3ನೇ ಅಲೆ ಭೀತಿ: ಅಪಾರ್ಟ್ಮೆಂಟ್ ನಿವಾಸಿಗಳಿಗೆ ಬಿಬಿಎಂಪಿ ಹೊಸ ಮಾರ್ಗಸೂಚಿ
ಬೆಂಗಳೂರು, ಆಗಸ್ಟ್ 13: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುತ್ತಾ ಬಂದಿದೆ. ಅದೇ ರೀತಿ ಪಾಲಿಕೆ ವ್ಯಾಪ್ತಿಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWA) ಹಾಗೂ ಅಪಾರ್ಟ್ಮೆಂಟ್, ಕಾಂಪ್ಲೆಕ್ಸ್ ಗಳಲ್ಲಿ ನಿರ್ವಹಣಾ ಸಮಿತಿಗಳಿಗೆ ಕೊವಿಡ್-19 ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರ ಅಡಿ ಕೊರೊನಾವೈರಸ್ ಅನ್ನು ಸಾಂಕ್ರಾಮಿಕ ರೋಗವೆಂದು ಸೂಚಿಸಲಾಗಿದೆ. ಈ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೆಕ್ಷನ್ 4ರ ಅಡಿ ರೋಗದ ಹರಡುವಿಕೆ ನಿಯಂತ್ರಿಸಲು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಅಧಿಕಾರವನ್ನು ಪಾಲಿಕೆಗೆ ವಹಿಸಲಾಗಿದೆ.
ಬೆಂಗಳೂರಿನ ನಿಗದಿತ ಪ್ರದೇಶವೊಂದರಲ್ಲಿ ಏಕಕಾಲಕ್ಕೆ 2 ಅಥವಾ 2ಕ್ಕಿಂತ ಹೆಚ್ಚು ಕೊವಿಡ್-19 ಪ್ರಕರಣಗಳು ವರದಿಯಾದಲ್ಲಿ ಅದನ್ನು ಕ್ಲಸ್ಟರ್ ಎಂದು ಗುರುತಿಸಿಕೊಳ್ಳಲಾಗುತ್ತಿದೆ. ಅದರ ಸುತ್ತಮುತ್ತಲಿನ ಪ್ರದೇಶವನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಲಾಗುತ್ತದೆ. ಈ ರೀತಿಯಾಗಿ ಕಂಟೇನ್ಮೆಂಟ್ ವಲಯಗಳ ಸಂಖ್ಯೆ 160ಕ್ಕಿಂತ ಹೆಚ್ಚಾಗಿದೆ. ಶೇ.50ರಷ್ಟು ಅಂದರೆ 79 ಅಪಾರ್ಟ್ ಮೆಂಟ್ ಹಾಗೂ ಕಾಂಪ್ಲೆಕ್ಸ್ ಗಳು ಅದೇ ಕಂಟೇನ್ಮೆಂಟ್ ವಲಯಗಳಲ್ಲಿರುವುದು ಗೊತ್ತಾಗಿದೆ. ಹೀಗಾಗಿ ಕಟ್ಟುನಿಟ್ಟಿನ ನಿಮಯಗಳನ್ನು ಪಾಲನೆ ಮಾಡುವಂತೆ ಮಾರ್ಗಸೂಚಿಯಲ್ಲಿ ತಿಳಿಸಿಲಾಗಿದೆ.

ಅಪಾರ್ಟ್ ಮೆಂಟ್, ಕಾಂಪ್ಲೆಕ್ಸ್ ಗಳಿಗೆ ಮಾರ್ಗಸೂಚಿ
* ಅಪಾರ್ಟ್ಮೆಂಟ್ ಅಥವಾ ಕಾಂಪ್ಲೆಕ್ಸ್ಗಳಿಗೆ ಭೇಟಿ ನೀಡುವ ಜನರ ಉಷ್ಣಾಂಶ ಪರಿಶೀಲಿಸುವುದು. ಸ್ಯಾನಿಟೈಸೇಶನ್ ಬಳಕೆ ಮತ್ತು ಮಾಸ್ಕ್ ಧರಿಸುವಿಕೆ ಕಡ್ಡಾಯ. ಅಪಾರ್ಟ್ಮೆಂಟ್ನ ವ್ಯಾಪಾರಿಗಳ ಹೊರತಾಗಿ ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಗ್ರಾಹಕರು ಮತ್ತು ಸಾರ್ವಜನಿಕರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿಕೊಳ್ಳುವುದು.
* ಹೊರ ರಾಜ್ಯಗಳಿಂದ ಆಗಮಿಸಿದವರು 72 ಗಂಟೆಗಳೊಳಗೆ ನಡೆಸಿದ ಆರ್ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು. ಇಲ್ಲದಿದ್ದರೆ ಭೇಟಿ ಸಂದರ್ಭದಲ್ಲೇ ಆರ್ಟಿಪಿಸಿಆರ್ ಪರೀಕ್ಷೆ ನಡೆಸಬೇಕು ಹಾಗೂ ಅದರ ವರದಿ ಬರುವವರೆಗೆ ಗೃಹ ದಿಗ್ಬಂಧನಕ್ಕೆ ಒಳಗಾಗಬೇಕು.
* ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾವೈರಸ್ ಮಾರ್ಗಸೂಚಿಗಳ ಪಾಲನೆ ಕಡ್ಡಾಯ. ಸ್ವಿಮ್ಮಿಂಗ್ ಪೂಲ್ ಅನ್ನು ಮುಚ್ಚಲಾಗಿದ್ದು, ಜಿಮ್ಗಳು ಶೇಕಡಾ 50ರಷ್ಟು ಜನರೊಂದಿಗೆ ತೆರೆಯುವುದಕ್ಕೆ ಅನುಮತಿ ನೀಡಲಾಗಿದೆ.
* ಮಕ್ಕಳ ಕುರಿತು ಹೆಚ್ಚಿನ ಕಾಳಜಿ ಅನಿವಾರ್ಯವಾಗಿದೆ. 3 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಿರುವಂತೆ ಪೋಷಕರು ನೋಡಿಕೊಳ್ಳಬೇಕು.
* ಜನರನ್ನು ಸೇರಿಸುವಂತಹ ಸಾರ್ವಜನಿಕ ಅಥವಾ ಸಾಮೂಹಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಇರುವುದಿಲ್ಲ. ಮಕ್ಕಳ ಗುಂಪು ಚಟುವಟಿಕೆಗಳು, ತರಗತಿಗಳು ಕೂಡ ನಡೆಸುವುದು ಸೂಕ್ತವಲ್ಲ.
* ಹೋಮ್ ಡೆಲಿವರಿ, ಕೊರಿಯರ್ ಇನ್ನಿತರ ಸೇವೆಗಳಿಗೆ, ಸೇವೆ ನೀಡುವವರು ಅಪಾರ್ಟ್ಮೆಂಟ್ನ ಹೊರಗಿನ ಗೇಟ್ ಅಥವಾ ಮುಖ್ಯ ಗೇಟ್ ವರೆಗೆ ಮಾತ್ರ ಬರುವಂತೆ ನೋಡಿಕೊಳ್ಳುವುದು.
* ಔಷಧ, ಪ್ಲಂಬಿಂಗ್, ವಿದ್ಯುತ್, ಗ್ಯಾಸ್ ಇಂತಹ ಅವಶ್ಯಕ ಸೇವೆಗಳನ್ನು ಕೊರೊನಾವೈರಸ್ ಮಾರ್ಗಸೂಚಿ ಅನುಸರಿಸುವುದರ ಮೂಲಕ ಅವಕಾಶ ಇದೆ.
* ಶುಚಿತ್ವ, ಸ್ಯಾನಿಟೈಸೇಶನ್, ಕಸ ನಿರ್ವಹಣೆಯನ್ನು ಜವಾಬ್ದಾರಿಯುತವಾಗಿ ಮತ್ತು ವ್ಯವಸ್ಥಿತವಾಗಿ ನಡೆಸುವುದು. ಕಂಟೇನ್ಮೆಂಟ್ ವಲಯಗಳಿಂದ ಕಸ ಇತ್ಯಾದಿ ನಿರ್ವಹಣೆಗೆ ವೃತ್ತಿಪರ ಕೆಲಸಗಾರರನ್ನು ಬಳಸುವುದು, ಮತ್ತು ಅವರು ಕೊರೊನಾವೈರಸ್ ಮಾರ್ಗಸೂಚಿಗಳನ್ನು ಪಾಲಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕೆಲಸ ಮಾಡುವುದು.
* ಕೊವಿಡ್-19 ಪಾಸಿಟಿವ್ ಪ್ರಕರಣ ಪತ್ತೆಯಾದಲ್ಲಿ ಅಪಾರ್ಟ್ಮೆಂಟ್ನ ಎಲ್ಲರೂ ಸಹಕರಿಸುವುದು. ಮನೆಯಲ್ಲಿ ಹೋಮ್ ಐಸೋಲೇಶನ್ಗೆ ಅವಕಾಶ ಇಲ್ಲದಿದ್ದಲ್ಲಿ, ಕೊವಿಡ್-19 ಕೇರ್ ಸೆಂಟರ್ಗೆ ಅಥವಾ ಆಸ್ಪತ್ರೆಗೆ ಬೇಕಾದಲ್ಲಿ ಆಸ್ಪತ್ರೆಗೆ ದಾಖಲಿಸುವುದು. ಅಪಾರ್ಟ್ಮೆಂಟ್ನಲ್ಲಿ ಕೂಡ ಕೊರೊನಾ ಕೇರ್ ಸೆಂಟರ್ ಅಂದರೆ, ಐಸೋಲೇಶನ್ಗೆ ಬಿಬಿಎಂಪಿ ಅನುಮತಿಯೊಂದಿಗೆ ಅವಕಾಶ ಕಲ್ಪಿಸಬಹುದು.

ರಾಜ್ಯ ರಾಜಧಾನಿಯಲ್ಲಿ 425 ಜನರಿಗೆ ಕೊವಿಡ್-19
ಬೆಂಗಳೂರಿನಲ್ಲಿ ಕಳೆದ ಒಂದು ದಿನದಲ್ಲಿ 425 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1232220ಕ್ಕೆ ಏರಿಕೆಯಾಗಿದೆ. 5 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 15933ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ಜಿಲ್ಲೆಯಲ್ಲಿ 8189 ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣ
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ನಿನ್ನೆಗಿಂತ ಇಂದು ಇಳಿಮುಖವಾಗಿದೆ. ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.0.98ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 1.31ರಷ್ಟಿದೆ. ರಾಜ್ಯದಲ್ಲಿ ಒಂದು ದಿನದಲ್ಲಿ 1669 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1672 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 22 ಮಂದಿ ಕೊರೊನಾವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 36933 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಶುಕ್ರವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2926401ಕ್ಕೆ ಏರಿಕೆಯಾಗಿದೆ. ಒಟ್ಟು 2866739 ಸೋಂಕಿತರು ಗುಣಮುಖರಾಗಿದ್ದು. 22703 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Recommended Video

ಕೊರೊನಾವೈರಸ್ ಸೋಂಕು ಪರೀಕ್ಷೆ ಪ್ರಮಾಣ ಎಷ್ಟಿದೆ?
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ತಪಾಸಣೆ ವೇಗವನ್ನು ಕೂಡ ತಗ್ಗಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 33,528 ಮಂದಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಹಾಗೂ 1,35,804 ಮಂದಿಗೆ RT-PCR ಟೆಸ್ಟ್ ನಡೆಸಲಾಗಿದ್ದು, ಒಟ್ಟು 1,69,332 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಈವರೆಗೂ 75,38,398 ಜನರಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಮಾಡಲಾಗಿದೆ. ಇದರ ಹೊರತಾಗಿ 3,30,64,361 ಮಂದಿಗೆ RT-PCR ಟೆಸ್ಟ್ ನಡೆಸಲಾಗಿದ್ದು, ಈವರೆಗೂ ಒಟ್ಟು 4,06,02,759 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ.












Click it and Unblock the Notifications