ಶಾಕಿಂಗ್ ನ್ಯೂಸ್:ರಾಜ್ಯದ 127 ಮಂದಿಗೆ ಕೊರೊನಾ, 91 ಮಂದಿಗೆ ಮಹಾ ನಂಟು!
ಬೆಂಗಳೂರು, ಮೇ.19: ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಮಹಾಸ್ಫೋಟವಾಗಿದೆ. ಕರ್ನಾಟಕದಲ್ಲಿ ಒಂದೇ ದಿನ 127 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಇಡೀ ರಾಜ್ಯದ ಜನರನ್ನು ಕಂಗೆಡಿಸಿದೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 1,246 ರಿಂದ 1,373ಕ್ಕೆ ಏರಿಕೆಯಾಗಿದೆ.
ಮಂಡ್ಯ ಜಿಲ್ಲೆಯೊಂದರಲ್ಲೇ ಕೊರೊನಾ ವೈರಸ್ ಅಬ್ಬರಿಸಿದೆ. ಒಂದೇ ದಿನ ಜಿಲ್ಲೆಯಲ್ಲಿ 62 ಮಂದಿಗೆ ಮಹಾಮಾರಿ ವಕ್ಕಿಸಿದೆ. ದಾವಣಗೆರೆ 19, ಶಿವಮೊಗ್ಗ 12, ಕಲಬುರಗಿ 11, ಉಡುಪಿಯಲ್ಲಿ 4, ಬೆಂಗಳೂರಿನಲ್ಲಿ 6 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
KSRTC ಮತ್ತು BMTC ಬಸ್ ಹತ್ತುವ ಮುನ್ನ ಪ್ರಯಾಣಿಕರೇ ಗಮನಿಸಿ!
ಹಸಿರು ವಲಯದಲ್ಲಿ ಗುರುತಿಸಿದ್ದ ಚಿಕ್ಕಮಗಳೂರಿನಲ್ಲೂ ಮಂಗಳವಾರ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಮಹಾಮಾರಿ ಲಗ್ಗೆಯಿಟ್ಟಿದ್ದು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. ಉಳಿದಂತೆ ಹಾಸನ 3, ಯಾದಗಿರಿ 1, ವಿಜಯಪುರ 1, ಚಿತ್ರದುರ್ಗ 1 ಸೋಂಕಿತ ಪ್ರಕರಣ ಪತ್ತೆಯಾಗಿದೆ.
127 ಜನರ ಪೈಕಿ 91 ಸೋಂಕಿತರಿಗೆ ಮಹಾರಾಷ್ಟ್ರ ನಂಟು
ಮಂಗಳವಾರ ಕರ್ನಾಟಕದ ಪಾಲಿಗೆ ಅಮಂಗಳವಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯವು ಕಂಡು ಕೇಳರಿಯದ ರೀತಿಯಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇಂದು ಒಂದೇ ದಿನ 127 ಮಂದಿಗೆ ನೊವೆಲ್ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಪೈಕಿ 91 ಮಂದಿ ಸೋಂಕಿತರಿಗೆ ಮಹಾರಾಷ್ಟ್ರದ ನಂಟು ಇರುವುದು ದೃಢಪಟ್ಟಿದೆ.
ಕರ್ನಾಟಕದ 29 ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಅಬ್ಬರ
ಭಾರತ ಲಾಕ್ ಡೌನ್ 4.0 ವಿಸ್ತರಣೆ ನಡುವೆಯೂ ಕರ್ನಾಟಕದ 29 ಜಿಲ್ಲೆಗಳಲ್ಲಿ ನೊವೆಲ್ ಕೊರೊನಾ ವೈರಸ್ ಅಬ್ಬರಿಸಿದೆ. ಚಾಮರಾಜನಗರ ಜಿಲ್ಲೆಯೊಂದನ್ನು ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲೂ ಕೊವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದೆ. ಆದರೆ ಚಾಮರಾಜನಗರ ಜಿಲ್ಲೆಯಲ್ಲಿ ಇದುವರೆಗೂ ಒಂದೇ ಒಂದು ಸೋಂಕಿತ ಪ್ರಕರಣವು ಪತ್ತೆಯಾಗಿಲ್ಲ.
ಮಹಾ ನಂಟಿನಿಂದ ಮಂಡ್ಯ ಜಿಲ್ಲೆಗೆ ಮರ್ಮಾಘಾತ!
ನೆರೆಯ ಮಹಾರಾಷ್ಟ್ರವು ರಾಜ್ಯದ ಪಾಲಿಗೆ ಕಂಟಕವಾಗುತ್ತಿದೆ. ವಾಣಿಜ್ಯ ನಗರಿ ಮುಂಬೈನಿಂದ ಆಗಮಿಸಿದ ಬಹುಪಾಲು ಕಾರ್ಮಿಕರಿಗೆ ಕೊರೊನಾ ವೈರಸ್ ಪಾಸಿಟಿವ್ ಕಂಡು ಬಂದಿದೆ. ಮಂಗಳವಾರ ಒಂದೇ ದಿನ ಮಂಡ್ಯದಲ್ಲಿ 62 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯು 151ಕ್ಕೆ ಏರಿಕೆಯಾಗಿದೆ.
ಕಲಬುರಗಿಗೆ ಕಂಟಕವಾದ ಮಹಾರಾಷ್ಟ್ರ ನಂಟು
ಕಲಬುರಗಿಯಲ್ಲೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಗೆ ಮಹಾರಾಷ್ಟ್ರ ನಂಟು ಕಾರಣವಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯು 114 ರಿಂದ 125ಕ್ಕೆ ಏರಿಕೆಯಾಗಿದೆ. ಮಂಗಳವಾರ ಒಂದೇ ದಿನ ಜಿಲ್ಲೆಯಲ್ಲಿ 11 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಎಲ್ಲ ಸೋಂಕಿತರೂ ಕೂಡಾ ಮಹಾರಾಷ್ಟ್ರದಿಂದ ವಾಪಸ್ ಆಗಿರುವುದು ದೃಢಪಟ್ಟಿದೆ.