ಕೊರೊನಾ ಭೀತಿ: ವಿದೇಶದಿಂದ ಬೆಂಗಳೂರಿಗೆ ಬಂದ 43 ಸಾವಿರ ಜನ: ಪೊಲೀಸರಿಂದ ವಿಳಾಸ ಪತ್ತೆ
ಬೆಂಗಳೂರು, ಮಾರ್ಚ್ 24: ವಿದೇಶದಿಂದ ಬಂದವರಿಂದ ಮಾರಣಾಂತಿಕ ಕೊರೊನಾ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಲೇ ಇದೆ. ದೇಶದಲ್ಲಿ ಈ ಸೋಂಕು ಇದುವರೆಗೆ ಹತ್ತು ಜನರನ್ನು ಬಲಿ ಪಡೆದುಕೊಂಡಾಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಕರ್ಫ್ಯೂ ಮಾದರಿಯಲ್ಲೇ ನಿರ್ಬಂಧ ಇರಲಿದೆ ಎಂದು ಸರಕಾರ, ಸಾರ್ವಜನಿಕರಿಗೆ ಮತ್ತೆ ಮತ್ತೆ ಸೂಚಿಸಿದೆ.
ಈ ವೈರಸ್ ಎರಡನೇ ಹಂತದಿಂದ ಮೂರನೇ ಹಂತಕ್ಕೆ ಹೊರಳಿಕೊಳ್ಳುವ ಈ ನಿರ್ಣಾಯಕ ಸಮಯದಲ್ಲಿ, ಸಾರ್ವಜನಿಕರು ಸಹಕರಿಸಬೇಕೆಂದು ಸರಕಾರ ಮನವಿ ಮಾಡಿಕೊಂಡಿದೆ. ಮನೆಯಿಂದ ಹೊರಬರಬೇಡಿ, ಪ್ಲೀಸ್ ಎಂದಿದೆ.. ಸಾರ್ವಜನಿಕರು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ.
ಈ ವೈರಸ್ ಬೆಂಗಳೂರು ಸೇರಿದಂತೆ ದೇಶದೊಳಗೆ ಕಾಲಿಟ್ಟಾಗಿದೆ. ಅದಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ವಿದೇಶದಿಂದ ಬಂದಿಳಿದ ಇತರ ಸಾವಿರ ಸಾವಿರ ಪ್ರಯಾಣಿಕರನ್ನೂ ತಪಾಸಣೆಗೆ ಒಳಪಡಿಸಬೇಕಾಗಿದೆ. ಇಂತಹ ಕ್ಲಿಷ್ಟ ಸಮಯದಲ್ಲಿ ಬೆಂಗಳೂರು ಡಿಸಿಪಿ ಇಶಾ ಪಂತ್, ಸಮಾರೋಪಾದಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಸರಕಾರೀ ಆಸ್ಪತ್ರೆಯೊಂದು ಕೋವಿಡ್ 19ಗೆ ಮೀಸಲು
ಇದೇ ಮೊದಲ ಬಾರಿಗೆ ಸರಕಾರೀ ಆಸ್ಪತ್ರೆಯೊಂದನ್ನು ಕೋವಿಡ್ 19ಗೆ ಮೀಸಲಿರಿಸಲಾಗಿದೆ. 33 ಕೋಟಿಯಷ್ಟು ವೈದ್ಯಕೀಯ ಸಾಮಗ್ರಿಗಳನ್ನು ಆರ್ಡರ್ ಮಾಡಿದೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ಈ ಸಾಮಗ್ರಿಗಳು ಬೆಂಗಳೂರಿಗೆ ಬರುವ ಸಾಧ್ಯತೆಯಿದೆ. ನಗರದ ಕೆ.ಆರ್.ಮಾರುಕಟ್ಟೆಯ ಬಳಿಯಿರುವ ವಿಕ್ಟೋರಿಯಾ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೊನಾಗಾಗಿ ಮೀಸಲಿಡಲಾಗಿದೆ. ಇದು 1,700 ಬೆಡ್ ಇರುವ ದೊಡ್ಡ ಆಸ್ಪತ್ರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ವಿದೇಶದಿಂದ ಕಳೆದ ಮೂರು ದಿನಗಳಿಂದ ಬೆಂಗಳೂರಿಗೆ ಬಂದ ಪ್ರಯಾಣಿಕರು 3,116. ಕಳೆದ ಹನ್ನೊಂದು ದಿನಗಳಲ್ಲಿ ಮಂಗಳೂರು ನಿಲ್ದಾಣ ಹೊರತು ಪಡಿಸಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದವರು ಸುಮಾರು 43 ಸಾವಿರ ಪ್ರಯಾಣಿಕರು. ಇದರಲ್ಲಿ ಪ್ರವಾಸೀ ವೀಸಾದಲ್ಲಿ ಹೋಗಿ ಬಂದವರೂ ಇದ್ದಾರೆ.

ಬೆಂಗಳೂರು ಕೇಂದ್ರ ಡಿಸಿಪಿ ಇಶಾ ಪಂತ್
ವಿದೇಶದಿಂದ ಬಂದವರಿಂದಲೇ ಸೋಂಕು ಹರಡುತ್ತಿರುವುದರಿಂದ, ಎಲ್ಲರನ್ನೂ, ಅಂದರೆ, 43 ಸಾವಿರ ಪ್ರಯಾಣಿಕರನ್ನು ಟೆಸ್ಟ್ ಗೆ ಒಳಪಡಿಸುವುದು ಕಷ್ಟದ ಮಾತು. ಆದರೆ, ಅಟ್ಲೀಸ್ಟ್ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಬಹುದು. ಹಾಗಾಗಿ, ಬಂದಿಳಿದ ಎಲ್ಲಾ ಪ್ರಯಾಣಿಕರ ಅಡ್ರೆಸ್ ಹುಡುಕುವುದು ದೊಡ್ಡ ಸಾಹಸವೇ ಸರಿ. ಇದನ್ನು ಬೆಂಗಳೂರು ಕೇಂದ್ರ (ಆಗ್ನೇಯ) ಡಿಸಿಪಿ ಇಶಾ ಪಂತ್ ಮಾಡಿದ್ದಾರೆ.

ಕೊರಾನಾ, ಕ್ವಾರಂಟೈನ್ ಗೆ ಒಳಗಾಗುವಂತೆ ಸೂಚಿಸಿದ್ದಾರೆ
ಬೆಂಗಳೂರಿಗೆ ಬಂದಿಳಿದ 43 ಸಾವಿರ ಪ್ರಯಾಣಿಕರ ಪೈಕಿ, ಸುಮಾರು 21ಸಾವಿರಕ್ಕೂ ಹೆಚ್ಚು ಪ್ರಯಾಣಿಕರ ಅಡ್ರೆಸ್ ಅನ್ನು ಏರ್ಪೋರ್ಟ್ ಅಧಿಕಾರಿಗಳಿಂದ ತಿಳಿದುಕೊಂಡು, ಅವರೆಲ್ಲರನ್ನೂ ಸಂಪರ್ಕಿಸಿ, ಕ್ವಾರಂಟೈನ್ ಗೆ ಒಳಗಾಗುವಂತೆ ಇಶಾ ಪಂತ್ ಸೂಚಿಸಿದ್ದಾರೆ. ವಿವಿಧ ತಂಡವನ್ನು ರಚಿಸಿ, ಅಂತಹ ಪ್ರಯಾಣಿಕರ ಮನೆಯ ಸುತ್ತ ಗಸ್ತು ತಿರುಗಲು ಆದೇಶಿಸಿದ್ದಾರೆ.

ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಡಿಸಿಪಿ ಇಶಾ ಪಂತ್ ಜನಮೆಚ್ಚುವ ಕೆಲಸ
ಇಷ್ಟೇ ಅಲ್ಲದೇ, ಪೊಲೀಸ್ ತಂಡಗಳಿಗೆ ನಿರಂತರ ನಿಗಾ ವಹಿಸಲು ಸೂಚಿಸಿದ್ದು, ಆಗೊಮ್ಮೆ..ಈಗೊಮ್ಮೆ, ಸರ್ಪ್ರೈಸ್ ಚೆಕ್ ಮಾಡಲೂ ಹೇಳಿದ್ದಾರೆ. ಜೊತೆಗೆ, ಈಗಾಗಲೇ ಕೈಗೆ ಸೀಲ್ ಹಾಕಿಕೊಂಡವರು ಮನೆಯಿಂದ ಹೊರಬಂದರೆ, ಅಂತವರ ವಿರುದ್ದ ಕ್ರಮ ತೆಗೆದುಕೊಳ್ಲಲೂ ಸೂಚಿಸಿದ್ದಾರೆ. ಆ ಮೂಲಕ, ಇಂತಹ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಡಿಸಿಪಿ ಇಶಾ ಪಂತ್ ಜನಮೆಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ.












Click it and Unblock the Notifications