

'ಹಿಂದಿನಿಂದಲೂ ಬೆಂಗಳೂರು ಕರಗದಲ್ಲಿ ಪಟಾಕಿಗಳನ್ನು ಹೊಡೆಯಲಾಗುತ್ತಿದೆ. ಕೇರಳದ ದುರ್ಘಟನೆ ಮತ್ತು ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ಬಾರಿ ಪಟಾಕಿ ಹೊಡೆಯುವುದಿಲ್ಲ. ಭಕ್ತರು ಮತ್ತು ಸಂಘಟನೆಗಳು ಪಟಾಕಿ ಹೊಡೆಯದಂತೆ ನೋಡಿಕೊಳ್ಳಲಾಗುತ್ತದೆ' ಎಂದು ರಮೇಶ್ ತಿಳಿಸಿದ್ದಾರೆ. [ಕೇರಳ ಪಟಾಕಿ ದುರಂತ, 5 ಜನರ ಬಂಧನ]
ಭಾನುವಾರ ಮುಂಜಾನೆ ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್ನ ಮೂಕಾಂಬಿಕ ದೇವಸ್ಥಾನದ ಜಾತ್ರೆಯಲ್ಲಿ ಪಟಾಕಿ ಸಿಡಿದು ನಡೆದ ಅಗ್ನಿ ದುರಂತದಲ್ಲಿ 106 ಜನರು ಮೃತಪಟ್ಟಿದ್ದು, 300ಕ್ಕೂ ಅಧಿಕ ಭಕ್ತರು ಗಾಯಗೊಂಡಿದ್ದರು. ಆದ್ದರಿಂದ, ಕರಗದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ. [ಸುದ್ದಿ ದನಿ : ಪಟಾಕಿ ಹೊಡೆಯಬೇಡಿ ಎಂದ ಅಜ್ಜಿ]
ಕರಗಕ್ಕೆ ಸಕಲ ಸಿದ್ಧತೆ : ಬೆಂಗಳೂರು ನಗರದ ಪಾರಂಪರಿಕ ಆಚರಣೆಯಾದ ಕರಗಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಏ.14ರಿಂದ 24ರ ತನಕ ಹನ್ನೊಂದು ದಿನಗಳ ಕಾಲ ಕರಗ ಮಹೋತ್ಸವ ನಡೆಯಲಿದೆ. ಈ ಬಾರಿ ಅರ್ಚಕ ಲಕ್ಷ್ಮೀಶ ಕರಗ ಹೊರಲಿದ್ದಾರೆ.
ಚೈತ್ರ ಶುಕ್ರ ಸಪ್ತಮಿಯಿಂದ ಬಹುಳ ಬಿದಿಗೆಯವರೆಗೆ ಕರಗ ಮಹೋತ್ಸವ ನಡೆಯಲಿದೆ. ಕರಗ ಉತ್ಸವದ ಕೇಂದ್ರಬಿಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ರಥೋತ್ಸವ ಏ.22ರಂದು ನಡೆಯಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಬಾರಿಯ ಕರಗ ಮಹೋತ್ಸವಕ್ಕಾಗಿ ಒಂದು ಕೋಟಿ ರೂ.ಅನುದಾನ ಮೀಸಲಾಗಿಟ್ಟಿದೆ.












Click it and Unblock the Notifications