2013ರಲ್ಲಿ ನಡೆದಿದ್ದ ಮಾನಸ ಕೊಲೆ ರಹಸ್ಯ ಬಯಲು
ಬೆಂಗಳೂರು, ಜನವರಿ 4: ಆರು ವರ್ಷಗಳ ಹಿಂದೆ ಕೆಂಪೇಗೌಡ ನಗರದಲ್ಲಿ ನಡೆದಿದ್ದ ಗೃಹಿಣಿ ಮಾನಸ ನಿಗೂಢ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಪ್ರಮುಖ ಆರೋಪಿಯನ್ನು ಸೆರೆಹಿಡಿಯುವುದರಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆಂಪೇಗೌಡ ನಗರದ ರಾಘವೇಂದ್ರ ಬಂಧಿತ, ಇವನ ಜೊತೆ ಕೊಲೆಯಲ್ಲಿ ಭಾಗಿಯಾಗಿದ್ದ ಮೊತ್ತೊಬ್ಬ ಆರೋಪಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಕೆಂಪೇಗೌಡನಗರದ ನಾಗಪ್ಪ ಬ್ಲಾಕ್ನ ಮಾನಸ ಅವರು, ತಮ್ಮ ಪತಿ ನಾಗರಾಜ್ ಮತ್ತು ಮಕ್ಕಳೊಂದಿಗೆ ನೆಲೆಸಿದ್ದರು.
2013 ಮಾರ್ಚ್ 19ರಂದು ಮಾನಸನ ಮನೆಗೆ ತನ್ನ ಸಹಚರನ ಜೊತೆ ನುಗ್ಗಿದ್ದ ರಾಘವೇಂದ್ರ, ಚಾಕು ತೋರಿಸಿ ಚಿನ್ನಾಭರಣ ನೀಡುವಂತೆ ಅವರಿಗೆ ಬೆದರಿಸಿದ್ದ, ರಕ್ಷಣೆಗೆ ಜೋರಾಗಿ ಕೂಗಿಕೊಳ್ಳಲು ಯತ್ನಿಸಿದ್ದರು.

ಈ ಹಂತದಲ್ಲಿ ಕೋಪಗೊಂಡ ಹಂತಕರು ಅವರನ್ನು ಉಸಿರುಗಟ್ಟಿಸಿ ಕೊಂದು ಬಳಿಕ ಮೃತರ ಮನೆಯಲ್ಲಿ 400 ಗ್ರಾಂ ಚಿನ್ನಾಭರಣ ಹಾಗೂ 1 ಲಕ್ಷ ನಗದು ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಾಲೆಗೆ ಹೋಗಿದ್ದ ಮಾನಸ ಅವರ ನಾಲ್ಕು ವರ್ಷದ ಮಗಳು ಮನೆಗೆ ಬಂದಾಗ ಮಲಗಿರುವ ತಾಯಿ ಏಳುತ್ತಿಲ್ಲ ಎಂದು ಅಳುತ್ತಾ ಕುಳಿತಿದ್ದಳು, ಇದನ್ನು ಗಮನಿಸಿದ ಮನೆ ಮಾಲೀಕರ ಪತ್ನಿ ಬಂದು ನೋಡಿದಾಗ ಮಾನಸ ಮೃತಪಟ್ಟಿದ್ದಳು .
ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ ಆ ದಿನ ಬೆಳಗ್ಗೆ ಮನೆಯ ಹೊರಗಡೆ ಚಪ್ಪಲಿ ಇದ್ದುದನ್ನು ಕೆಲ ನಿಮಿಷಗಳ ನಂತರ ವ್ಯಕ್ತಿಯೊಬ್ಬರು ಹೊರಗೆ ಹೋಗಿದ್ದನ್ನು ನೋಡಿದ್ದಾಗಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ನಡೆಸಿದರೂ ಆರೋಪಿಯ ಸುಳಿವು ಸಿಗಲಿಲ್ಲ.
2016ರಲ್ಲಿ ರಾಜರಾಜೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಒಂಟಿ ಮಹಿಳೆ ಕೊಲೆ ನಡೆದಿತ್ತು. ಆ ಪ್ರಕರಣದಲ್ಲಿ ಪೊಲೀಸರು ರಾಘವೇಂದ್ರನನ್ನು ಬಂಧಿಸಿದ್ದರು. ಜೈಲಿನಲ್ಲಿ ಇತರೆ ಕೈದಿಗಳೊಂದಿಗೆ ಮಾತನಾಡುತ್ತಿದ್ದಾಗ ಈ ವಿಷಯ ಬಾಯ್ಬಿಟ್ಟಿದ್ದಾನೆ. ಇದು ಪೊಲೀಸರ ಕಿವಿಗೂ ತಲುಪಿತ್ತು. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications