ಬೆಂಗಳೂರಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಟೆಕ್ಕಿ ಗುಣಮುಖ
ಬೆಂಗಳೂರು, ಮಾರ್ಚ್ 21: ಬೆಂಗಳೂರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ ಟೆಕ್ಕಿ ಸಂಪೂರ್ಣವಾಗಿ ಗುಣಮುಖವಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ನಾಲ್ಕು ದಿನಗಳ ಬಳಿಕ ಕೊರೊನಾ ಸೋಂಕು ರಾಜ್ಯದಲ್ಲಿ ಬ್ರೇಕ್ ನೀಡಿದ್ದು, ಶುಕ್ರವಾರ ಯಾವುದೇ ಪ್ರಕರಣಗಳು ದೃಢಪಟ್ಟಿಲ್ಲ.ಇದೇ ಮೊದಲ ಬಾರಿಗೆ ಸೋಂಕಿತರೊಬ್ಬರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಸೋಂಕು ದೃಢಪಟ್ಟಿದ್ದ 15 ಜನರ ಪೈಕಿ ಬೆಂಗಳೂರು ಜಯನಗರ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 26 ವರ್ಷದ ಟೆಕ್ಕಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
ಅಲ್ಲದೆ, ಮುಂದಿನ ಬುಧವಾರದ ವೇಳೆ ರಾಜೀವಾ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೂ ನಾಲ್ವರು ಬಿಡುಗಡೆಯಾಗುವ ಸಾಧ್ಯತೆ ಇದೆ.
ಹೀಗಾಗಿ ಸೋಂಕು ದೃಢಪಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 14 ಮಂದಿ ಪೈಕಿ ಬುಧವಾರದ ವೇಳೆಗೆ ಬಿಡುಗಡೆಯಾಗಲಿದ್ದಾರೆ.

ಶುಕ್ರವಾರ ಅತಿ ಹೆಚ್ಚು ಮಂದಿಯ ತಪಾಸಣೆ
ಕೇಂದ್ರ ಸರ್ಕಾರವು ಮಾ.22 ರಿಂದ ಅಂತಾರಾಷ್ಟ್ರೀಯ ವಿಮಾನಗಳು ದೇಶಕ್ಕೆ ಬಾರದಂತೆ ನಿಷೇಧ ಹೇರಿರುವುದರಿಂದ ಶುಕ್ರವಾರ ಹೆಚ್ಚಿನ ಜನರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈವರೆಗೆ ಬೆಂಗಳೂರು, ಮಂಗಳೂರಿನಲ್ಲಿ 1.22 ಲಕ್ಷ ಮಂದಿ ಪ್ರಯಾಣಿಕರ ತಪಾಸಣೆ ನಡೆಸಿದ್ದು, 4030 ಮಂದಿಯನ್ನು ಮನೆ ಹಾಗೂ ಆಸ್ಪತ್ರೆಯಲ್ಲಿ ಪ್ರತ್ಯೇಕ ನಿಗಾದಲ್ಲಿರಿಸಲಾಗಿದೆ. ಶುಕ್ರವಾರ ಒಂದೇ ದಿನ 918 ಮಂದಿ ಮೇಲೆ ನಿಗಾವಹಿಸಲಾಗಿದೆ.

ಬೆಂಗಳೂರಿನ ಟೆಕ್ಕಿ ಸಂಪೂರ್ಣ ಗುಣಮುಖ
ಜಯನಗರ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಟೆಕ್ಕಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಫೆ.23ರಂದು ಹನುಮೂನ್ಗೆಂದು ಗ್ರೀಸ್ಗೆ ತೆರಳಿದ್ದರು. ಮಾ.6 ರಂದು ವಾಪಸಾಗಿದ್ದರು. ಬಳಿಕ ಮಾ.8 ರಂದು ಮುಂಬೈ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದ ಸೋಂಕಿತ ವ್ಯಕ್ತಿಗೆ ಕಳೆದ ಮಾರ್ಚ್ 12 ರಂದು ಸೋಂಕು ದೃಢಪಟ್ಟಿತ್ತು. ಜತೆಗೆ ಆಗ್ರಾದಲ್ಲಿರುವ ಅವರ ಪತ್ನಿಗೂ ಸೋಂಕು ಇರುವುದು ಖಚಿತವಾಗಿತ್ತು.

ಆರೋಗ್ಯ ಇಲಾಖೆ ಹೊಸ ಕ್ರಮ
-ಯಾವ ರೀತಿಯ ಪ್ರಕರಣಗಳಲ್ಲಿ ಸೋಂಕು ಮಾದರಿ ಪರೀಕ್ಷೆಗೆ ಕಳುಹಿಸಬಹುದು ಎಂಬುದನ್ನು ಆಯ್ಕೆ ಮಾಡಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಲ್ಯಾಬ್ ಪರೀಕ್ಷಾ ಕುರಿತ ಸಲಹಾ ಮಾರ್ಗಸೂಚಿ ನೀಡಲಾಗಿದೆ.
-ಕೊರೊನಾ ನಿಯಂತ್ರಣಕ್ಕಾಗಿ ಯಾವುದೇ ಆರೋಗ್ಯ ಇಲಾಖೆ ಸಿಬ್ಬಂದಿಗೂ ವಾರಾಂತ್ಯದ ರಜೆ ಇಲ್ಲ. ವೈದ್ಯರು, ಶುಶ್ರೂಷಕರು, ಪ್ರಯೋಗಾಲಯ ಸಿಬ್ಬಂದಿ, ವೈದ್ಯಕೀಯ ಕಾಲೇಜು,ಅರೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಕೂಡ ಮಾರ್ಚ್ 31ರವರೆಗೆ ರಜೆ ಇಲ್ಲ.
-ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಸಂಪರ್ಕ ಪತ್ತೆಗೆ ಒಬ್ಬ ವೈದ್ಯರು , ಒಬ್ಬ ಶುಶ್ರೂಷಕರು, ಒಬ್ಬ ಎಂಎಸ್ ಡಬ್ಲ್ಯೂ ವಿದ್ಯಾರ್ಹತೆಯುಳ್ಳವರನ್ನು ಒಳಗೊಂಡ ನೂರು ಜನರ ತಂಡ ನಿಯೋಜನೆ.

ಕೊರೊನಾದಿಂದ ದೇಶದಲ್ಲಿ 5 ಸಾವು
ಕೊರೊನಾ ವೈರಸ್ನಿಂದ ಭಾರತದಲ್ಲಿ ಮೃತಪಟ್ಟಿರುವವರ ಸಂಖ್ಯೆ 5ಕ್ಕೇರಿದೆ. ಜೈಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 69 ವರ್ಷದ ಇಟಲಿಯ ಪ್ರಜೆ ಸಾವನ್ನಪ್ಪಿದ್ದಾರೆ.ಸೋಂಕಿತ ವ್ಯಕ್ತಿಯನ್ನು ಆಂಡ್ರ್ಯೂ ಎಂದು ಗುರುತಿಸಲಾಗಿದೆ. ಜೈಪುರದ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೊಸ 22 ಪ್ರಕರಣಗಳು ಬೆಳಕಿಗೆ ಬಂದಿವೆ.












Click it and Unblock the Notifications