ಜುಲೈ 6 ರ ನಂತರ ಕರ್ನಾಟಕದಲ್ಲಿ ಕಠಿಣ ಕ್ರಮ: ಅಶೋಕ
ಬೆಂಗಳೂರು, ಜೂನ್ 29: ''ಜುಲೈ ಮತ್ತು ಆಗಸ್ಟ್ ನಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತೆ ಅಂತಾ ತಜ್ಞರು ವರದಿ ಕೊಟ್ಟಿದ್ದಾರೆ. ಜುಲೈ 6 ರ ನಂತರ ಬೆಂಗಳೂರು ಮತ್ತು ರಾಜ್ಯದಲ್ಲಿ ಮತ್ತಷ್ಟು ಕಠಿಣ ಕ್ರಮ ಸಾಧ್ಯತೆಯಿದೆ ಹಾಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ ಎಂದು ಕೊವಿಡ್ 19 ನಿಯಂತ್ರಣ ಉಸ್ತುವಾರಿ ಸಚಿವ ಅಶೋಕ್ ಸುಳಿವು ನೀಡಿದ್ದಾರೆ.
ಕೊವಿಡ್ 19 ನಿಯಂತ್ರಣದ ಬಗ್ಗೆ ವಿವರ ನೀಡಲು ಇಂದು ಸುದ್ದಿಗೋಷ್ಠಿ ನಡೆಸಿದರು. ಸಹಾಯಕ ವೈದ್ಯರ ನೇಮಕಾತಿ, ಸರ್ಕಾರಿ ಆಸ್ಪತ್ರೆಯಲ್ಲಿ ಊಟ, ಚಿಕಿತ್ಸೆ, ಪರೀಕ್ಷೆ ವಿಧಾನ, ಖಾಸಗಿ ಆಸ್ಪತ್ರೆ ದರ ನಿಗದಿ, ಆಂಬ್ಯುಲೆನ್ಸ್ ಬಳಕೆ ಬಗ್ಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.
ಆರ್. ಅಶೋಕ್ಗೆ ಬೆಂಗಳೂರಿನ 'ಸಾಮ್ರಾಟ್' ಪಟ್ಟ ತಾತ್ಕಾಲಿಕ?
ಬೆಂಗಳೂರಿನಲ್ಲಿ ಒಟ್ಟು 3314 ಕೊರೊನಾ ಸೋಂಕಿತ ಪ್ರಕರಣಗಳಿವೆ, ಒಂದೇ ದಿನ 789 ಪ್ರಕರಣಗಳು ಪತ್ತೆಯಾಗಿವೆ, 533 ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ. 2692 ಪ್ರಕರಣಗಳು ಸಕ್ರಿಯವಾಗಿವೆ. 88 ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರಲ್ಲಿ ಐದೇ ದಿನದಲ್ಲಿ ಕೊರೊನಾ ಸೋಂಕಿತರು ದುಪ್ಪಟ್ಟು
ರಾಜ್ಯದಲ್ಲಿ ಒಟ್ಟು 13,190 ಕೊರೊನಾ ಸೋಂಕಿತ ಪ್ರಕರಣಗಳಿವೆ. ಆಸ್ಪತ್ರೆಯಿಂದ ಇದುವರೆಗೂ 7507 ಮಂದಿ ಬಿಡುಗಡೆಹೊಂದಿದ್ದಾರೆ. 1267 ಹೊಸ ಪ್ರಕರಣಗಳು ವರದಿಯಾಗಿವೆ. ಇದುವರೆಗೆ ಒಟ್ಟು 207 ಮಂದಿ ಸಾವನ್ನಪ್ಪಿದ್ದಾರೆ. ಭಾನುವಾರ ಒಂದೇ ದಿನ 16 ಮಂದಿ ಸಾವನ್ನಪ್ಪಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಗೆ ಸ್ಟಾರ್ ಹೋಟೆಲ್ ಊಟ
ವಿಕ್ಟೋರಿಯಾ ಆಸ್ಪತ್ರೆಗೆ ತಾಜ್, ಏಟ್ರಿಯಾ ಹೋಟೆಲ್ ನಿಂದ ಊಟ ತರೆಸಲಾಗುತ್ತದೆ. ಪ್ರತಿ ರೋಗಿಗಳ ಆರೋಗ್ಯ ಸ್ಥಿತಿಗೆ ಅನುಸಾರವಾಗಿ ಡಯಟೀಷಿಯನ್ ಸಲಹೆ ಪಡೆದು ಆಹಾರ ನೀಡಲಾಗುತ್ತದೆ.
ಮಧುಮೇಹ, ಕಿಡ್ನಿ ರೋಗಿಗಳಿಗೆ ಪ್ರತ್ಯೇಕ ಊಟದ ಮೆನು ಇರಲಿದೆ. ಮಕ್ಕಳಿಗೂ ಪ್ರತ್ಯೇಕ ಊಟ ಇರುತ್ತದೆ. ಊಟ ಮಾಡಲು ಕಷ್ಟವಾಗುವವರಿಗೆ ದ್ರವಾಹಾರ ನೀಡಲು ಸೂಚಿಸಲಾಗಿದೆ.
ಇದರ ಜೊತೆಗೆ ಇಸ್ಕಾನ್ ಜೊತೆ ಚರ್ಚೆ ನಡೆಸಿ ಕ್ವಾಲಿಟಿ ಫುಡ್ ಕೊಡೋಕೆ ತೀರ್ಮಾನ ಮಾಡಲಾಗಿದೆ. ಊಟದಲ್ಲಿ ತುಪ್ಪ ಸೇರಿಸಿ ಪೌಷ್ಟಿಕ ಆಹಾರ ಕೊಡೋಕೆ ಸೂಚನೆ ನೀಡಲಾಗಿದೆ. ಇಸ್ಕಾನ್ ಗೆ ಸರ್ಕಾರದಿಂದ ಹಣ ಪಾವತಿಸಲಾಗುತ್ತದೆ ಎಂದರು.
ವಿಕ್ಟೋರಿಯಾದಲ್ಲಿ ಎಷ್ಟು ಬೆಡ್ ಲಭ್ಯವಿದೆ
ಪೆಶೆಂಟ್ ನಂಬರ್, ಬೆಡ್ ನಂಬರ್ ಎರಡನ್ನು ಲಿಂಕ್ ಮಾಡುತ್ತೇವೆ ಎಂದು ವಿಕ್ಟೋರಿಯಾದಲ್ಲಿ ಎಷ್ಟು ಬೆಡ್ ಲಭ್ಯವಿದೆ ಎಂಬ ವಿವರ ನೀಡಿದರು. 550 ಬೆಡ್ ವಿಕ್ಟೋರಿಯಾದಲ್ಲಿ ಇವೆ, ಈ ಪೈಕಿ 282 ಬೆಡ್ ಗಳು ಖಾಲಿ ಇವೆ, 20 ಐಸಿಯು ಬೆಡ್ ಗಳು ಇವೆ ಎಂದರು.
ವಿಕ್ಟೋರಿಯಾ ಆಸ್ಪತ್ರೆಗೆ ಸದ್ಯ ಆರು ಆಂಬ್ಯುಲೆನ್ಸ್ ಕೊಟ್ಟಿದ್ದೀವಿ. 85 ವೈದ್ಯರಿಗೆ ಕಾಂಟ್ರಾಕ್ಟ್ ಬೇಸ್ ಮೇಲೆ ಅಪಾಯಿಂಟ್ ಮೆಂಟ್ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಕೋವಿಡ್ ಸೆಂಟರ್ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತೇವೆ, ರವಿಶಂಕರ್ ಗುರೂಜಿ ಆಶ್ರಮಕ್ಕೆ ಸಂಜೆ ಹೋಗುತ್ತಿದ್ದೇವೆ. ಮತ್ತಷ್ಟು ಬೆಡ್ ವ್ಯವಸ್ಥೆಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡುತ್ತೇವೆ. 20 ಹೊಸ ತಹಶಿಲ್ದಾರ್ ಗಳನ್ನ ಕೋವಿಡ್ ಸೆಂಟರ್ ಗಳಿಗೆ ಉಸ್ತುವಾರಿಗೆ ನೇಮಕವಾಗಲಿದೆ ಎಂದರು
ಎಕ್ಸ್ ರೇ ಮೂಲಕ ಕೋವಿಡ್ ಟೆಸ್ಟ್
ಎಕ್ಸ್ ರೇ ಮೂಲಕ ಕೋವಿಡ್ ಟೆಸ್ಟ್ ಮಾಡಿ ಮೂರು ನಿಮಿಷದಲ್ಲಿ ಫಲಿತಾಂಶ ಪಡೆಯಬಹುದು ಎಂದು ಯಲಹಂಕದಲ್ಲಿ ಈಗಾಗಲೇ ಪ್ರಯೋಗ ಮಾಡಿದ್ದಾರೆ. ಇದರ ವರದಿಯನ್ನು ತಜ್ಞರ ಕಮಿಟಿಗೆ ಕೊಡುತ್ತೇವೆ. ತಾಂತ್ರಿಕ ಸಮಿತಿ ಈ ಬಗ್ಗೆ ಶಿಫಾರಸು ಮಾಡಿದರೆ ಕೊರೊನಾ ವಾರಿಯರ್ಸ್ ಗೆ ಈ ಬಗ್ಗೆ ಸೂಚನೆ ನೀಡಲಾಗುತ್ತದೆ.
ಖಾಸಗಿ ಆಸ್ಪತ್ರೆಯ ಟೆಸ್ಟಿಂಗ್ ಸೆಂಟರ್ ಗಳಲ್ಲಿ ಪಾಸಿಟಿವ್ ಅಂತಾ ಸುಮ್ಮನೆ ಹೇಳುತ್ತಿದ್ದಾರೆ ಎಂಬ ದೂರಿದೆ. ರಿಪೋರ್ಟ್ ಸಿಗುವ ಮೊದಲೇ ಪಾಸಿಟಿವ್ ಅಂತಾ ಹೇಳ್ತಿದ್ದಾರೆ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತದೆ. ಐಸಿಎಂಆರ್, ಬಿಬಿಎಂಪಿ ಪೋರ್ಟಬಲ್ ಗೆ ಅಪ್ಡೇಟ್ ಮಾಡಬೇಕು ರೋಗ ಲಕ್ಷಣಗಳ ಬಗ್ಗೆಯೂ ಮಾಹಿತಿ ಕೊಡಬೇಕು ಎಂದರು.
ಎಸ್ ಡಿಆರ್ ಎಫ್ ಅಡಿಯಲ್ಲಿ 742 ಕೋಟಿ ಅನುದಾನ
ಎಸ್ ಡಿಆರ್ ಎಫ್ ಅಡಿಯಲ್ಲಿ 742 ಕೋಟಿ ಅನುದಾನ ಲಭ್ಯ ಇದೆ. ಜಿಲ್ಲಾಧಿಕಾರಿಗಳಿಗೆ 232 ಕೋಟಿ ಬಿಡುಗಡೆ ಮಾಡಲಾಗಿದೆ. ಆರೋಗ್ಯ ಇಲಾಖೆಗೆ 70, ಬಿಬಿಎಂಪಿಗೆ 50 ಕೋಟಿ ಹಣ ಬಿಡುಗಡೆಯಾಗಿದೆ. ಎರಡು ದಿನದಲ್ಲಿ ಎಲ್ಲ ಪಕ್ಷಗಳ ಪಾಲಿಕೆ ಸದಸ್ಯರ ಮೂರು ಬ್ಯಾಚ್ ಸಭೆ ನಡೆಸಲಾಗುತ್ತದೆ. ಈ ವಾರ ಪಾಲಿಕೆ ಸದಸ್ಯರ ಸಭೆ ನಡೆಸಲು ತೀರ್ಮಾನ ಮಾಡಲಾಗಿದ್ದು, 25 ಲಕ್ಷ ಹಣ ಈಗಾಗಲೇ ಪ್ರತೀ ವಾರ್ಡ್ ಗೆ ಮೀಸಲಿಟ್ಟಿದ್ದೇವೆ. ವಾರ್ಡ್ ಮಟ್ಟದಲ್ಲಿ ಹತ್ತು ಜನರನ್ನೊಳಗೊಂಡ ಎನ್ ಜಿಓ ಸಮಿತಿ ರಚನೆ ಮಾಡ್ತಿದ್ದೀವಿ ಎಂದರು.
ವೈದ್ಯರು ಪಿಆರ್ ಕೆಲಸ ಮಾಡುವಂತಿಲ್ಲ
ವಿಕ್ಟೋರಿಯಾ ಆಸ್ಪತ್ರೆ, ಹಜ್ ಭವನಗಳಲ್ಲಿ ವ್ಯವಸ್ಥೆ ಸರಿ ಇಲ್ಲ ಅಂತಾ ಟಾರ್ಗೆಟ್ ಮಾಡಲಾಗುತ್ತಿತ್ತು. ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ 6 ತಿಂಗಳ ತನಕ ಕೆಲಸ ಮಾಡಬೇಕು, ಮಾನಸಿಕವಾಗಿ ಸಿದ್ಧರಾಗಲು ಸೂಚಿಸಿದ್ದೇವೆ.
ವೈದ್ಯರ ಅವಶ್ಯಕತೆ ಇರೋದ್ರಿಂದ, ವೈದ್ಯರು ಪಿಆರ್ ಕೆಲಸ ಮಾಡುವಂತಿಲ್ಲ, ಆಸ್ಪತ್ರೆಗಳಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ನೇಮಿಸಲು ಸೂಚಿಸಿದ್ದೇವೆ. ಕರ್ತವ್ಯ ನಿರ್ವಹಿಸಿದ ವೈದ್ಯರಿಗೆ 7 ದಿನ ಕ್ವಾರಂಟೈನ್ ನಿಗದಿಯಾಗಿದೆ. ಹೋಟೆಲ್ ಗಳಲ್ಲಿ ಕ್ವಾರಂಟೈನ್ ಗೆ ಸೌಲಭ್ಯ ಒದಗಿಸುತ್ತೇವೆ
ಎರಡು ಚಿರಶಾಂತಿ ವಾಹನದ ವ್ಯವಸ್ಥೆ
ಮೃತರಾಗುವ ಸಾಗಾಟಕ್ಕೆ ಶಾಂತಿ ವಾಹನಗಳನ್ನ ಒಂದು ಝೋನ್ ಗೆ ಎರಡು ವಾಹನ ನಿಗದಿಯಾಗಿದೆ. ಕೊರೋನಾ ಸೋಂಕಿನಿಂತ ಮೃತ ಪಟ್ಟವರಿಗೆ ಪ್ರತೀ ಜೋನ್ ಗೆ ಎರಡು ಚಿರಶಾಂತಿ ವಾಹನದ ವ್ಯವಸ್ಥೆ ಮಾಡಲಾಗಿದೆ. ಸೋಡಿಯಂ ಸಿಂಪಡಿಕೆ ವಾಹನಗಳ ಖರೀದಿಗೆ ಅನುಮತಿ ನೀಡಲಾಗಿದೆ, ಖರೀದಿ ಮಾಡ್ತೀವಿ. ಔಷಧಿ ಸಿಂಪಡಣೆಗೆ ಎರಡು ವಾಹನಗಳು ಉದ್ಘಾಟನೆ ಆಗುತ್ತೆ, ಹೆಚ್ಚು ವಾಹನಗಳ ಖರೀದಿಗೆ ಅನುಮತಿ ಕೊಟ್ಟಿದ್ದಾರೆ. ಮಾಸ್ಕ್ ಗಳನ್ನ ಕಡ್ಡಾಯಗೊಳಿಸಲು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗಿದೆ ಎಂದರು.