Breaking: ಬಿಜೆಪಿ ಭ್ರಷ್ಟೋತ್ಸವ ದಿನಕ್ಕೊಂದು ಹೊರಬರುತ್ತಿದೆ; ಕಾಂಗ್ರೆಸ್
ಬೆಂಗಳೂರು, ಆಗಸ್ಟ್ 26: ರಾಜ್ಯದಲ್ಲಿ 40% ಕಮಿಷನ್ ಹಗರಣದಲ್ಲಿ ಕರ್ನಾಟಕ ಕಾಂಗ್ರೆಸ್ ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಗುರಿಯಾಗಿಸಿಕೊಂಡು ಪ್ರಶ್ನೆ ಮಾಡುತ್ತಿದೆ.
ದಿನಕ್ಕೊಂದು ಹೊಸ ರೂಪ ತಳೆಯುತ್ತಿರುವ ಪ್ರಕರಣದಲ್ಲಿ ಕಾಂಗ್ರೆಸ್, ಬಿಜೆಪಿಯನ್ನು ಗುರಿಯಾಗಿಸಿಕೊಂಡು ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತಿದೆ. ದಿನಕ್ಕೊಂದು ಹೊಸ ಹೊಸ ಭ್ರಷ್ಟಾಚಾರ ವಿಚಾರಗಳು ಹೊರ ಬರುತ್ತಿವೆ ಎಂದು ವ್ಯಂಗ್ಯವಾಡಿದೆ.
Breaking: ಮೋದಿ ಮಾತು ಟೆಲಿಪ್ರಾಂಪ್ಟರ್ಗೆ ಮಾತ್ರ ಸೀಮಿತವೇ?
"ಬಿಜೆಪಿ ಭ್ರಷ್ಟೋತ್ಸವ ಧಾರಾವಾಹಿಯು ದಿನಕ್ಕೊಂದು ಎಪಿಸೋಡ್ನಂತೆ ಹೊರಬರುತ್ತಿದೆ. ಕೊಡಗಿನಲ್ಲಿ ಬಿಜೆಪಿಯ ಅಕ್ರಮದ ಮೊಟ್ಟೆ ಒಡೆದು ಭ್ರಷ್ಟಾಚಾರದ 'ಮರಿ' ಹೊರಬಂದಿದೆ" ಎಂದು ಆರೋಪಿಸಿದೆ.
"ಅಧಿಕಾರಿ ಲಂಚ ಪಡೆದು ಸಿಕ್ಕಿಬಿದ್ದರು, ಶಾಸಕ ಬೋಪಯ್ಯ ಆ ಅಧಿಕಾರಿಯಿಂದಲೇ ಲಂಚ ಪಡೆದರು! ಭ್ರಷ್ಟಾಚಾರದ ಆಟ ಚೆನ್ನಾಗಿದೆ!" ಎಂದು ಶಾಸಕ ಬೋಪಯ್ಯ ಅವರ ವಿರುದ್ಧ ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚಂಗಪ್ಪ ಮಾಡಿರುವ ಭ್ರಷ್ಟಾಚಾರದ ಆರೋಪವನ್ನು ಉಲ್ಲೇಖಿಸಿದೆ.
ಸುದ್ದಿವಾಹಿನಿಯೊಂದರ ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ, ನಿಮ್ಮ ಪಾರದರ್ಶಕ ತನಿಖೆ ಯಾವಾಗ..?" ಎಂದು ಪ್ರಶ್ನೆ ಮಾಡಿದೆ.
ಭ್ರಷ್ಟಾಚಾರ ಆರೋಪದಡಿ ಅಮಾನತು ಆಗಿದ್ದ ಇಂಜಿನಿಯರ್ ಶ್ರೀಕಂಠಯ್ಯ, ಮರು ನೇಮಕಕ್ಕೆ ವಿರಾಜಪೇಟೆ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ 2.5 ಕೋಟಿ ಲಂಚ ಪಡೆಯಲಾಗಿದೆ ಎಂದು ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚಂಗಪ್ಪ ಆರೋಪ ಮಾಡಿದ್ದಾರೆ.
ಇದನ್ನು ಆಧಾರವಾಗಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್, ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿದೆ.
ಗುರುವಾರವೂ ಪ್ರಧಾನಿ ಮೋದಿಯವರ ವಿರುದ್ಧ ಕಾಂಗ್ರೆಸ್ ಆಕ್ರೋಶ ಹೊರಹಾಕಿತ್ತು. "ಗುತ್ತಿಗೆದಾರರಷ್ಟೇ ಅಲ್ಲ, ಬಡ ಪೌರ ಕಾರ್ಮಿಕರೂ ಸಹ ಬಿಜೆಪಿ ಕಮಿಷನ್ ದಾಹಕ್ಕೆ ಬಲಿಯಾಗುತ್ತಿದ್ದಾರೆ ಎಂದಿತ್ತು.
ಪ್ರಧಾನಿ ನರೇಂದ್ರ ಮೋದಿಯರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ "ಮೊದಲು ಬರೆದ ಪತ್ರಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಗುತ್ತಿಗೆದಾರರು 2ನೇ ಬಾರಿಗೆ ಪ್ರಧಾನಿಗೆ ಪತ್ರ ಬರೆಯಲು ತೀರ್ಮಾನಿಸಿದ್ದಾರೆ. ನರೇಂದ್ರ ಮೋದಿಯವರೇ,"ನಾ ಖವುಂಗಾ, ನಾ ಖಾನೆದುಂಗಾ" ಎಂಬ ತಮ್ಮ ಮಾತು ಟೆಲಿಪ್ರಾಂಪ್ಟರ್ನಲ್ಲಿ ಮೂಡಿದ ಅಕ್ಷರಗಳು ಮಾತ್ರವೇ?" ಎಂದು ಟೀಕಿಸಿತ್ತು.
ಇತ್ತ, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಶೇಕಡಾ 40 ಪರ್ಸೆಂಟ್ ಕಮೀಷನ್ ಪಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದಾರೆ. ಕೆಂಪಣ್ಣ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕೂಡ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.