ಹೊರ ರಾಜ್ಯದಿಂದ ಬೆಂಗಳೂರಿಗೆ ಬರುವವರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ? ಸ್ಪಷ್ಟನೆ
ಬೆಂಗಳೂರು, ಏಪ್ರಿಲ್ 7: ಕೊರೊನಾ ಎರಡನೇ ಅಲೆ ತೀವ್ರವಾಗಿ ಹರಡುತ್ತಿದ್ದು, ಸರಕಾರದ ಎಲ್ಲಾ ಮುಂಜಾಗ್ರತಾ ಕ್ರಮಗಳು ಸದ್ಯದ ಮಟ್ಟಿಗೆ ವರ್ಕೌಟ್ ಆಗುತ್ತಿಲ್ಲ. ಮಂಗಳವಾರ ಒಂದೇ ದಿನ ಬೆಂಗಳೂರು ಒಂದರಲ್ಲೇ ನಾಲ್ಕು ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ.
ಬೇರೆ ರಾಜ್ಯದಿಂದ ರಾಜಧಾನಿಗೆ ಬರುವವರು ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರುವುದು ಕಡ್ಡಾಯವೇ ಎನ್ನುವ ಗೊಂದಲಕ್ಕೆ ಬಿಬಿಎಂಪಿ ಆಯುಕ್ತರು ಸ್ಪಷ್ಟನೆಯನ್ನು ನೀಡಿದ್ದಾರೆ.
ಕೊರೊನಾ ಹೆಚ್ಚಳ; ಬೆಂಗಳೂರಿನಲ್ಲಿ ಏ.20ರವರೆಗೂ ನಿಷೇಧಾಜ್ಞೆ ಹೇರಿ ಕಮಲ್ ಪಂತ್ ಆದೇಶ
ಸುನಾಮಿ ವೇಗದಲ್ಲಿ ಎರಡನೇ ಅಲೆ ಹರಿದಾಡುತ್ತಿರುವುದರಿಂದ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜೊತೆಗೆ, ಕಠಿಣ ಮಾರ್ಗಸೂಚಿ ಜಾರಿಗೊಳಿಸುವ ಸುಳಿವನ್ನೂ ಆರೋಗ್ಯ ಸಚಿವ ಡಾ.ಸುಧಾಕರ್ ನೀಡಿದ್ದಾರೆ.
ದೇಶದಲ್ಲಿ ಕೊರೊನಾ ಏರಿಕೆಗೆ ಕಾರಣ ನಮೂದಿಸಿದ ಆರೋಗ್ಯ ಸಚಿವ
ಅತ್ತಿಬೆಲೆ ಚೆಕ್ ಪೋಸ್ಟ್ ಮೂಲಕ ರಾಜ್ಯಕ್ಕೆ ಬರುವವರು ನೆಗೆಟಿವ್ ಪ್ರಮಾಣ ಪತ್ರವನ್ನು ಹೊಂದಿರಬೇಕು ಎಂದು ಬೆಂಗಳೂರು ಜಿಲ್ಲಾಧಿಕಾರಿ ಸೂಚಿಸಿದ್ದರು. ಹೀಗಾಗಿ, ಇದು ಗೊಂದಲಕ್ಕೆ ಕಾರಣವಾಗಿತ್ತು. ಈಗ ಆಯುಕ್ತರು ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.
ಅತ್ತಿಬೆಲೆ ಚೆಕ್ ಪೋಸ್ಟ್ ಬೆಂಗಳೂರಿಗೆ ಬರುವವರು
"ಹೊರ ರಾಜ್ಯದಿಂದ ಬರುವವರಿಂದಲೇ ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿದೆ. ಕೇರಳದಿಂದ ಬರುವವರು ತಮಿಳುನಾಡಿಗೆ ಬಂದು, ಅತ್ತಿಬೆಲೆ ಚೆಕ್ ಪೋಸ್ಟ್ ಮೂಲಕ ಬೆಂಗಳೂರಿಗೆ ಬರುತ್ತಿದ್ದಾರೆ. ಹಾಗಾಗಿ, ಈ ಚೆಕ್ ಪೋಸ್ಟ್ ಮೂಲಕ ಬರುವವರು 72 ಗಂಟೆಗಳ ಒಳಗೆ ಪಡೆದ ನೆಗೆಟಿವ್ ಪ್ರಮಾಣ ಕಡ್ಡಾಯ ಹೊಂದಿರಬೇಕು. ಇಲ್ಲದಿದ್ದರೆ ವಾಪಸ್ ಕಳುಹಿಸಲಾಗುವುದು"ಎಂದು ಬೆಂಗಳೂರು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದ್ದರು.
ಮೂರು ರಾಜ್ಯಗಳಿಂದ ನಗರಕ್ಕೆ ಬರುವವರ ಮೇಲೆ ನಿಗಾ, ಬಿಬಿಎಂಪಿ ಆಯುಕ್ತರು
ಈ ಬಗ್ಗೆ ಸ್ಪಷ್ಟನೆಯನ್ನು ನೀಡಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ, "ಸದ್ಯ ಮೂರು ರಾಜ್ಯಗಳಿಂದ ನಗರಕ್ಕೆ ಬರುವವರ ಮೇಲೆ ನಿಗಾ ವಹಿಸಲಾಗಿದೆ. ಇತರ ರಾಜ್ಯಗಳಿಂದ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಲ್ಲ. ಈ ವಿಚಾರದಲ್ಲಿ ಗೊಂದಲ ಬೇಡ"ಎಂದು ಆಯುಕ್ತರು ಹೇಳಿದ್ದಾರೆ.
ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಮತ್ತು ಚೆಕ್ ಪೋಸ್ಟ್ ನಲ್ಲಿ ತಪಾಸಣೆ
"ಮಹಾರಾಷ್ಟ್ರ, ಕೇರಳ ಮತ್ತು ಪಂಜಾಬ್ ಮೂಲಕ ಬೆಂಗಳೂರು ಪ್ರವೇಶ ಮಾಡುವವರು ನೆಗೆಟಿವ್ ವರದಿಯನ್ನು ಹೊಂದಿರಬೇಕು. ಹಾಗಾಗಿ, ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಮತ್ತು ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಲಾಗುವುದು"ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ.
Recommended Video
ತಮಿಳುನಾಡಿನಿಂದ ಬರುವವರಿಗೆ ನೆಗೆಟಿವ್ ವರದಿ ಕಡ್ಡಾಯವಿಲ್ಲ
ತಮಿಳುನಾಡಿನಿಂದ ಬರುವವರಿಗೆ ನೆಗೆಟಿವ್ ವರದಿ ಕಡ್ಡಾಯ ಎನ್ನುವ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಕೊರೊನಾ ತೀವ್ರವಾಗಿ ಹೆಚ್ಚುತ್ತಿರುವುದರಿಂದ ಸಭೆ, ಸಮಾರಂಭ, ಪಾರ್ಟಿಗಳ ಮೇಲೆ ನಿಗಾ ವಹಿಸಲಾಗುವುದು. ಸಾರ್ವಜನಿಕರ ಸಹಕಾರ ಅತ್ಯಗತ್ಯ"ಎಂದು ಗೌರವ್ ಗುಪ್ತ ಮನವಿ ಮಾಡಿದ್ದಾರೆ.