ಗುತ್ತಿಗೆ ಪೌರಕಾರ್ಮಿಕರಿಗೂ ಸರ್ಕಾರದಿಂದ ಹೆಲ್ತ್ಕಾರ್ಡ್: ಜಿ ಪರಮೇಶ್ವರ
ಬೆಂಗಳೂರು, ಫೆಬ್ರವರಿ 1: ಖಾಯಂ ನೌಕರರಿಗೆ ನೀಡುವಂತೆಯೇ ಗುತ್ತಿಗೆ ಪೌರಕಾರ್ಮಿಕರಿಗೂ ಕೂಡ ಸರ್ಕಾರದಿಂದ ಹೆಲ್ತ್ ಕಾರ್ಡ್ ಹಾಗೂ ಇತರೆ ಸೌಲಭ್ಯ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ಸದಾಶಿವನಗರ ಬಿಡಿಎ ಕ್ವಾಟ್ರಸ್ನಲ್ಲಿ ಗುತ್ತಿಗೆ ಪೌರ ಕಾರ್ಮಿಕ ಸಂಘಟನೆಯೊಂದಿಗೆ ಇಂದು ಸಭೆ ನಡೆಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ಗುತ್ತಿಗೆ ಪೌರಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಸರಕಾರಿ ರಜೆ ದಿನ ನೀಡುವುದು, ಗರ್ಭಿಣಿ ಯರಿಗೆ ವೇತನ ಸಹಿತ ರಜೆ, 250 ಕಾರ್ಮಿಕರ ಖಾಯಂಗೊಳಿಸುವುದು ಸೇರಿದಂತೆ ಹಲವು ಸಮಸ್ಯೆ ಮುಂದಿಟ್ಟಿದ್ದಾರೆ. ಅದನ್ನು ಪರಿಶೀಲಿಸುವ ಭರವಸೆ ನೀಡಿದ್ದೇನೆ ಎಂದರು.
ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಹೆಲ್ತ್ಕಾರ್ಡ್ ವಿತರಿಸಲುವುದು ಅನಿವಾರ್ಯವಿದ್ದು, ಈ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.
ಪೌರಕಾರ್ಮಿಕರ ಹೆಸರಲ್ಲಿ ಸಾಕಷ್ಟು ಸಂಘ ಸಂಸ್ಥೆಗಳು ತಲೆ ಎತ್ತಿವೆ. ಇದರಿಂದ ಬಿಬಿಎಂಪಿ ಆಡಳಿತಕ್ಕೂ ಕಷ್ಟವಾಗಿದೆ. ಹೀಗಾಗಿ ಒಂದೆರಡು ನೋಂದಣಿಯಾಗಿರುವ ಸಂಘಗಳನ್ನಷ್ಟೇ ಗುರುತಿಸಿ, ಪೌರಕಾರ್ಮಿಕರ ಪ್ರತಿ ನಿರ್ಧಾರಕ್ಕೂ ಗುರುತಿಸಿದ ಒಂದೆರಡು ಸಂಘಟನೆಗಳ ಅಭಿಪ್ರಾಯ ಸಂಗ್ರಹಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸರಕಾರ ಮಂಡಿಸುತ್ತಿರುವ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ರೈತರ ಸಾಲಮನ್ನಾ ಮಾಡುವ ನಿರ್ಧಾರ ಪ್ರಕಟಿಸಿದರೆ ಸೂಕ್ತ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಸಾಲಮನ್ನಾ ಮಾಡುವ ಅಭಿಪ್ರಾಯ ವ್ಯಕ್ತವಾಗಿದೆ. ಇಲ್ಲವೇ, ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದರು.
ಮತ್ತೊಂದೆಡೆ ಇಂದು ಲಕ್ಷಾಂತರ ಪದವಿದರರು ನಿರುದ್ಯೋಗಿಗಳಾಗಿದ್ದಾರೆ. ಇದಕ್ಕಾಗಿ ರಾಷ್ಟ್ರೀಯ ಪಾಲಿಸಿ ಘೋಷಿಸಬಹುದು. ದೇಶದ ಹಣಕಾಸು ಪರಿಸ್ಥಿತಿ ಕೆಳಮಟ್ಟಕ್ಕೆ ಕುಸಿದಿರುವುದರಿಂದ ಹಣಕಾಸು ಉತ್ತಮ ಗೊಳಿಸಲು ಕ್ರಮ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಒಟ್ಟಾರೆ ದೇಶದ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದ್ದರೆ ಉತ್ತಮ ಎಂದರು.