ಮುಖ್ಯಮಂತ್ರಿಗಳ ಗಮನಕ್ಕೆ ಮೊದಲು KIAL ಲಾಕ್ ಡೌನ್ ಮಾಡ್ಸಿ
ಬೆಂಗಳೂರು, ಮಾರ್ಚ್ 23: ಕೊರೊನಾವೈರಸ್ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಇನ್ನಿಲ್ಲದ್ದಂತೆ ಯತ್ನಿಸುತ್ತಿದೆ. ಆದರೆ, ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದ ದೊಡ್ಡ ಸಂಖ್ಯೆಯ ಜನರನ್ನು ಕ್ವಾರಂಟೈನ್ ನಲ್ಲಿ ಇಡುವುದೇ ದೊಡ್ಡ ಸವಾಲಾಗಿದೆ. ಈ ನಡುವೆ ಸಮಸ್ಯೆಯ ಮೂಲ ದ್ವಾರ ಎನಿಸಿಕೊಂಡಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪೂರ್ಣ ಬಂದ್ ಆಗಿಲ್ಲ ಎಂಬ ಆಘಾತಕಾರಿ ಸುದ್ದಿ ಬಂದಿದೆ.
ಕೊರೊನಾವೈರಸ್ ಸೋಂಕು ಸಂಪೂರ್ಣ ಶಟ್ ಡೌನ್ ಮಾಡುವುದೇ ಪರಿಹಾರ ಎಂಬ ಅಂಶಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು, ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಆದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಲಾಕ್ ಡೌನ್, ಸಂಪೂರ್ಣ ಬಂದ್ ವಾತಾವರಣ ಇಲ್ಲ ಎಂಬ ವಿಚಾರ ಇನ್ನೂ ಸರ್ಕಾರದ ಗಮನಕ್ಕೆ ಬಂದಿಲ್ಲ.
ಒನ್ಇಂಡಿಯಾ ತಂಡಕ್ಕೆ ಸಿಕ್ಕ ಮಾಹಿತಿ ಪ್ರಕಾರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ಕಾಮಗಾರಿ ಇನ್ನೂ ಜಾರಿಯಲ್ಲಿದೆ.

"ಉತ್ತರ ಕರ್ನಾಟಕ, ಬಿಹಾರ ಮೂಲದ ಸಾವಿರಾರು ಕಾರ್ಮಿಕರು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಕೊರೊನಾ ಬಗ್ಗೆ ಗೊತ್ತಿದೆಯೋ ಇಲ್ಲವೋ ಆದರೆ, ಅಧಿಕಾರಿಗಳಿಗಂತೂ ಕೊರೊನಾವೈರಸ್ ಬಗ್ಗೆ ಅರಿವಿದೆ. ಕೊವಿಡ್19 ಪರಿಣಾಮದ ಬಗ್ಗೆ ಅರಿವಿದ್ದರೂ ಈ ಪರಿ ನಿರ್ಲಕ್ಷ್ಯ ತೋರುತ್ತಿರುವುದು ಎಷ್ಟು ಸರಿ'' ಎಂದು ಸ್ಥಳೀಯರಾದ ರಂಗಪ್ಪ ತಮ್ಮ ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಬಿಐಎಎಲ್ ವಕ್ತಾರರು, "ದೇಶಿ ವಿಮಾನ ಹಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ, ವಿದೇಶಿ ವಿಮಾನ ಹಾರಾಟ, ಲ್ಯಾಂಡಿಂಗ್ ನಿರ್ಬಂಧ ಹೇರಲಾಗಿದೆ. ಕೆಐಎಎಲ್ ನಲ್ಲಿ ಕಾಮಗಾರಿ ನಡೆದಿರುವ ಬಗ್ಗೆ ನಾವು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ವಿಮಾನ ನಿಲ್ದಾಣ ನಿರ್ವಹಣೆ ಖಾಸಗಿ ಕಂಪನಿಗೆ ನೀಡಲಾಗಿರುತ್ತದೆ. ವಿಮಾನಯಾನದ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ರಾಜ್ಯ ಸರ್ಕಾರದ ಆದೇಶಕ್ಕೆ ಬೆಲೆ ಇಲ್ಲದಿದ್ದರೂ, ಮೋದಿ ಸರ್ಕಾರ ಲಾಕ್ ಡೌನ್ ಪಟ್ಟಿಯಲ್ಲಿ ದೇವನಹಳ್ಳಿಯೂ ಸೇರುತ್ತದೆ. ಆದೇಶ ಪ್ರತಿ ಮಾತ್ರ ಇಲ್ಲಿನ ಅಧಿಕಾರಿಗಳಿಗೆ ಸಿಕ್ಕಿಲ್ಲ, ಸಿಕ್ಕಿದ್ದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದೆನಿಸುತ್ತದೆ.
2ನೇ ಟರ್ಮಿನಲ್ ಬಗ್ಗೆ ಮಾಹಿತಿ:
ಎರಡನೇ ಟರ್ಮಿನಲ್ ಹಸಿರಿನಿಂದ ಕಂಗೊಳಿಸುವಂತೆ ನಿರ್ಮಿಸಲಾಗುತ್ತಿದೆ. ಮೊದಲ ಟರ್ಮಿನಲ್ ಕಾಮಗಾರಿ ಹಂತದಲ್ಲಿ 2.54 ಲಕ್ಷ ಚದರ ಮೀ. ನಿರ್ಮಾಣ ಪ್ರದೇಶವನ್ನು ಹೊಂದಿರುವ ಕಟ್ಟಡ ಹಾಗೂ ಎರಡನೇ ಹಂತದಲ್ಲಿ4.41 ಲಕ್ಷ ಚದರ ಮೀ. ನಿರ್ಮಾಣ ಪ್ರದೇಶವಿರುವ ಕಟ್ಟಡ ಹಾಗೂ ಎರಡನೇ ಹಂತದಲ್ಲಿ 4.5 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ.
ಮೊದಲ ಹಂತದಲ್ಲಿ 90 ಕೌಂಟರ್ ಗಳು ಹಾಗೂ ಎರಡನೇ ಹಂತದಲ್ಲಿ 123 ಕೌಂಟರ್ ಗಳು ನಿರ್ಮಾಣವಾಗಲಿದೆ. ಈ ಪ್ರದೇಶದಲ್ಲಿ97 ವಲಸೆ ಕೌಂಟರ್ ಗಳು ಹಾಗೂ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲಲು 62 ಲೇನ್ ಗಳು ಬರಲಿವೆ. ಆಗಮನ ಪ್ರದೇಶದಲ್ಲಿ173 ವಲಸೆ ಕೌಂಟ್ ಗಳು ಇರಲಿವೆ. ಈ ಪೈಕಿ 113 ಕೌಂಟರ್ ಗಳು ನಿರ್ಮಾಣವಾಗುವುದು ಎರಡನೇ ಹಂತದಲ್ಲಿ ಪ್ರಯಾಣಿಕರ ಹ್ಯಾಂಡ್ ಬ್ಯಾಗ್ ತಪಾಸಣೆಗಾಗಿ 23ಲೇನ್ ಇರಲಿದೆ.
6.5 ಕೋಟಿ ಜನ ಬಳಸುವ ನಿರೀಕ್ಷೆ: 2017 ರಲ್ಲಿ2.5 ಕೋಟಿ ಪ್ರಯಾಣಿಕರನ್ನು ನಿರ್ವಹಿಸಿರುವ ದಾಖಲೆ ಹೊಂದಿದ್ದ ಕೆಐಎಎಲ್, ಈಗ ಎರಡನೇ ಟರ್ಮಿನಲ್ ನ ಎರಡೂ ಹಂತಗಳ ಕಾಮಗಾರಿ ಪೂರ್ಣಗೊಂಡ ಬಳಿಕ ವರ್ಷದಲ್ಲಿ ಈ ವಿಮಾನ ನಿಲ್ದಾಣ ಬಳಸುವವರ ಸಂಖ್ಯೆ 6 ರಿಂದ 6.5 ಕೋಟಿ ಮೀರುವ ನಿರೀಕ್ಷೆಯಿದೆ. ಜನಪ್ರಿಯ ಕಂಪನಿಯೊಂದಕ್ಕೆ ಟರ್ಮಿನಲ್ 2 ನಿರ್ಮಾಣ ಗುತ್ತಿಗೆ ಸಿಕ್ಕಿದೆ. ಕೆಐಎಎಲ್ ಶಟ್ ಡೌನ್ ಮಾಡುವ ಕಾರ್ಯವನ್ನು ಯಾರು ಮಾಡುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ.












Click it and Unblock the Notifications