ಬೆಂಗಳೂರಲ್ಲಿ ರಾತ್ರಿ 10ರ ನಂತರ ಪಟಾಕಿ ಹೊಡೆಯುವಂತಿಲ್ಲ
ಬೆಂಗಳೂರು, ನವೆಂಬರ್ 09 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆ ಬಳಿಕ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ ಎಂದು ಮೇಯರ್ ಮಂಜುನಾಥ ರೆಡ್ಡಿ ಹೇಳಿದ್ದಾರೆ. ಪರಿಸರ ಸ್ನೇಹಿ ದೀಪಾವಳಿ ಆಚರಣೆ ಮಾಡಲು ಜನರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮೇಯರ್, 'ಬಿಬಿಎಂಪಿ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಪಟಾಕಿ ಸಿಡಿಸುವಂತಿಲ್ಲ. ಆಸ್ಪತ್ರೆ ಸುತ್ತಮುತ್ತಲೂ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ' ಎಂದು ಹೇಳಿದ್ದಾರೆ. [ಬೆಂಗಳೂರು : ಸುರಕ್ಷಿತ ದೀಪಾವಳಿಗೆ 'ಮೇಘ'ರಿಕ್ ಸಂದೇಶ]

'ಪಟಾಕಿ ತ್ಯಾಜ್ಯದಿಂದಾಗಿ ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯ ಹಾಳಾಗಲಿದೆ. ಸಾರ್ವಜನಿಕರು ಆದಷ್ಟು ಕಡಿಮೆ ಪಟಾಕಿಗಳನ್ನು ಸಿಡಿಸಬೇಕು. ಈ ಮೂಲಕ ಪರಿಸರ ರಕ್ಷಣೆಗೆ ತಮಗಿರುವ ಜವಾಬ್ದಾರಿ ನಿರ್ವಹಿಸಬೇಕು' ಎಂದು ಮೇಯರ್ ಕರೆ ನೀಡಿದ್ದಾರೆ.
'ಪಟಾಕಿಗಳನ್ನು ಸಿಡಿಸಿದಾಗ ರಾಸಾಯನಿಕಗಳ ಸ್ಫೋಟದಿಂದಾಗಿ ಮಕ್ಕಳ ಆರೋಗ್ಯದ ಮೇಲೆ ಹಾನಿ ಉಂಟಾಗಲಿದೆ. ಅಲ್ಲದೇ ಪ್ರಾಣಿ-ಪಕ್ಷಿಗಳಿಗೂ ಹಾನಿ ಉಂಟಾಗುತ್ತದೆ. ಆದ್ದರಿಂದ ಕಡಿಮೆ ಪಟಾಕಿ ಸಿಡಿಸಬೇಕು' ಎಂದು ಮೇಯರ್ ಮನವಿ ಮಾಡಿದ್ದಾರೆ.
ಆಸ್ಪತ್ರೆಗಳಲ್ಲಿ ಅಗತ್ಯ ವ್ಯವಸ್ಥೆ : ಜನರು ಪಟಾಕಿ ಸಿಡಿಸುವಾಗ ಆಕಸ್ಮಿಕ ಅವಘಡ ನಡೆದರೆ ತುರ್ತು ಚಿಕಿತ್ಸೆ ನೀಡಲು ಬಿಬಿಎಂಪಿಯ ಎಲ್ಲಾ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಸಿಬ್ಬಂದಿಗಳನ್ನು ಇದಕ್ಕಾಗಿ ನೇಮಿಸಲಾಗಿದೆ ಎಂದು ಮೇಯರ್ ಹೇಳಿದ್ದಾರೆ.
ಕಸ ವಿಲೇವಾರಿಗೆ ಸಿದ್ಧತೆ : ಪಟಾಕಿ ಸಿಡಿಸುವುದರಿಂದ ನಗರದಲ್ಲಿ ಹೆಚ್ಚುವರಿ ಕಸ ಉತ್ಪಾದನೆಯಾಗುತ್ತದೆ. ಕಸ ವಿಲೇವಾರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಮನೆ ಮುಂದೆ ಮತ್ತು ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಸಂಗ್ರಹಣೆ ಮಾಡಿ ಪಾಲಿಕೆ ಆಟೋ ಹಾಗೂ ಗಾಡಿಗಳಿಗೆ ನೀಡಬೇಕು ಎಂದು ಮೇಯರ್ ಮನವಿ ಮಾಡಿದ್ದಾರೆ.












Click it and Unblock the Notifications