ಒಂದೇ ತಿಂಗಳಲ್ಲಿ ಬಿರುಕು ಬಿಟ್ಟ ದೇಶದ ಪ್ರಥಮ 'ರ್ಯಾಪಿಡ್ ರಸ್ತೆ': ಬೆಂಗಳೂರಿನಲ್ಲಿ ಬಿಬಿಎಂಪಿ ಆವಾಂತರ
ಬೆಂಗಳೂರು, ಡಿಸೆಂಬರ್ 07: ಕರ್ನಾಟಕ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಕಳಪೆ ಕಾಮಗಾರಿ ಆರೋಪಗಳು ಕೇಳಿಬರುತ್ತಲೇ ಇವೆ. ಭ್ರಷ್ಟಾಚಾರ, 40 ಪರ್ಸೆಂಟ್ ಕಮಿಷನ್ ಆರೋಪಗಳಿಗೆ ಇಂಬು ನೀಡುವಂತೆ ಕಳಪೆ ಕಾಮಗಾರಿಗಳು ಕಣ್ಣಿಗೆ ರಾಚುತ್ತಲೇ ಇವೆ.
ಈಗ ಸಿದ್ದಗೊಂಡ ಒಂದೇ ತಿಂಗಳಲ್ಲಿ ರ್ಯಾಪಿಡ್ ರಸ್ತೆಯಲ್ಲಿ ಬಿರುಕುಗಳು ಕಂಡುಬಂದಿದೆ. ಈ ರಸ್ತೆಯನ್ನು ದೇಶದ ಪ್ರಥಮ 'ರ್ಯಾಪಿಡ್ ರಸ್ತೆ' ಎಂದು ಬಿಬಿಎಂಪಿ ಬಿಂಬಿಸಿತ್ತು. ಇದು ಬಿಬಿಎಂಪಿ ಮಾಡಿರುವ ಆವಾಂತರ ಹಾಗೂ ಕಳಪೆ ಕಾಮಗಾರಿಗೆ ನಿದರ್ಶನವೆಂಬ ಆಕ್ರೋಶ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಈ ಕುರಿತು ವರದಿ ಮಾಡಿರುವ 'ಪ್ರಜಾವಾಣಿ', ಹಳೇ ಮದ್ರಾಸ್ ರಸ್ತೆದಲ್ಲಿರುವ ರ್ಯಾಪಿಡ್ ರಸ್ತೆಯಲ್ಲಿನ ಬಿರುಕಿನ ಚಿತ್ರವನ್ನು ಪ್ರಕಟಿಸಿದೆ. ವರದಿಯ ಪ್ರಕಾರ, ಹಳೇ ಮದ್ರಾಸ್ ರಸ್ತೆದಲ್ಲಿ 337.5 ಮೀಟರ್ ಮಾರ್ಗವನ್ನು ನಿರ್ಮಿಸಲಾಗಿತ್ತು. ಇದಕ್ಕೆ 'ಪ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್ಮೆಂಟ್' ಅನ್ನು ಬಳಸಲಾಗಿತ್ತು. ಇದು ದೇಶದ ಪ್ರಥಮ 'ರ್ಯಾಪಿಡ್ ರಸ್ತೆ'ಯನ್ನು ಪ್ರಾಯೋಗಿಕವಾಗಿ ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಹೇಳಿಕೊಂಡಿತ್ತು.

ಈಗ ಈ ರ್ಯಾಪಿಡ್ ರಸ್ತೆ ಮೂರ್ನಾಲ್ಕು ಕಡೆಗಳಲ್ಲಿ ಬಿರುಕು ಬಿಟ್ಟಿರುವುದು ಕಂಡುಬಂದಿದೆ. ಪ್ರೀಕಾಸ್ಟ್ ಪ್ಯಾನೆಲ್ ನಿರ್ಮಾಣದಲ್ಲಿ ಗುಣಮಟ್ಟದ ಸಿಮೆಂಟ್ ಮಿಶ್ರಣ ಮಾಡಿಲ್ಲ. ಈ ಬಿರುಕುಗಳಿಗೆ ಇದೇ ಕಾರಣವೆಂದು ಹೇಳಲಾಗುತ್ತಿದೆ. ಆದಷ್ಟೂ ಬೇಗನೇ ರಸ್ತೆಗಳು ನಿರ್ಮಾಣವಾಗುತ್ತವೆ ಎಂದು ಹರ್ಷ ವ್ಯಕ್ತಪಡಿಸಿದ್ದ ಜನರೀಗ ಆಕ್ರೋಶ ವ್ಯಕ್ತಪಡಿಸುವಂತಾಗಿದೆ.
'ಗುತ್ತಿಗೆದಾರರು ಈ ತಂತ್ರಜ್ಞಾನವನ್ನು ಸರಿಯಾಗಿ ಅನುಷ್ಠಾನಗೊಳಿಸಿಲ್ಲ. ಹೀಗಾಗಿ ಬಿರುಕಿನ ಸಮಸ್ಯೆ ಆಗಿದೆ. 20ರಿಂದ 21 ಪ್ಯಾನೆಲ್ಗಳನ್ನು ಜೋಡಿಸುವಾಗ ಹೆಚ್ಚಾಗಿ ಎಳೆದಿರುವುದರಿಂದ ಈ ರೀತಿಯ ಬಿರುಕು ಕಾಣಿಸಿಕೊಂಡಿರಬಹುದು. ಕೆಲವೆಡೆ ಫೌಂಡೇಶನ್ ಸರಿಯಾಗಿ ಲೆವೆಲಿಂಗ್ ಆಗದ್ದರಿಂದ ಈ ಆವಾಂತರ ಸಂಭವಿಸಿದೆ' ಎಂದು ಅಲ್ಟ್ರಾಟೆಕ್ನ ತಾಂತ್ರಿಕ ತಜ್ಞ ಪಿ.ಎಂ. ಹಿರೇಮಠ 'ಪ್ರಜಾವಾಣಿ' ಗೆ ತಿಳಿಸಿದ್ದಾರೆ.

'ಈ ಪ್ರಾಯೋಗಿಕ ರಸ್ತೆಯ ಪರೀಕ್ಷೆಯನ್ನು ಭಾರತೀಯ ವಿಜ್ಞಾನ ಸಂಸ್ಥೆ ನಡೆಸಲಿದೆ. ಅದರ ವರದಿ ಬಂದ ನಂತರ ಅದರಂತೆಯೇ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತದೆ' ಎಂದಿದ್ದಾರೆ.
ರ್ಯಾಪಿಡ್ ರಸ್ತೆಯನ್ನು ಸಿದ್ದಗೊಳಿಸಿದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದ ಬಿಬಿಎಂಪಿ ಪ್ರಧಾನ ಎಂಜಿನಿಯರ್ ಪ್ರಹ್ಲಾದ್, ಈ ರಸ್ತೆ ಮೂರು ದಿನಗಳಲ್ಲಿ ನಿರ್ಮಾಣಗೊಳ್ಳುತ್ತದೆ, ನೂರು ವರ್ಷ ಬಾಳಿಕೆ ಬರುತ್ತದೆ ಎಂದು ತಿಳಿಸಿದ್ದರು.
ಬೆಂಗಳೂರು ನಗರದಲ್ಲಿ ವೈಟ್ ಟ್ಯಾಪಿಂಗ್ ಬದಲು ರ್ಯಾಪಿಡ್ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಇದರಿಂದ ತಿಂಗಳುಗಟ್ಟಲೇ ರಸ್ತೆ ನಿರ್ಮಾಣ ಪ್ರಕ್ರಿಯೆಗೆ ಕಾಯಬೇಕಿಲ್ಲ. ರ್ಯಾಪಿಡ್ ರಸ್ತೆಯಲ್ಲಿ ಗುಂಡಿ ಬೀಳಲ್ಲ. ಬಿರುಕು ಬಿಡಲ್ಲ. ಹಾಳಾಗಲ್ಲ. ಇದು ಕನಿಷ್ಟ ನೂರು ವರ್ಷ ಬಾಳಿಕೆ ಬರಲಿದೆ ಎಂದು ಹೇಳಿದ್ದರು.

ಕಳೆದ ವರ್ಷದ ನವೆಂಬರ್ 22ರಂದು ಈ ರಸ್ತೆಯ ಕಾಮಗಾರಿ ಆರಂಭವಾಗಿತ್ತು. ಡಿಸೆಂಬರ್ 8ರಂದು ಈ ರಸ್ತೆಯನ್ನು ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. 'ವೈಟ್ ಟ್ಯಾಪಿಂಗ್ ರಸ್ತೆಗಿಂತ ನಲವತ್ತು ಪಟ್ಟು ಹಣವನ್ನು ನೋಡಿವಂತೆ ಎಂಜಿನಿಯರ್ಗಳು ಹೇಳುತ್ತಿದ್ದಾರೆ. ನಮಗೆ ಅಷ್ಟು ಹಣವನ್ನು ನೀಡಲು ಸಾಧ್ಯವಿಲ್ಲ. ಮೊದಲು ಇದರ ಸಾಮರ್ಥ್ಯ ಸಾಬೀತಾಗಬೇಕು. ಆ ನಂತರ ಈ ರಸ್ತೆ ಕಾಮಗಾರಿ ಮುಂದುವರಿಸುವುದರ ಬಗ್ಗೆ ಚಿಂತಿಸೋಣ' ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು.
ಭಾರತೀಯ ವಿಜ್ಞಾನ ಸಂಸ್ಥೆಯು 'ರ್ಯಾಪಿಡ್ ರಸ್ತೆ'ಯ ಗುಣಮಟ್ಟವನ್ನು ಪರೀಕ್ಷಿಸಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದರು. ಐಐಎಸ್ಇ ಪರೀಕ್ಷೆ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವ ಮೊದಲ ಈ ಆವಾಂತರ ಸಂಭವಿಸಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಈಗ ಕಾಣಿಸಿಕೊಂಡಿರುವ ಬಿರುಕು ಮೇಲ್ಪದರದಲ್ಲಾಗಿದೆ. ಬಹಳ ಆಳವಾಗಿಲ್ಲ. ಇದನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ಈಗ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್ ಪ್ರಹ್ಲಾದ್ ತಿಳಿಸಿದ್ದಾರೆ.












Click it and Unblock the Notifications